twitter
    For Quick Alerts
    ALLOW NOTIFICATIONS  
    For Daily Alerts

    ಸಿ.ಆರ್.ಸಿಂಹ ಬಗ್ಗೆ ಯಾರು ಏನು ಹೇಳಿದರು?

    By Rajendra
    |

    ಖ್ಯಾತ ನಟ, ರಂಗಕರ್ಮಿ ಸಿ.ಆರ್. ಸಿಂಹ ವಿಧಿವಶರಾಗಿದ್ದಾರೆ. ಎಪ್ಪತ್ತೆರಡು ವರ್ಷಗಳ ಸಾರ್ಥಕ ಬದುಕು ಕಂಡ ಸಿಂಹ ಅವರನ್ನು ಚಿತ್ರರಂಗದ, ರಂಗಭೂಮಿಯ ಹಲವಾರು ಕಲಾವಿದರು ತುಂಬ ಹತ್ತಿರದಿಂದ ಬಲ್ಲವರಾಗಿದ್ದರು. ಅವರ ನಿಧನಕ್ಕೆ ಚಿತ್ರರಂಗ ಹಾಗೂ ರಂಗಭೂಮಿ ಕಂಬನಿ ಮಿಡಿದಿದೆ.

    ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷ ಇದ್ದರೂ ಸ್ಟಾರ್ ಆಗದೆ ಅಪ್ಪಟ ಕಲಾವಿದನಾಗಿಯೇ ಉಳಿದ ಒಬ್ಬ ನಟ ಎಂದರೆ ಅದು ಸಿಂಹ ಎಂಬ ಮಾತನ್ನು ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ಹೇಳಿರುವುದು ನಿನಕ್ಕೂ ಅಕ್ಷರಶಃ ಸತ್ಯ. ಬಸವನಗುಡಿ ನ್ಯಾಶನಲ್ ಕಾಲೇಜು ವಿದ್ಯಾರ್ಥಿಯಾಗಿದ್ದ ಸಿಂಹ ಅವರು ಓದಿದ್ದು ಬಿ.ಎಸ್ಸಿ, ಬಿ.ಇ.

    ಶನಿವಾರ ಸಂಜೆ ಅವರ ಅಂತ್ಯಕ್ರಿಯೆಯನ್ನು ಬನಶಂಕರಿ ಚಿತಾಗಾರದಲ್ಲಿ ನೆರವೇರಿಸಲಾಗುತ್ತದೆ. ಅವರ ಪಾರ್ಥೀವ ಶರೀರವನ್ನು ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಅವರ ಪುತ್ರ ರಿತ್ವಿಕ್ ಸಿಂಹ ಹೇಳಿದ್ದಾರೆ. ಹಲವು ಗಣ್ಯರು ಸಿಂಹ ಅವರ ವ್ಯಕ್ತಿತ್ವವನ್ನು ತಮ್ಮದೇ ಆದಂತಹ ಪದಗಳಲ್ಲಿ ತೆರೆದಿಟ್ಟರು.

    ಸಿಂಹ ನೋ ಮೋರ್ ಎಂದು ಗದ್ಗದಿತರಾದ ಶ್ರೀನಾಥ್

    ಸಿಂಹ ನೋ ಮೋರ್ ಎಂದು ಗದ್ಗದಿತರಾದ ಶ್ರೀನಾಥ್

    ಅಣ್ಣನನ್ನು ಕಳೆದುಕೊಂಡ ತಮ್ಮ ಪ್ರಣಯರಾಜ ಶ್ರೀನಾಥ್ ಅವರು ಮಾತನಾಡುತ್ತಾ, ತುಂಬಾ ಬೇಸರ ತರಿಸಿದೆ. ಕನ್ನಡ ಚಿತ್ರರಂಗ ಬಡವಾಗಿದೆ. ಸಿಂಹ ನೋ ಮೋರ್ ನೋ ಮೋರ್ ಎಂದು ಅವರು ಗದ್ಗದಿತರಾದರು.

    ಕಂಬನಿ ಮಿಡಿದ ಅನಂತನಾಗ್

    ಕಂಬನಿ ಮಿಡಿದ ಅನಂತನಾಗ್

    ಅನಂತನಾಗ್ ಅವರು ಬಹಳ ದುಃಖದಿಂದಲೇ ತಮ್ಮ ಮಾತನ್ನು ಆರಂಭಿಸಿದರು. ಅವರ ಜೊತೆ ಬಹಳ ಕಾಲ ಕಳೆದಿದ್ದೇನೆ. ಪ್ರತಿಯೊಂದು ಕ್ಷಣವೂ ಅಮೂಲ್ಯ. ಮಾತನಾಡಲು ಶುರು ಮಾಡಿದರೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಸರಳ ಜೀವನ ನಡೆಸುತ್ತಿದ್ದರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ, ರಂಗಭೂಮಿ ಬಡವಾಗಿದೆ ಎಂದರು.

    ಭಾವನೆಗಳನ್ನು ಮೀಟಿದ ನಟಿ ಭವ್ಯಾ

    ಭಾವನೆಗಳನ್ನು ಮೀಟಿದ ನಟಿ ಭವ್ಯಾ

    ನಟಿ ಭವ್ಯಾ ಅವರು ಮಾತನಾಡುತ್ತಾ ಸಿಂಹ ಜೊತೆಗಿನ ಅನುಭವಗಳ ನೆನಪನ್ನು ಮೀಟಿದರು. ನನ್ನ ಅವರ ಕಾಂಬಿನೇಷನ್ ಚಿತ್ರಗಳು ಬಹಳಷ್ಟು ಬಂದಿವೆ. ಅವರಿಂದಲೇ ನಾನು ಅಭಿನಯ ಕಲಿತಿದ್ದು. ನೀ ಬರೆದ ಕಾದಂಬರಿ ಚಿತ್ರದಲ್ಲಿ ಸಿಗಾರ್ ಹೇಗೆ ಸೇದಬೇಕು ಎಂದು ಮಿರರ್ ಮುಂದೆ ನಿಂತು ಪ್ರಾಕ್ಟೀಸ್ ಮಾಡಿಕೊಳ್ಳುತ್ತಿದ್ದದ್ದು ಇನ್ನೂ ನೆನಪಿದೆ. ಪಾತ್ರದಲ್ಲಿ ಅವರು ತುಂಬಾ ತಾದಾತ್ಮದಿಂದ ತೊಡಗಿಕೊಳ್ಳುತ್ತಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿಕೊಡಲಿ ಎಂದರು.

    ಸಿಂಹನಿಗೆ ಸಿಂಹನೇ ಸಾಟಿ ಎಂದ ಗಿರಿಜಾ ಲೋಕೇಶ್

    ಸಿಂಹನಿಗೆ ಸಿಂಹನೇ ಸಾಟಿ ಎಂದ ಗಿರಿಜಾ ಲೋಕೇಶ್

    ಗಿರಿಜಾ ಲೋಕೇಶ್ ಅವರು ಮಾತನಾಡುತ್ತಾ, ಸಿಂಹನಿಗೆ ಸಿಂಹನೇ ಸಾಟಿ. ಲೋಕೇಶ್, ಕಪ್ಪಣ್ಣ ಜೊತೆ 'ನಟರಂಗ' ಕಟ್ಟಿದ ಸಿಂಹ ಅವರು ಹಲವಾರು ರಂಗಪ್ರಯೋಗಗಳನ್ನು ಮಾಡಿದರು. ಅವರ ಅಗಲಿಕೆಯಿಂದ ತುಂಬಾ ನೋವಾಗುತ್ತಿದೆ. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ.

    ನಂಬುವುದಕ್ಕೇ ಆಗುತ್ತಿಲ್ಲ ಎಂದ ಶ್ರುತಿ

    ನಂಬುವುದಕ್ಕೇ ಆಗುತ್ತಿಲ್ಲ ಎಂದ ಶ್ರುತಿ

    ಶ್ರುತಿ ಅವರು ಮಾತನಾಡುತ್ತಾ, ಅಷ್ಟೊಂದು ಕಮಿಟ್ ಮೆಂಟ್ ಉಳ್ಳ ವ್ಯಕ್ತಿಯನ್ನು ನಾನು ಇದುವರೆಗೂ ನೋಡಿಲ್ಲ. ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಇಂತಹ ವಿಷಯ ಗೊತ್ತಿರಲಿಲ್ಲ ಎಂಬಂತಿರಲಿಲ್ಲ. ನನ್ನ ಜೊತೆ ಆಕ್ಟ್ ಮಾಡಬೇಕಾದಾಗಲೆಲ್ಲಾ ಅಂಕಲ್ ತುಂಬಾ ಸಂತಸಪಡುತ್ತಿದ್ದರು. ರಾಜಕೀಯ, ಸಾಮಾಜಿಕ ಯಾವುದೇ ವಿಷಯವಿರಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅಂತಹ ವ್ಯಕ್ತಿ ಈಗ ನಮ್ಮೊಂದಿಗಿಲ್ಲ ಎಂದರೆ ನಂಬುವುದಕ್ಕೇ ಆಗುತ್ತಿಲ್ಲ.

    ಕಲೆಗಾಗಿ ಬದುಕಿದ ವ್ಯಕ್ತಿ ಸಿಂಹ: ದ್ವಾರಕೀಶ್

    ಕಲೆಗಾಗಿ ಬದುಕಿದ ವ್ಯಕ್ತಿ ಸಿಂಹ: ದ್ವಾರಕೀಶ್

    ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರು ಮಾತನಾಡುತ್ತಾ, ಕಲೆಗಾಗಿ ಬದುಕಿದ ವ್ಯಕ್ತಿ. ನನ್ನ ನಿರ್ದೇಶನದ 15 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರು.

    ಕಲಾವಿದರನ್ನು ಬೆಳೆಸಿದ ಖ್ಯಾತಿ ಅವರದು

    ಕಲಾವಿದರನ್ನು ಬೆಳೆಸಿದ ಖ್ಯಾತಿ ಅವರದು

    ಅಶ್ವಮೇಧ ಚಿತ್ರದಲ್ಲಿ ಹೃದಯ ಸಮುದ್ರ ಕಲಕಿ ಹೊತ್ತಿತು ದ್ವೇಷದ ಬೆಂಕಿ ದ್ವೇಷಾಗ್ನಿ ಜ್ವಾಲೆ ಉರಿದುರಿದು....ಈ ಹಾಡಿನ ಬಗ್ಗೆ ಸಿಂಹ ಅವರು ಅದೆಷ್ಟು ಸಲ ಸಭೆ ಸಮಾರಂಭಗಳಲ್ಲಿ ಹೇಳಿದ್ದಾರೋ ಲೆಕ್ಕವೇ ಇಲ್ಲ. ತಮ್ಮ ವೃತ್ತಿ ಬದುಕಿನಲ್ಲಿ ಬ್ರೇಕ್ ಕೊಟ್ಟ ಸಿಂಹ ಅವರ ಬಗ್ಗೆ ಕುಮಾರ ಬಂಗಾರಪ್ಪ ಮಾತನಾಡುತ್ತಾ, ಎಲ್ಲರ ಬಳಿಯೂ ಸ್ನೇಹಪೂರ್ವಕವಾಗಿದ್ದರು. ಕಲಾವಿದರನ್ನು ಬೆಳೆಸಿದ ಖ್ಯಾತಿ ಅವರದು. ಗುರುಗಳಾಗಿ, ಸಂಗೀತಗಾರರಾಗಿ ಎಲ್ಲಾ ಪ್ರಕಾರಗಳಲ್ಲಿ ಅವರಿಗೆ ಪ್ರವೇಶವಿತ್ತು. ಬಹಳ ಚೆನ್ನಾಗಿ ಹಾಡುತ್ತಿದ್ದರು. ನಮ್ಮ ಗುರುಗಳು ನನನ್ನು ಬಿಟ್ಟು ಹೋಗಿದ್ದಾರೆ. ಆಸ್ಪತ್ರೆಗೆ ಹೋದಾಗ ಸಾರ್ ಸಾರ್ ಎಂದು ಕರೆದೆ ಅವರು ತನ್ನನ್ನು ಗುರುತಿಸಲಿಲ್ಲ. ಕಡೆಗೆ ವಾಪಸ್ ಬರುವಾಗ ಕಣ್ಣು ತೆಗೆದರು. ಆಗ ಆದ ಸಂತೋಷ ಅಷ್ಟಿಷ್ಟಲ್ಲ ಎಂದು ತಮ್ಮ ಗುರುಗಳನ್ನು ನೆನಸಿಕೊಂಡರು.

    ಸತ್ತವರನ್ನು ಮರೆತರೆ ಮತ್ತೆ ಕೊಂದಂತೆ

    ಸತ್ತವರನ್ನು ಮರೆತರೆ ಮತ್ತೆ ಕೊಂದಂತೆ

    ಪತ್ರಕರ್ತ, ಲೇಖಕ ರವಿ ಬೆಳಗೆರೆ ಮಾತನಾಡುತ್ತಾ, ತುಂಬ ಸ್ನೇಹ ಜೀವಿ, ನನ್ನ ಪತ್ನಿ ಅವರ ಪರಮಾಭಿಮಾನಿ. ತುಘಲಕ್ ನಾಟಕ ಭಿನ್ನ ರಂಗಪ್ರಯೋಗ. ನಾನೇನಾದರೂ ಬಣ್ಣ ಹಚ್ಚಿದ್ದರೆ ಅದಕ್ಕೆ ಸಿಂಹ ಅವರೇ ಕಾರಣ. ಕನ್ನಡ ಚಿತ್ರರಂಗ ಅನೇಕ ಜೀವಗಳನ್ನು ಕಳೆದುಕೊಂಡಿದೆ. ಸತ್ತವರನ್ನು ಮರೆತರೆ ಮತ್ತೆ ಕೊಂದಂತೆ ಎಂಬ ಮಾತಿದೆ. ಅವರಿಗೆ ತಮ್ಮ ಗೌರವ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದೇವೆ.

    ರಾಮ ಲಕ್ಷ್ಮಣ ನೆನಪಿಸುತ್ತಿದ್ದ ಅಣ್ಣತಮ್ಮಂದಿರು

    ರಾಮ ಲಕ್ಷ್ಮಣ ನೆನಪಿಸುತ್ತಿದ್ದ ಅಣ್ಣತಮ್ಮಂದಿರು

    ನಟಿ ಜಯಮಾಲಾ ಅವರು ಮಾತನಾಡುತ್ತಾ, ಈಗಲೂ ಬಹಳ ನೋವಾಗುತ್ತಿದೆ. ಅವರು ಇಲ್ಲ ಎಂಬುದು ಬಹಳ ದುಃಖದ ಸಂಗತಿ. ಬಹಳ ಒಳ್ಳೆಯ ಮನುಷ್ಯ. ಅತ್ಯಂತ ಸರಳ ವ್ಯಕ್ತಿ, ತಮ್ಮ ಕೆಲಸ ಆಯಿತು ತಾವಾಯಿತು ಎಂಬಂತಿದ್ದರು. ಅಣ್ಣತಮ್ಮಂದಿರನ್ನು ನೋಡಿದಾಗ ರಾಮ ಲಕ್ಷ್ಮಣ ನೆನಪಾಗುತ್ತಿದ್ದರು. ಎಲ್ಲರಿಗೂ ಆದರ್ಶವಾಗಿದ್ದರು. ತಮ್ಮ ವೃತ್ತಿಯನ್ನು ಅತ್ಯಂತ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದರು. ಅವರ ಉಡುಗೆ ತೊಡುಗೆ ಅವರ ನಡವಳಿಕೆ ಎಲ್ಲವೂ ಸರಳವಾಗಿತ್ತು. ಉದ್ಯಮದ ಬಗ್ಗೆ ಅವರು ತೋರುವಂತಹ ಪ್ರೀತಿ, ಆದರ ಎಲ್ಲರೂ ಮೆಚ್ಚುವಂತಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಸೃಜನಶೀಲ ಮನುಷ್ಯ, ಚಿಂತಕ. ಅವರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದರು.

    English summary
    Kannada films veteran actor C.R Simha (72) passes away on 28th February, 2014 at Sevakshetra Hospital in Banashankari in Bangalore. The actor is fighting prostate cancer for the last one and a half years. Here is the Sandalwood reaction.
    Saturday, March 1, 2014, 12:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X