ಬದಲಾಗುತ್ತಾ ನಿರ್ಧಾರ, ಈ ವರ್ಷ ಕೂಡ ಬಿಗ್ ಬಾಸ್ ನಿರೂಪಣೆ ಮಾಡ್ತಾರಾ ಸುದೀಪ್ ? ರೂಪೇಶ್ ರಾಜಣ್ಣ ಹೇಳಿದ್ದೇನು ?
ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು. ಕರುನಾಡಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಪ್ರಮುಖವಾದ ಕಾರಣ ಸುದೀಪ್. ಕಳೆದ ಹನ್ನೊಂದು ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು
ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ. ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ನಿದ್ರೆಯನ್ನು ಕೂಡ ಮರೆತು ಬಿಗ್ ಬಾಸ್ಗೋಸ್ಕರ ಬೆವರು ಸುರಿಸಿದ್ಧಾರೆ.

ಇನ್ನು, ಸುದೀಪ್ ಅವರಿಗೆ ಬಿಗ್ ಬಾಸ್ ಸುದೀಪ್ ಅವರ ಪಾಲಿಗೆ ಸೈಡ್ ಪ್ರಾಜೆಕ್ಟ್ ಆಗಿರಲಿಲ್ಲ. ಬದುಕಿನ ಬಹುಮುಖ್ಯವಾದ ಭಾಗವಾಗಿತ್ತು. ಖುದ್ದು ಸುದೀಪ್ ಈ ಮಾತನ್ನು ಈ ಹಿಂದೆ ಹೇಳಿದ್ದರು ಕೂಡ. ಆದರೆ ಅದೇನಾಯ್ತೋ ?
ಕಳೆದ ವರ್ಷ ಸುದೀಪ್ ಈ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಿದರು. ಇದೇ ಕೊನೆ ಮತ್ತೆ ಈ ವೇದಿಕೆಯನ್ನು ನಾನು ಹತ್ತಲಾರೆ ಎಂದು ಹೇಳಿ ಎಲ್ಲರನ್ನು ಅಚ್ಚರಿಗೆ ದೂಡಿದರು. ಇನ್ನು, ಸುದೀಪ್ ಬಿಗ್ ಬಾಸ್ಗೆ ವಿದಾಯ ಹೇಳುತ್ತಿದ್ದಂತೆಯೇ ಮುಂದಿನ ಸೀಸನ್ನ ನಿರೂಪಣೆಯನ್ನು ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆ ಎದ್ದಿತ್ತು.
ಸುದೀಪ್ ಬದಲು ರಿಷಬ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ಬಿಗ್ ಬಾಸ್ ಜವಾಬ್ಧಾರಿ ವಹಿಸಿಕೊಳ್ಳಬಹುದು ಎನ್ನುವ ಸುದ್ದಿ ಸದ್ದು ಮಾಡಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಹೆಸರು ಕೂಡ ಕೇಳಿ ಬಂದಿತ್ತು. ಈ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಈ ವರ್ಷ ಕೂಡ ಸುದೀಪ್ ಬಿಗ್ ಬಾಸ್ ಸಾರಥ್ಯ ವಹಿಸಿಕೊಳ್ಳುವ ವಿಶ್ವಾಸವನ್ನು ಕನ್ನಡ ಪರ ಹೋರಾಟಗಾರ ಮತ್ತು ಬಿಗ್ ಬಾಸ್ ಒಂಬತ್ತನೇ ಸೀಸನ್ನ ಸ್ಫರ್ಧಿ ರೂಪೇಶ್ ರಾಜಣ್ಣ ವ್ಯಕ್ತಪಡಿಸಿದ್ದಾರೆ.
ಹೌದು, ಫಿಲ್ಮಿಬೀಟ್ ಕನ್ನಡಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿರುವ ರೂಪೇಶ್ ರಾಜಣ್ಣ, ಸುದೀಪ್ ಅವರಿಲ್ಲದೇ ಬಿಗ್ ಬಾಸ್ ಕಾರ್ಯಕ್ರಮವನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಗೆ ಸುದೀಪ್ ಮೇಷ್ಟ್ರು ಇದ್ದಂತೆ ಆ ಮನೆಯಲ್ಲಿ ಇದ್ದಾಗ ನಮ್ಮ ಸರಿ ತಪ್ಪುಗಳು ನಮಗೆ ಗೊತ್ತಾಗುತ್ತಿರಲಿಲ್ಲ, ಸುದೀಪ್ ಅವರು ತಿದ್ದಿ ತೀಡುವ ಕೆಲಸ ಮಾಡುತ್ತಿದ್ದರು ಎಂದು ಹೇಳಿರುವ ರೂಪೇಶ್ ರಾಜಣ್ಣ ಎರಡು ವಾರಕ್ಕೆ ಮನೆಯಾಚೆ ಬರಬೇಕಿದ್ದ ನಾನು ಹದಿನಾಲ್ಕು ವಾರ ಅಲ್ಲಿ ಉಳಿಯೋಕೆ ಸುದೀಪ್ ಅವರೇ ಕಾರಣ ಎಂದು ಹೇಳಿದ್ದಾರೆ.
ಆ ಸಂದರ್ಭದಲ್ಲಿ ಸುದೀಪ್ ಅವರಿಗೆ ಬೇಜಾರಾಗಿರಬಹುದು, ಏನಾಗಿದೆ ಎನ್ನುವುದು ಗೊತ್ತಿಲ್ಲ ಎಂದಿರುವ ರೂಪೇಶ್ ರಾಜಣ್ಣ, ಜನರ ಒತ್ತಾಯ, ಕನ್ನಡಿಗರ ಒತ್ತಾಯ, ಬಿಗ್ ಬಾಸ್ ಪ್ರೇಕ್ಷಕರ ಒತ್ತಾಯಕ್ಕೆ ಮಣಿದು ಸುದೀಪ್ ಅವರು ನಿರ್ಧಾರ ಬದಲಿಸುತ್ತಾರೆ, ಈ ವರ್ಷ ಕೂಡ ಅವರೇ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ.
ಇನ್ನು ರಮೇಶ್ ಅರವಿಂದ್, ಗಣೇಶ್ ಮತ್ತು ರಿಷಬ್ ಶೆಟ್ಟಿ ಈ ಮೂವರಲ್ಲಿ ಈ ಬಾರಿಯ ಬಿಗ್ ಬಾಸ್ ಸುದೀಪ್ ಅವರ ಬದಲು ಯಾರು ನಿರೂಪಣೆ ಮಾಡಬಹುದು ಎನ್ನುವ ಪ್ರಶ್ನೆಗೆ ಕೂಡ ಉತ್ತರವನ್ನು ನೀಡಿರುವ ರೂಪೇಶ್ ರಾಜಣ್ಣ ಮೂವರದ್ದು ಬೇರೆ ಬೇರೆ ವ್ಯಕ್ತಿತ್ವ, ಯಾರೇ ಮಾಡಿದರೂ ಚೆನ್ನಾಗಿರುತ್ತೆ ಎಂದು ಹೇಳಿದ್ದಾರೆ. ನನ್ನ ಪ್ರಕಾರ ನನಗೆ ಬಲವಾದ ನಂಬಿಕೆ ಇದೆ ಈ ವರ್ಷ ಕೂಡ ಸುದೀಪ್ ಅವರೇ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ರೂಪೇಶ್ ರಾಜಣ್ಣ ಬಿಗ್ ಬಾಸ್ ಮತ್ತು ಸುದೀಪ್ ಬಗ್ಗೆ ಹೇಳಿದ್ದೇನು ?
ಅಂದ್ಹಾಗೇ ಕಳೆದ ವರ್ಷ ಇದೇ ನನ್ನ ಕೊನೆಯ ಬಿಗ್ ಬಾಸ್ ಎಂದು ಸುದೀಪ್ ಬಾಂಬ್ ಎಸೆದಾಗ ಇದೇ ರೂಪೇಶ್ ರಾಜಣ್ಣ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸಂದೇಶವನ್ನು ರವಾನೆ ಮಾಡಿದ್ದರು.ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ರೂಪೇಶ್ ರಾಜಣ್ಣ ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳಲು ಬಿಗ್ ಬಾಸ್ ಆಯೋಜಕರು ಒಪ್ಪಿಕೊಂಡಿದ್ಧಾರೆ ಎಂದು ಹೇಳಿದ್ದರು. ಕನ್ನಡದ ಪರವಾಗಿ ನಿಂತ ಕಿಚ್ಚ ಸುದೀಪ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಹೇಳಿದ್ದರು.
ಮುಂದುವರೆದು ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ, ಬದಲಾವಣೆ ನೀವೇ ನೋಡುವಿರಿ ಎಂದು ಕೂಡ ರೂಪೇಶ್ ರಾಜಣ್ಣ ಹೇಳಿದ್ದರು. ರೂಪೇಶ್ ರಾಜಣ್ಣ ಅವರ ಈ ಸಾಲುಗಳನ್ನು ಓದಿದ ಅನೇಕರು ಬಿಗ್ ಬಾಸ್ ಆಯೋಜಕರಿಂದ ಆದ ಆ ಪ್ರಮಾದವಾದರೂ ಏನು ಎನ್ನುವ ಪ್ರಶ್ನೆಯನ್ನು ಮಾಡಿದ್ದರು. ಬಿಗ್ ಬಾಸ್ ಆಯೋಜಕರಿಂದ ಸುದೀಪ್ ಅವರಿಗೆ ಅವಮಾನ ಆಗಿರಬಹುದು ಎನ್ನುವ ಚರ್ಚೆಯನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಲವರು ಮಾಡಿದ್ದರು.
ಯಾಕೆಂದರೆ ಸುದೀಪ್ ಗೌರವ ಇಲ್ಲದ ಕಡೆ ಒಂದು ಕ್ಷಣ ಕೂಡ ಇರುವವರಲ್ಲ. ಸುದೀಪ್ ವ್ಯಕ್ತಿಯಾಗಿ ಗಳಿಸಿರುವ ಜನಪ್ರಿಯತೆಯ ಅಂಥದ್ದು. ಹೀಗಾಗಿಯೇ ಸುದೀಪ್ ಅವರ ಸಹನೆಯನ್ನು ಮೀರಿ ಅವರನ್ನು ನಡೆಸಿಕೊಳ್ಳಲಾಗಿದೆಯಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿತ್ತು. ಇದರ ನಡುವೆ ರೂಪೇಶ್ ರಾಜಣ್ಣ ಸುದೀಪ್ ಬಿಗ್ ಬಾಸ್ ನ ಮುಂದುವರೆಸಬಹುದು ಎಂಬ ಅರ್ಥದಲ್ಲಿ ಸುಳಿವು ನೀಡಿದ್ದರು. ಬದಲಾವಣೆಯನ್ನು ಸದ್ಯದಲ್ಲಿಯೇ ನೀವೇ ನೋಡುವಿರಿ ಎಂದು ಹೇಳಿದ್ದರು.
ಒಟ್ನಲ್ಲಿ ಸದ್ಯಕ್ಕೆ ರೂಪೇಶ್ ರಾಜಣ್ಣ ಮತ್ತೊಮ್ಮೆ ಸುದೀಪ್ ಬಿಗ್ ಬಾಸ್ಗೆ ಮರಳುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ಕೂಡ ಕನ್ನಡದ ಬಿಗ್ ಬಾಸ್ಗೆ ಸುದೀಪ್ ಅವರದ್ದೇ ಸಾರಥ್ಯ ಇರಲಿದೆ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆ ಬಿಗ್ ಬಾಸ್ನಿಂದ ದೂರವಾಗುವುದಾಗಿ ಹೇಳಿದ್ದ ಸುದೀಪ್, ತಮ್ಮ ಮನಸು ಬದಲಿಸುತ್ತಾರಾ ಎನ್ನುವ ಕುತೂಹಲ ಈಗ ಗರಿಗೆದರಿದೆ. ಸುದೀಪ್ ತಮ್ಮ ನಿರ್ಧಾರವನ್ನು ಬದಲಿಸಿ ಈ ಬಾರಿ ಕೂಡ ಬಿಗ್ ಬಾಸ್ನ ಹನ್ನೆರಡನೇ ಸೀಸನ್ನ ವಾರದ ಕಥೆಯನ್ನು ಹೇಳಬಹುದು ಎಂಬ ಆಶಾಭಾವನೆ ಸುದೀಪ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳಲ್ಲಿ ಮೂಡಿದೆ.
ಈ ವಿಚಾರವಾಗಿ ಸುದೀಪ್ ಪ್ರತಿಕ್ರಿಯೆ ನೀಡುತ್ತಾರಾ..? ತಮ್ಮ ನಿರ್ಧಾರ ಬದಲಿಸುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ. ಸುದೀಪ್ ಒಂದು ವೇಳೆ ನಾನು ಬರುವುದಿಲ್ಲ ಎಂದು ಮತ್ತೊಮ್ಮೆ ಖಂಡತುಂಡವಾಗಿ ಹೇಳಿದರೆ ಸುದೀಪ್ ಸ್ಥಾನವನ್ನು ಬಿಗ್ ಬಾಸ್ ನಲ್ಲಿ ಯಾರು ತುಂಬುತ್ತಾರೆ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ. ಉತ್ತರ ಶೀಘ್ರವೇ ಸಿಗುವ ಸಾಧ್ಯತೆ ಇದೆ. ಬಿಗ್ ಬಾಸ್ ಕಾರ್ಯಕ್ರಮ ಈ ವರ್ಷ ಕೂಡ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಶುರುವಾಗುವ ಎಲ್ಲ ಲಕ್ಷಣಗಳು ಇವೆ.
ಇನ್ನು ಈ ಬಾರಿ ಹಿಂದಿಯಲ್ಲಿ ಕಲರ್ಸ್ನಲ್ಲಿ ಬಿಗ್ ಬಾಸ್ ಪ್ರಸಾರವಾಗುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಾಗಿ ಕನ್ನಡದಲ್ಲಿ ಬಿಗ್ ಬಾಸ್ ಕಲರ್ಸ್ನಲ್ಲಿ ಪ್ರಸಾರವಾಗುತ್ತಾ ಅಥವಾ ಬೇರೆ ಚಾನೆಲ್ ಬಿಗ್ ಬಾಸ್ಗೆ ವೇದಿಕೆಯಾಗುತ್ತಾ ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ.


Click it and Unblock the Notifications











