ಆಗಸ್ಟ್ನಲ್ಲಿ ಬದಲಾಗುತ್ತಾ ಕನ್ನಡ ಚಿತ್ರರಂಗದ ಅದೃಷ್ಟ..? ಗರಿಗೆದರಿದ ಚಟುವಟಿಕೆ..!
ಸತತ ಸೋಲು ಮತ್ತು ವಿವಾದಗಳಿಂದ ಹೈರಾಣಾದ ಕನ್ನಡ ಚಿತ್ರರಂಗದಲ್ಲಿ ಈಗೀಗ ಭರವಸೆ ಮೂಡಿಸುವ ಕೆಲಸಗಳು ನಡೆಯುತ್ತಿವೆ. ಹಾಡು-ಟ್ರೇಲರ್- ಮೇಕಿಂಗ್ ಹೀಗೆ ಒಂದಿಲ್ಲೊಂದು ಕಾರಣಗಳಿಂದ ಕೆಲ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಉದಾಹರಣೆಗೆ ಭೀಮ.
ಹೌದು. ದುನಿಯಾ ವಿಜಯ್ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭೀಮ ಈ ಆಗಸ್ಟ್ 09ರಂದು ಬಿಡುಗಡೆಯಾಗಲಿದೆ. ಆರಂಭದಿಂದಲೂ ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳೆಲ್ಲವೂ ಮಾಸ್ ಪ್ರೇಕ್ಷಕರ ಬಾಯಲ್ಲಿ ನಲಿಯುತ್ತಿವೆ. ಇನ್ನೂ ಮೊನ್ನೆಯಷ್ಟೇ ಬಿಡುಗಡೆಯಾದ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ 'ಭೀಮ'ನ ಟ್ರೇಲರ್ ಎಲ್ಲರ ಚಿತ್ತವನ್ನೂ ಕದಿಯುತ್ತಿದೆ.

ಇನ್ನೂ ಭೀಮನ ಬೆನ್ನ ಹಿಂದೆಯೇ ತೆರೆಗೆ ಬರಲಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಕೂಡ ಗಾಂಧಿನಗರಕ್ಕೆ ಭರವಸೆಯ ಬೆಳಕಿನಂತೆ ಕಾಣುತ್ತಿದೆ. ಶ್ರೀನಿವಾಸ್ ರಾಜು ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಸಿನಿಮಾ ಹಾಡುಗಳ ಮೂಲಕವೇ ಆಗಲೇ ಪ್ರೇಕ್ಷಕರನ್ನು ತಲುಪಿದೆ. ಅದರಲ್ಲಿಯೂ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ, ಸರಿಗಮಪ ಖ್ಯಾತಿಯ ಜಸಕರಣ್ ಸಿಂಗ್ ಹಾಡಿರುವ ದ್ವಾಪರ ದಾಟುರ ಹಾಡು ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಇನ್ಸ್ಟಾ ರೀಲ್ಸ್ ನಲ್ಲಿ ವ್ಯಾಪಕವಾಗಿ ಜನಪ್ರಿಯತೆಯನ್ನೂ ಈ ಹಾಡು ಪಡೆದಿದೆ.
ಕೇವಲ ಇದೊಂದೇ ಹಾಡಲ್ಲ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಇರುವ ದ್ವಾಪರ ದಾಟುತ ಹೊರತು ಪಡಿಸಿ ಬಿಡುಗಡೆಯಾದ ಇನ್ನೂ ಮೂರು ಹಾಡುಗಳು ಕೂಡ ಪ್ರೇಕ್ಷಕರ ಗಮನವನ್ನೂ ಸೆಳಿಯುವಲ್ಲಿ ಯಶಸ್ವಿಯಾಗಿವೆ.

ಇನ್ನೂ.. ಗಣೇಶ್ ಮತ್ತು ವಿಜಯ್ ಇಬ್ಬರು ಒಂದು ಕಾಲದಲ್ಲಿ, ಜೊತೆಯಾಗಿಯೇ ಗೆದ್ದವರು. ಬಿದ್ದವರು. ಕನ್ನಡ ಚಿತ್ರರಂಗದತ್ತ ತಮ್ಮ ಚಿತ್ರಗಳ ಮೂಲಕ ಎಲ್ಲರನ್ನೂ ತಿರುಗಿ ನೋಡುವಂತೆಯೂ ಮಾಡಿದವರು.
ಇಂಥಾ ಗಣೇಶ್ ಮತ್ತು ವಿಜಯ್ ಮತ್ತೊಮ್ಮೆ ಜೊತೆಯಾಗಿಯೇ ಒಂದು ವಾರದ ಅಂತರದಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಹಮ್ಮ-ಬಿಮ್ಮು ತೊರೆದು ಒಟ್ಟಿಗೆ ತಮ್ಮ ಚಿತ್ರಗಳ ಪ್ರಚಾರವನ್ನೂ ಮಾಡುತ್ತಿದ್ದಾರೆ. ಯಾರಿಗೆ ಗೊತ್ತು.. ಮುಂಗಾರು ಮಳೆ ಮತ್ತು ದುನಿಯಾ ಮಾಡಿದ್ದ ಮ್ಯಾಜಿಕ್ ಕೃಷ್ಣಂ ಪ್ರಣಯ ಸಖಿ ಮತ್ತು ಭೀಮ ಕೂಡ ಮಾಡಿದರು ಮಾಡಬಹುದು.

ಕೇವಲ ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಮಾತ್ರವಲ್ಲ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾ ಕೂಡ ಕಾಲ ಕಾಲಕ್ಕೆ ಸದ್ದು ಮಾಡುತ್ತಾನೇ ಬರುತ್ತಿದೆ. ನಿನ್ನೆಯಷ್ಟೇ ಗೌರಿ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಇನ್ನೂ ಗೌರಿ, ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಸಿನಿಮಾ. ಮೊದಲ ಚಿತ್ರಕ್ಕೆ ಸಮರ್ಜಿತ್ ತನು ಮನ ಅರ್ಪಿಸಿ ಕೆಲಸ ಮಾಡಿದ್ದಾರೆ. ಚಿತ್ರದ ಟ್ರೇಲರ್ ನಲ್ಲಿ ಅವರ ಶ್ರಮ ಎದ್ದು ಕಾಣುತ್ತಿದೆ. ಸಮರ್ಜಿತ್ ಲಂಕೇಶ್ ಕನ್ನಡ ಚಿತ್ರರಂಗದ ಭರವಸೆಯ ನಾಯಕ ಎಂಬ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.ಕೃಷ್ಣಂ ಪ್ರಣಯ ಸಖಿ ಚಿತ್ರದ ಜೊತೆಯಲ್ಲಿಯೇ ಗೌರಿ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.
ಇನ್ನೂ.. ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸದ್ದು ಕೂಡ ಕಡಿಮೆ ಇಲ್ಲ. ಪ್ಯಾನ್ ಇಂಡಿಯಾ ಲೆವಲ್ನಲ್ಲಿ ಬಿಡುಗಡೆಯಾಗಲಿರುವ ಮಾರ್ಟಿನ್ ಚಿತ್ರದ ಟ್ರೇಲರ್ ಕೂಡ ನಿನ್ನೆ ಬಿಡುಗಡೆಯಾಗಿದೆ. ಮುಂಬೈನಲ್ಲಿ ನಿನ್ನೆಯ ಮಾರ್ಟಿನ್ ಅಬ್ಬರಕ್ಕೆ ಅನೇಕ ಕಡೆ ಮೆಚ್ಚುಗೆ ವ್ಯಕ್ತವಾಗಿದೆ. ಒಳಗೊಳಗೆ ಎಷ್ಟೇ ಬೇಸರ ಮುನಿಸು ಮಾರ್ಟಿನ್ ತಂಡದಲ್ಲಿ ಇದ್ದರೂ ಕೂಡ ಎ.ಪಿ.ಅರ್ಜುನ್ ಮತ್ತು ಧ್ರುವ ಈ ಬಾರಿ ಇನ್ನೊಮ್ಮೆ ಮ್ಯಾಜಿಕ್ ಮಾಡ್ತಾರೆ ಎನ್ನುವ ಭರವಸೆಯನ್ನೂ ಟ್ರೇಲರ್ ಹೆಚ್ಚಿಸಿದೆ.

ಒಟ್ಟಾರೆ ಆಗಸ್ಟ್ ಮೊದಲ ವಾರದಲ್ಲಿ ಕನ್ನಡ ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ಸಿನಿಮಾಗಳು ನಿರೀಕ್ಷೆಯನ್ನು ಕೂಡ ಹುಟ್ಟು ಹಾಕಿವೆ. ಈ ಸಿನಿಮಾಗಳು ಗಾಂಧಿನಗರ ಅಂದುಕೊಂಡತೆ ಗೆಲುವಿನ ದಡ ತಲುಪಿದರೆ ಕನ್ನಡ ಚಿತ್ರರಂಗದ ಉತ್ಸಾಹ ಪುಟಿದೇಳಲಿದೆ.


Click it and Unblock the Notifications











