ಬ್ರಾಹ್ಮಣರ ಬಗ್ಗೆ ಅವಹೇಳನ ಆರೋಪ: ನಟ ಚೇತನ್ ವಿರುದ್ಧ ದೂರು
ಒಂದಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ನಟ ಚೇತನ್ ಈಗ ಜಾತಿ ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡಿದ್ದಾರೆ. ಬ್ರಾಹ್ಮಣರ ವಿಚಾರವಾಗಿ ನಟ ಚೇತನ್ ಮಾಡಿರುವ ಟ್ವೀಟ್ ಈಗ ವಿವಾದ ಸೃಷ್ಟಿಸಿದ್ದು, ಬ್ರಾಹ್ಮಣ ಸಮುದಾಯ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ.
ನಟ ಚೇತನ್ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದ ಆರೋಪಿಸಿ, ಬ್ರಾಹ್ಮಣ ಸಮುದಾಯದ ಮುಖಂಡ ಸಚ್ಚಿದಾನಂದ ಮತ್ತು ತಂಡ ಇಂದು (ಜೂನ್ 7) ಪೋಲಿಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಬ್ರಾಹ್ಮಣಿಕೆ ಹಾಗೂ ಬ್ರಾಹ್ಮಣತ್ವ ಭಯೋತ್ವಾದಕತ್ವ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವಾಗಿದೆ. ಬ್ರಾಹ್ಮಣ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಮತ್ತೊಮ್ಮೆ ಬ್ರಾಹ್ಮಣರ ಬಗ್ಗೆ ಮಾತನಾಡದಂತೆ ನಟ ಚೇತನ್ ಗೆ ಎಚ್ಚರಿಗೆ ನೀಡಿದ್ದಾರೆ.

ನಟ ಚೇತನ್ ಹೇಳಿದ್ದನು?
ನಟ ಚೇತನ್ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ವಿಷಯದ ಕುರಿತು ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಚೇತನ್ ಅಗಾಗ ಅನೇಕರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇತ್ತೀಚಿಗೆ ಜಾತಿ ವಿಚಾರವಾಗಿ ಟ್ವೀಟ್ ಮಾಡಿದ್ದ ಚೇತನ್, ಅಂಬೇಡ್ಕರ್ ಮತ್ತು ಪೆರಿಯಾರ್ ಚಿಂತನೆಗಳನ್ನು ಹಂಚಿಕೊಂಡಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಉಪೇಂದ್ರ ಹೇಳಿಕೆ ಖಂಡಿಸಿದ್ದ ಚೇತನ್
ಇತ್ತೀಚಿಗೆ ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧವೂ ಚೇತನ್ ಸಿಡಿದೆದಿದ್ದರು. ಜಾತಿ ವಿಚಾರವಾಗಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಉಪೇಂದ್ರ ಜಾತಿ ಬಗ್ಗೆ ಮಾತನಾಡಿದ್ರೆ ಜೀವಂತವಾಗಿರುತ್ತೆ, ಮಾತನಾಡುವುದು ತಪ್ಪು ಎಂದು ಹೇಳಿದ್ದರು. ಉಪೇಂದ್ರ ಅವರ ಹೇಳಿಕೆಯಿಂದ ಸಿಟ್ಟಿಗೆದ್ದ ಚೇತನ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಉಪೇಂದ್ರ ಹೆಸರು ಹೇಳದೆ ಸೆಲೆಬ್ರಿಟಿ ಹೇಳಿದ್ದು ಎಂದು ತಿರುಗೇಟು ನೀಡಿದ್ದರು.

ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ ನಟ
'ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಿದ್ರೆ ಜೀವಂತವಾಗಿ ಉಳಿಯುತ್ತೆ, ಮಾತನಾಡದಿದ್ರೆ ಹೊರಟು ಹೋಗುತ್ತೆ. ಇದು ಎಷ್ಟು ಹಾಸ್ಯಾಸ್ಪದವಾಗಿದೆ. ಹಾಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಹಾಗೆ ಉಳಿಯುತ್ತೆ, ಮಾತನಾಡದಿದ್ರೆ ಅದು ಹೋಗುತ್ತೆ, ಸ್ತ್ರಿ ಭ್ರೂಣ ಹತ್ಯೆ ಬಗ್ಗೆ ಮಾತನಾಡದಿದ್ರೆ ಅದು ಹೋಗುತ್ತೆ, ಕೊರೊನಾ ಬಗ್ಗೆಯೂ ಹಾಗೆ ತಜ್ಞರು ಎಲ್ಲರೂ ಮಾತನಾಡುತ್ತಿದ್ದಾರೆ. ಬಹುಷ ಮಾತನಾಡದಿದ್ರೆ ಹೊರಟು ಹೋಗುತ್ತೆ ಅಂತ ಕಾಣುತ್ತೆ ಎಂದು ವ್ಯಂಗ್ಯ ಮಾಡಿದ್ದರು.
Recommended Video
ಉಪೇಂದ್ರ ಹೆಸರು ಹೇಳದೆ ಖಾರವಾಗಿ ಉತ್ತರಿಸಿದ್ದ ಚೇತನ್
'ಕಾಯಿಲೆ ಇದ್ದಾಗ ಅದನ್ನು ಗುರುತಿಸಬೇಕು. ಹಾಗೆ ಸಮಾಜದ ಕಾಯಿಲೆ ಜಾತಿ ವ್ಯವಸ್ಥೆ. ಅದನ್ನು ಗುರುತಿಸಿ ಅದನ್ನು ತೆಗೆದು ಹಾಕಬೇಕು. ಈ ವ್ಯಕ್ತಿಯ ಮಾತು ಎಷ್ಟು ಮಾನಸಿಕ ಪ್ರಬುದ್ಧತೆ ಇದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಬಡತನಕ್ಕೆ ಜಾತಿ ಲೇಪನ ಹಚ್ಚಬೇಡಿ ಎನ್ನುತ್ತಾರೆ. ಆದರೆ ಚರಂಡಿ ಸ್ವಚ್ಛ ಮಾಡುವರು ಯಾರು, ಪೌರ ಕಾರ್ಮಿಕರು ಯಾರು, ಕೂಲಿ ಮಾಡುವವರು ಯಾರು..ಅವರೆಲ್ಲ ಜನಿವಾರ ಹಾಕಿಕೊಂಡವರಾ ಇಲ್ಲ. ಪರಿಶಿಷ್ಟ ಜಾತಿ ಪಂಗಡದವರು, ಶೂದ್ರ, ಅತಿ ಶೂದ್ರರು. ಜಾತಿ ಮತ್ತು ಬಡತನಕ್ಕೂ ಎಷ್ಟು ಸಂಬಂಧವಿದೆ ಎಂದು ಕಾಣುವುದಿಲ್ಲ ಎಂದರೆ ಕುರುಡುತನ ಎಷ್ಟಿದೆ. ಬನ್ನಿ ಮೂಲೆ ಮೂಲೆ ಹೋಗಿ ಕರ್ನಾಟಕದ ಹೇಗಿದೆ ಎಂದು ತೋರಿಸುತ್ತೇನೆ. ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು.' ಎಂದು ಗುಡುಗಿದ್ದರು.


Click it and Unblock the Notifications











