ಬಿಗ್ಬಾಸ್ ತನಿಷಾ ಕುಪ್ಪಂಡ ವಿರುದ್ಧ ದೂರು ದಾಖಲು: ಕೂಡಲೇ ಬಂಧಿಸುವಂತೆ ಆಗ್ರಹ
ಇತ್ತೀಚೆಗೆ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಹೊಂದಿದ್ದ ಆರೋಪದಲ್ಲಿ ಬಂಧನವಾಗಿದ್ದರು. ಜೈಲು ಶಿಕ್ಷೆಯನ್ನು ಅನುಭವಿಸಿ ಬಳಿಕ ಜಾಮೀನು ಪಡೆದಿದ್ದರು. ಇದೀಗ ಮತ್ತೊಬ್ಬ ಬಿಗ್ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ದೂರು ದಾಖಲಾಗಿದೆ. ವರ್ತೂರು ಸಂತೋಷ್ ಜೊತೆ ಮಾತನಾಡುವ ವೇಳೆ ಆಕೆ ಬಳಿಸಿದ ಪದ ವಿವಾದಕ್ಕೆ ಕಾರಣವಾಗಿದ್ದು ಆಕೆಯ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಕುರಿತು ಮಾತನಾಡುತ್ತಾ ತನಿಷಾ, "ನೀನು ವಡ್ಡ ಅಲ್ಲ ಆದರೆ ವಡ್ಡನ ರೀತಿ ಆಕ್ಟ್ ಮಾಡುತ್ತೀಯ" ಎಂದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವಿಚಾರ ಭೋವಿ ಸಮುದಾಯದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದ್ದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಎಂಬುವವರು ತನಿಷಾ ವಿರುದ್ಧ ದೂರು ನೀಡಿದ್ದಾರೆ. ಕೂಡಲೇ ಆಕೆಯನ್ನು ಬಿಗ್ಬಾಸ್ ಮನೆಯಿಂದ ಹೊರಹಾಕಿ ಎಂದು ಆಗ್ರಹಿಸಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣೆ ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
"ತನಿಷಾ, ವಡ್ಡ ಎಂಬ ಪದ ಬಳಸುವ ಮೂಲಕ ಭೋವಿ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ. ಭೋವಿ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದೆ ಎಂದು ತಿಳಿದಿದ್ದರೂ ಸಹ ಅಪಮಾನ ಮಾಡಲಾಗಿದೆ. ಆಕೆಯನ್ನು ಈ ಕೂಡಲೇ ಬಿಗ್ಬಾಸ್ ಮನೆಯಿಂದ ಹೊರಗೆ ಕಳಿಸಬೇಕು, ಬಂಧಿಸಬೇಕು. ಭೋವಿ ಸಮುದಾಯಕ್ಕೆ ಮಾಡಲಾದ ಅಪಮಾನದ ವಿರುದ್ಧ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಭೋವಿ ಸಮುದಾಯವು ಪ್ರತಿಭಟನೆ ನಡೆಸಲಿದೆ" ಎಂದು ದೂರಿನಲ್ಲಿ ಹೇಳಲಾಗಿದೆ.
ದೂರುದಾರರಾದ ಪಿ. ಪದ್ಮಾ ಮಾಧ್ಯಮಗಳ ಜೊತೆ ಮಾತನಾಡಿ 08/11/2023ರ ಎಪಿಸೋಡ್ನಲ್ಲಿ ತನಿಷಾ, ಡ್ರೋನ್ ಪ್ರತಾಪ್ ಉದ್ದೇಶಿಸಿ 'ನೀನು ವಡ್ಡನೋ ದಡ್ಡಾನೋ' ಎನ್ನುವ ಪದ ಉಪಯೋಗಿಸಿದ್ದಾರೆ. ಕರ್ನಾಟಕ ರಾಜ್ಯದ ಎಲ್ಲಾ ಭೋವಿ ಸಮುದಾಯದ ಜನಾಂಗವನ್ನು ಅವಮಾನಕ್ಕೆ ಕಾರಣವಾಗಿದ್ದಾರೆ ತನಿಷಾ ಕುಪ್ಪಂಡರವರಿಗೆ ಭೋವಿ ಜನಾಂಗದ (ವಡ್ಡರ) ಕುರಿತು ಮಾತನಾಡುವ ಯಾವುದೇ ನೈತಿಕತೆಯು ಸಹ ಇಲ್ಲ. ಜಾತಿ ಜಾತಿಗಳನ್ನು ಜನಾಂಗದ ಬಗ್ಗೆ ಮಾತಾಡಿರುವುದು ಖಂಡನೀಯ" ಎಂದಿದ್ದಾರೆ.
8 ತಾರೀಖು ಕಾರ್ಯಕ್ರಮ ಪ್ರಸಾರವಾಗಿತ್ತು. ನನಗೆ ಹುಷಾರಿರಲಿಲ್ಲ. ಹಾಗಾಗಿ 12ನೇ ತಾರೀಖು ದೂರು ದಾಖಲಿಸಿದ್ದೆ. ಪೊಲೀಸರು ನನಗೆ ನೋಟಿಸ್ ನೀಡಿದ್ದರು. ಪ್ರಕರಣ ಸಂಬಂಧ ದಾಖಲೆ ಒದಗಿಸಲು, ಈಗ ಎಲ್ಲವನ್ನು ಒದಗಿಸಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಿಹಿಕಹಿ ಚಂದ್ರು ಅವರು ಇದೇ ರೀತಿ ವಡ್ಡ ಎನ್ನುವ ಪದ ಬಳಸಿದ್ದರು. ನಂತರ ಕ್ಷಮೆ ಕೇಳಿದ್ದರು. ತನಿಷಾ ಕೂಡ ಕ್ಷಮೆ ಕೇಳಬೇಕ, ಜೊತೆಗೆ ಬಿಗ್ಬಾಸ್ ಮನೆಯಿಂದ ಆಕೆಯನ್ನು ಹೊರಗೆ ಕಳುಹಿಸಬೇಕು" ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ನಟ ಉಪೇಂದ್ರ ಕೂಡ ಇದೇ ರೀತಿ ಫೇಸ್ಬುಕ್ ಲೈವ್ನಲ್ಲಿ ಮಾತನಾಡುವ ವೇಳೆ ಬಳಸಿದ್ದ ಪದದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ತಪ್ಪಿನ ಅರಿವಾಗಿ ನಟ ಉಪೇಂದ್ರ ಕ್ಷಮೆ ಕೇಳಿದರೂ ಅವರ ವಿರುದ್ಧ ಅಟ್ರಾಸಿಟಿ ದೂರುಗಳು ದಾಖಲಾಗಿದ್ದವು. ಬಂಧನಕ್ಕೆ ಆಗ್ರಹಿಸಿ ಕೆಲವೆಡೆ ಪ್ರತಿಭಟನೆಗಳು ಕೂಡ ನಡೆದಿತ್ತು. ಬಂಧನ ಭೀತಿಯಿಂದ ಉಪೇಂದ್ರ ಅಜ್ಞಾತದಲ್ಲಿದ್ದುಕೊಂಡು ವಕೀಲರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಬಳಿಕ ಹೈಕೋರ್ಟ್, ಉಪೇಂದ್ರ ವಿರುದ್ಧದ ಎಫ್ಐಆರ್ಗೆ ಮಧ್ಯಂತರ ತಡೆ ನೀಡಿತ್ತು.


Click it and Unblock the Notifications











