ಚಾಮುಂಡೇಶ್ವರಿಗೆ ಪ್ಯಾಂಟ್ ಶರ್ಟ್ ಹಾಕಿಸಿದ ರಕ್ಷಕ್ ಬುಲೆಟ್: ದೂರು ದಾಖಲು
ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಒಬ್ಬೊಬ್ಬರಾಗೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅದರಲ್ಲೂ ಬಿಗ್ ಬಾಸ್ ಕನ್ನಡ ಸೀಸನ್ 10 ಹಾಗೂ 11ರ ಸ್ಪರ್ಧಿಗಳ ವಿರುದ್ಧ ದೂರು ದಾಖಲಾಗುತ್ತಿದೆ. ಇತ್ತೀಚೆಗಷ್ಟೇ ವಿನಯ್ ಗೌಡ ಹಾಗೂ ರಜತ್ ಇಬ್ಬರು ಲಾಂಗ್ ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ವಿರುದ್ಧ ದೂರು ದಾಖಲಾಗಿದೆ.
ಕನ್ನಡ ಚಿತ್ರರಂಗದ ಹಾಸ್ಯ ನಟ ದಿವಂಗತ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಸಹ ಸ್ಪರ್ಧಿಯನ್ನು ಹೊಗಳುವ ಆತುರದಲ್ಲಿ ನಾಡದೇವಿ ಚಾಮುಂಡೇಶ್ವರಿ ದೇವಿಯನ್ನು ತಮ್ಮ ಡೈಲಾಗ್ನಲ್ಲಿ ಸೇರಿಕೊಂಡು ಹೇಳಿದ್ದಾರೆ. ಈ ಡೈಲಾಗ್ ಈಗ ರಕ್ಷಕ್ ಬುಲೆಟ್ಗೆ ಕಂಟಕವಾಗಿದೆ.

ರಿಯಾಲಿಟಿ ಶೋನಲ್ಲಿ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಅಪಮಾನ ಮಾಡಲಾಗಿದೆ ಎಂದು ಕೆಲವು ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಹಿಂದೂ ಕಾರ್ಯಕರ್ತ ಮಹೇಶ್ ಎಂಬುವವರು ರಕ್ಷಕ್ ಬುಲೆಟ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಬಳಿ ದೂರನ್ನು ದಾಖಲಿಸಿದ್ದಾರೆಂದು ವರದಿಯಾಗಿದೆ. ಅಷ್ಟಕ್ಕೂ ರಕ್ಷಕ್ ರಿಯಾಲಿಟಿ ಶೋ ವೇದಿಕೆ ಏನು ಹೇಳಿದ್ದಾರೆ? ಅಂತ ನೋಡುವುದಾರೇ,
ರಕ್ಷಕ್ ಡೈಲಾಗ್ ಬಿಡುವುದರಲ್ಲಿ ಎತ್ತಿದ ಕೈ ಅನ್ನೋದು ಗೊತ್ತಿರುವ ವಿಷಯವೇ ಈ ಕಾರಣಕ್ಕೆ ರಕ್ಷಕ್ ಆಗಾಗ ವಿವಾದಕ್ಕೆ ಸಿಕ್ಕಿಕೊಳ್ಳುವುದೂ ಉಂಟು. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ರಕ್ಷಕ್ ಬುಲೆಟ್ ಅನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದೂ ಇದೆ. ಈಗ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ರಕ್ಷಕ್ ಬುಲೆಟ್ ತನ್ನ ಸಹ ಸ್ಪರ್ಧಿಯನ್ನು ಹೊಗಳುವ ಸನ್ನಿವೇಶವಿತ್ತು. ಹೀಗಾಗಿ ದರ್ಶನ್ ನಟಿಸಿದ ಬುಲ್ ಬುಲ್ ಸಿನಿಮಾದ ಡೈಲಾಗ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಡೈಲಾಗ್ ಮಧ್ಯೆ ನಾಡದೇವಿ ಚಾಮುಂಡೇಶ್ವರಿ ತಾಯಿ ಹೆಸರನ್ನು ತಂದಿದ್ದಾರೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ರಕ್ಷಕ್ ಹೇಳಿದ ಡೈಲಾಗ್ನಲ್ಲಿ ಏನಿದೆ ಅಂತ ನೋಡುವುದಾದರೇ, "ನಿಮ್ಮನ್ನು ನೋಡುತ್ತಿದ್ದರೆ, ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು, ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟ್ ,ಶರ್ಟ್ ಹಾಕೊಂಡು, ಸ್ವಿಟ್ಜರ್ಲ್ಯಾಂಡ್ನಲ್ಲಿ ಟ್ರಿಪ್ ಹೊಡೆಯುತ್ತಿದ್ದಾಳೆ ಅಂತ ಅನಿಸುತ್ತಿದೆ." ಎಂದು ರಿಯಾಲಿಟಿ ಶೋ ವೇದಿಕೆ ಮೇಲೆ ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆಯೆಂದು ರಕ್ಷಕ್ ಬುಲೆಟ್ ಹಾಗೂ ವಾಹಿನಿಯ ಆಯೋಜಕರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ದಾಖಲಾಗಿದೆ.
ರಕ್ಷಕ್ ಬುಲೆಟ್ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಮಾತುಗಳನ್ನು ಆಡಿರುತ್ತಾರೆ. ಹಿಂದೂ ಧರ್ಮ ಮಾತೃಸ್ವರೂಪಿಯಾದ ತಾಯಿ ಚಾಮುಂಡೇಶ್ವರಿ ಬಗ್ಗೆ ರಿಯಾಲಿಟಿ ಶೋ ಒಂದರಲ್ಲಿ ಅವಹೇಳನಕಾರಿಯಾಗಿ ಮಾತಾಡಿರುತ್ತಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳಬೇಕಿದೆ. ಹಾಗೇ ಸಾರ್ವಜನಿಕವಾಗಿ ಈಗ ಬೆಳೆಯುತ್ತಿರುವತಾನು ಎಲ್ಲರಿಗಿಂತಲೂ ಮೇಲು ಎಂದುಕೊಂಡಿರುವ ಪ್ರತಿಭೆ ಜಾಗೃತಿ ಮೂಡಿಸಬೇಕಿದೆ. ಹೀಗಾಗಿ ಹಿಂದೂ ಸಮಾಜದ ಪರವಾಗಿ ರಕ್ಷಕ್ ಬುಲೆಟ್ ಹಾಗೂ ವಾಹಿನಿಗೆ ಸಂಬಂಧ ಪಟ್ಟವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.
ಹೀಗಾಗಿ ಮಾಜಿ ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿನಯ್ ಗೌಡ, ರಜತ್ ಕಿಶನ್ ಬಳಿಕ ರಕ್ಷಕ್ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾರೆ.


Click it and Unblock the Notifications











