ರಿಷಬ್ ಶೆಟ್ಟಿಗೆ ಶಾಕ್, ಡಿವೈನ್ ಸ್ಟಾರ್ ವಿರುದ್ದ ನಾಂಪಲ್ಲಿ ನ್ಯಾಯಾಲಯದಲ್ಲಿ ಕೇಸ್ ದಾಖಲು..!
ಸದಾ ಹೊಸತನವನ್ನೇ ಪ್ರಯತ್ನಿಸುವ ರಿಷಬ್ ಶೆಟ್ಟಿ, ಚುರುಕುತನ, ವ್ಯಾವಹಾರಿಕ ಚತುರತೆ ಹೊಂದಿರುವ ಪ್ರತಿಭೆಯೂ ಹೌದು. ಕಲಾತ್ಮಕ ಚೌಕಟ್ಟಿನ ಸರ್ಕಾರಿ ಶಾಲೆಯಂತಾ ಸಿನಿಮಾವನ್ನೂ ಜನ ಮುಗಿಬಿದ್ದು ನೋಡುವಂತೆ ಮಾಡಿ ಗೆಲ್ಲಿಸಿದ ಹೆಗ್ಗಳಿಕೆಯನ್ನೂ ಹೊಂದಿರುವ ರಿಷಬ್ ಶೆಟ್ಟಿ ಈಗ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ.ಬದಲಿಗೆ ರಿಷಬ್ ಈಗ ನ್ಯಾಶನಲ್ ಹೀರೋ.
ಕಾಂತಾರ ಚಿತ್ರದ ಜೊತೆ ಜೊತೆಯಲ್ಲಿಯೇ ರಿಷಬ್ ಬಾಲಿವುಡ್ನಲ್ಲಿ ಶಿವಾಜಿ ಮಹಾರಾಜ್ ಅವತಾರವೆತ್ತಲು ಸಿದ್ಧರಾಗಿದ್ದಾರೆ.ಮತ್ತೊಂದು ಕಡೆ ಹನುಮಂತನ ಪಾತ್ರಕ್ಕೆ ಕೂಡ ಜೀವ ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರ ನಡುವೆ ಈಗ ರಿಷಬ್ ಶೆಟ್ಟಿ ವಿರುದ್ಧ ಕೇಸ್ ದಾಖಲಾಗಿದೆ.

ಹೌದು, ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಚಿತ್ರದ ವಿರುದ್ಧ ಹೈಕೋರ್ಟ್ ವಕೀಲ ಮಾಮಿದಾಳ್ ತಿರುಮಲ್ ರಾವ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಜೈ ಹನುಮಾನ್ ಚಿತ್ರದಲ್ಲಿ ಆಂಜನೇಯನ ಪಾತ್ರ ಪೋಷಣೆ ಆಕ್ಷೇಪಾರ್ಹವಾಗಿದೆ ಎಂದು ವಾದ ಮಾಡಿರುವ ವಕೀಲ್ ಮಾಮಿದಾಳ್ ತಿರುಮಲ್ ರಾವ್, ರಿಶಬ್ ಶೆಟ್ಟಿ ಅವರ ಮುಖವನ್ನೇ ಹನುಮಂತನ ಮುಖವೆನ್ನುವಂತೆ ಚಿತ್ರದಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ಎಲ್ಲರಿಗೆ ತಿಳಿದಿರುವಂತೆ ಹನುಮಂತನ ಮುಖ ವಾನರ ಮುಖವನ್ನು ಹೋಲುತ್ತದೆ ಆದರೆ ಜೈ ಹನುಮಾನ್ ಚಿತ್ರದಲ್ಲಿ ರಿಷಬ್ ಶೆಟ್ಟಿಯ ಮುಖವನ್ನು ಸಾಮಾನ್ಯ ಮನುಷ್ಯನ ಮುಖದಂತೆ ತೋರಿಸಲಾಗಿದೆ ಎಂದಿರುವ ತಿರುಮಲ್ ರಾವ್ ಈ ಮೂಲಕ ಮುಂಬರುವ ಪೀಳಿಗೆಯ ದಾರಿಯನ್ನು ತಪ್ಪಿಸುವ ಕೆಲಸವನ್ನು ರಿಷಬ್ ಶೆಟ್ಟಿ ಮತ್ತು ತಂಡದವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಸೃಜನಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಇದೆಲ್ಲದಕ್ಕೆ ಅನುಮತಿಯನ್ನು ನೀಡಿದರೆ ಮುಂಬರುವ ದಿನಗಳಲ್ಲಿ ಗಣೇಶ ಅಥವಾ ವರಾಹ ಸ್ವಾಮಿಯಂತಹ ಪೂಜ್ಯ ದೇವಾನುದೇವತೆಗಳನ್ನು ಕೂಡ ಇವರು ತಮಗೆ ಬೇಕಾದಂತೆ ಬಳಿಸಿಕೊಳ್ಳುತ್ತಾರೆ, ಚಿತ್ರೀಕರಿಸುತ್ತಾರೆ ಎಂದಿರುವ ಮಾಮಿದಾಳ್ ತಿರುಮಲ್ ರಾವ್ ಇದೆಲ್ಲದರಿಂದ ಭವಿಷ್ಯದ ಪೀಳಿಗೆ ನಮ್ಮ ಸಂಸ್ಕ್ರತಿ ಮತ್ತು ನಾವೆಲ್ಲ ಪೂಜಿಸಿಕೊಂಡು ಬಂದ ದೇವಾನುದೇವತೆಗಳ ಜೊತೆ ಸಂಪರ್ಕವನ್ನು ಕಳೆದುಕೊಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಎಲ್ಲ ಪೌರಾಣಿಕ ಚಿತ್ರಗಳಲ್ಲಿ ಈ ಹಿಂದೆ ಭಜರಂಗಿಯ ಪಾತ್ರವನ್ನು ತೋರಿಸಿದ್ದಕ್ಕಿಂತಲೂ ಭಿನ್ನವಾಗಿ
ಜೈ ಹನುಮಾನ್ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ಹೇಳಿರುವ ಮಾಮಿದಾಳ್ ತಿರುಮಲ್ ರಾವ್, ಹನುಮಂತನ ಪಾತ್ರವನ್ನು ತಿದ್ದುವ ಕೆಲಸ ಮಾಡುವ ಮೂಲಕ ಹಿಂದೂಗಳ ಭಾವನೆಗೆ ಚಿತ್ರತಂಡ ಧಕ್ಕೆಯುಂಟು ಮಾಡಿದೆ ಎಂದು ಹೇಳಿದ್ದಾರೆ. ಬಿಡುಗಡೆ ಮಾಡಲಾದ ಟೀಸರ್ ಮತ್ತು ಪೋಸ್ಟರ್ಗಳನ್ನು ಚಿತ್ರತಂಡ ಕೂಡಲೇ ಹಿಂಪಡೆಯಬೇಕು, ಡಿಲೀಟ್ ಮಾಡಬೇಕೆಂದು ಆಗ್ರಹಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲದೇ ಚಿತ್ರದ ನಿರ್ದೇಶಕ ಪ್ರಶಾಂತ್ ವರ್ಮಾ ಮತ್ತು ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ವಿರುದ್ದ ಕೂಡ ತಿರುಮಲ್ ರಾವ್ ದೂರನ್ನು ದಾಖಲಿಸಿದ್ಧಾರೆ. ಇನ್ನು ಈ ಪ್ರಕರಣವನ್ನು ನಾಂಪಲ್ಲಿ ನ್ಯಾಯಾಲಯ ಅಂಗೀಕರಿಸಿದ್ದು ಶೀಘ್ರದಲ್ಲಿಯೇ ವಾದ್-ಪ್ರತಿವಾದ ನಡೆಯುವ ಸಾಧ್ಯತೆ ಇದೆ.
ಇನ್ನುಳಿದಂತೆಜೈ ಹನುಮಾನ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಬಾಹುಬಲಿಯ ಬಲ್ಲಾಳದೇವ
ರಾಣಾ ದಗ್ಗುಬಾಟಿ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ರಾವಣ ಅಥವಾ ಶ್ರೀರಾಮ? ಯಾವ ಪಾತ್ರಕ್ಕೆ ರಾಣಾ ಬಣ್ಣ ಹಚ್ಚುತ್ತಾರೆ ಎನ್ನುವ ಕುತೂಹಲ ಮೂಡಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡದೇ ಕುತೂಹಲವನ್ನು ಉಳಿಸಿಕೊಂಡಿದೆ. ಬಲ್ಲಾಳ ದೇವ ಶ್ರೀರಾಮನಾಗಿ ನಟಿಸುವುದು ಬಹುತೇಖ ಖಚಿತ ಎನ್ನಲಾಗ್ತಿದೆ. ಅಥವಾ ರಿಷಬ್ ಶೆಟ್ಟಿ ಪಾತ್ರಕ್ಕೆ ರಾಣಾ ಧ್ವನಿ ಮಾತ್ರ ಕೊಡ್ತಾರಾ? ಎನ್ನುವ ಊಹಾಪೋಹವೂ ಶುರುವಾಗಿದೆ.


Click it and Unblock the Notifications











