ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ರಂಪಾಟ: ಮತ್ತೊಂದು ದೂರು ದಾಖಲು
ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ನಟ ಸ್ನೇಹಿತ್ ಇತ್ತಿಚಿಗೆ ಒಂದಲ್ಲಾ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಬಾಲ್ಯದಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಸ್ನೇಹಿತ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿಜಯ್ ರಾಘವೇಂದ್ರ ಸೇರಿದಂತೆ ಸ್ಯಾಂಡಲ್ವುಡ್ನ ಇತರ ನಾಯಕರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. 'ಸ್ನೇಹಿತರು' ಹಾಗೂ 'ಅಪ್ಪು ಪಪ್ಪು' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸ್ನೇಹಿತ್ ಕಾಣಿಸಿಕೊಂಡಿದ್ದರು.
ಬಾಲ ನಟನಾಗಿ ಗುರುತಿಸಿಕೊಂಡಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹೆಸರು ಇತ್ತೀಚಿನ ದಿನಗಳಲ್ಲಿ ಗೂಂಡಾಗಿರಿ, ಪುಂಡಾಟಿಕೆ, ಬೆದರಿಕೆ ಇಂತಹ ವಿಚಾರಗಳಲ್ಲೇ ಹೆಚ್ಚಾಗಿ ಕೇಳಿ ಬರುತ್ತಿದೆ. ಸ್ನೇಹಿತ್ ವಿರುದ್ಧ ಬೆಂಗಳೂರಿನ ಖ್ಯಾತ ಉದ್ಯಮಿ ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಅವರ ಮನೆಗೆ ನುಗ್ಗಿ ಮಹಿಳಾ ಕೆಲಸದವರ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ದೂರು ದಾಖಲಾಗಿತ್ತು.
ಈ ಪ್ರಕರಣ ಕೆಲ ದಿನಗಳಿಂದ ತಣ್ಣಗಾಗಿದ್ದು, ಇದೀಗ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ಸ್ನೇಹಿತ್ ಹಾಗೂ ಬೌನ್ಸರ್ಗಳು ಮನೆ ಕೆಲಸದವರು ಕಸ ಗುಡಿಸುತ್ತಿದ್ದಾಗ, ಧೂಳು ಬಿದ್ದಿದೆ ಎಂದು ಆರೋಪಿಸಿ ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕರಾದ ರಜತ್ ಮನೆಗೆ ನುಗ್ಗಿ ಇಬ್ಬರು ಮಹಿಳಾ ಕೆಲಸದವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಈ ಹಿಂದೆ ಕೂಡ ಸ್ನೇಹಿತ್ ಮತ್ತು ತಂಡ ಗಲಾಟೆ ನಡೆಸಿದ್ದರು ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಈ ಪ್ರಕರಣ ಸಂಬಂಧ ಪೊಲೀಸ್ ತನಿಖೆ ಕೂಡ ನಡೆದಿತ್ತು. ಬಳಿಕ ಈ ಪ್ರಕರಣದಲ್ಲಿ ಸ್ನೇಹಿತ್ ಪಾತ್ರವಿಲ್ಲ ಆತ ಜಗಳ ಬಿಡಿಸಲು ಬಂದಿದ್ದರು ಎಂದು ದೂರುದಾರೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಸ್ನೇಹಿತ್ ಹಾಗೂ ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕರಾದ ರಜತ್ ಅವರ ಮನೆಯವರ ನಡುವಿನ ಮನಸ್ತಾಪ ತಣ್ಣಗಾಗಿತ್ತು ಎನ್ನುವಷ್ಟೇರಲ್ಲೇ, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಮತ್ತೆ ರಜತ್ ಕುಟುಂಬಸ್ಥರು ಹಾಗೂ ಸ್ನೇಹಿತ್ ನಡುವೆ ಜಗಳ ಆರಂಭವಾಗಿದ್ದು, ಈ ಪ್ರಕರಣ ಮತ್ತೆ ಮಹಾಲಕ್ಷ್ಮೀ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನಟ ಸ್ನೇಹಿತ್ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕಿದ್ದಾನೆ ಎಂದು ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕರಾದ ರಜತ್ ಅವರ ಪತ್ನಿ ಸ್ನೇಹಿತ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಜಾಗ್ವಾರ್ ಕಾರಿನಲ್ಲಿ ತನ್ನ ತಂಡದೊಂದಿಗೆ ಬಂದ ಸ್ನೇಹಿತ್ ರಜತ್ ಹಾಗೂ ಅವರ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಜಾಸ್ತಿ ಮಾತನಾಡಬೇಡಿ ಎಂದು ರಜತ್ ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಸ್ನೇಹಿತ್ ಹಾಗೂ ರಜತ್ ಕುಟುಂಬಸ್ಥರ ನಡುವಿನ ಜಗಳ ಸದ್ಯಕ್ಕೆ ತೆರೆ ಬೀಳುವಂತೆ ಕಾಣುತ್ತಿಲ್ಲ. ಈ ಹಿಂದೆ ಸ್ನೇಹಿತ್ ಮನೆ ಕಾರು ಚಾಲಕ ಜಾತಿ ನಿಂದನೆ ಮಾಡಿದ್ದಾರೆ ಎಂದು ಉದ್ಯಮಿ ರಜತ್ ಅವರ ವಿರುದ್ಧ ದೂರು ದಾಖಲಿಸಿದ್ದರು. ಹೀಗೆ ದೂರು, ಪ್ರತಿದೂರುಗಳು ದಾಖಲಾಗುತ್ತಿದ್ದು, ಎರಡೂ ಕಡೆಯವರ ದೂರು ದಾಖಲಿಸಿಕೊಂಡಿರುವಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಯಾರದು ತಪ್ಪು ಎನ್ನುವುದು ತನಿಖೆಯಿಂದ ಹೊರಬರಬೇಕಿದೆ.


Click it and Unblock the Notifications











