ಹಿಂದೂ ಹಿಂದಕ್ಕೆ ಜಾತಿ ಮುಂದಕ್ಕೆ ; ಮೊಸರು ತಿನ್ನುವ ಕುತಂತ್ರಿ -ಕಿಶೋರ್
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಹಾಗಂಥ ಎಲ್ಲರೂ ಇಲ್ಲಿ ಬಹಿರಂಗವಾಗಿ ಚುನಾವಣೆಯ ಅಖಾಡಕ್ಕೆ ಧುಮುಕುವುದಿಲ್ಲ.
ಬದಲಿಗೆ ಕೆಲವರು ದೂರದಿಂದಲೇ ನಿಂತು ರಾಜಕೀಯ ವ್ಯವಸ್ಥೆಯ ಕುರಿತು ಪ್ರಶ್ನೆ ಮಾಡುತ್ತಾರೆ. ಅನ್ಯಾಯ-ಅಕ್ರಮ- ಭ್ರಷ್ಟಾಚಾರದ ಕುರಿತು ಪ್ರಶ್ನೆ ಮಾಡುತ್ತಾರೆ. ಸರ್ಕಾರದ ಲೋಪ ದೋಷ ಜಗಜ್ಜಾಹೀರಾದಾಗ ಕೆಂಡ ಕಾರುತ್ತಾರೆ. ತಮ್ಮ ರಾಜಕೀಯ ಸಿದ್ಧಾಂತ ಮತ್ತು ನಿಲುವುಗಳನ್ನು ಆಗಾಗ ಮಂಡಿಸುತ್ತಾರೆ. ಉದಾಹರಣೆಗೆ ಕಿಶೋರ್.

ಹೌದು, ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಕಾಲ್ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವ ತಾರೆಯರೇ ಚಿತ್ರರಂಗದಲ್ಲಿ ಹೆಚ್ಚಿದ್ದಾರೆ. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ.
ಆದರೆ ಕನ್ನಡ ಚಿತ್ರರಂಗದ ''ಹುಲಿ'' ಕಿಶೋರ್ ಇದಕ್ಕೆ ತದ್ವಿರುದ್ಧ. ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ ಧ್ವನಿ ಎತ್ತುತ್ತಾ, ಕಳೆದ ಹತ್ತು ವರ್ಷಗಳಿಂದ ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಕಿಶೋರ್ ಸದ್ಯ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.
ಹೌದು ಅಸಲಿಗೆ ದೇಶದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮವನ್ನು ಜನವರಿ 23ರಂದು ಹೊರಡಿಸಲಾಗಿತ್ತು. ಈ ನಿಯಮವನ್ನು ಪ್ರಶ್ನಿಸಿ ಹಲವು ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ನಿಯಮಾವಳಿ ಅನಿಯಂತ್ರಿತ, ಹೊರಗಿಡುವ, ತಾರತಮ್ಯವಾಗಿದೆ. ಜೊತೆಗೆ ಭಾರತದ ಸಂವಿಧಾನ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ ಕಾಯ್ದೆ, 1956ರ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ವಿರುದ್ದ ಹಲವರು ಪ್ರತಿಭಟನೆಯನ್ನು ಕೂಡ ಮಾಡಿದ್ದರು.
ಈ ವಾದಗಳನ್ನು ಆಲಿಸಿ ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಅಂತಿಮ ತೀರ್ಪು ಹೊರಬರುವವರೆಗೆ ಈ ನಿಯಮಾವಳಿಯ ಜಾರಿಗೆ ತಡೆ ನೀಡುವಂತೆ ಮಹತ್ವದ ಆದೇಶ ಹೊರಡಿಸಿತ್ತು. ಅಧಿಸೂಚನೆಗೊಂಡಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ ವಿರೋಧಿ ನಿಯಮಗಳ ಜಾರಿಗೆ ಸುಪ್ರೀಂ ಕೋರ್ಟ್ ಜನವರಿ 29ರ ಗುರುವಾರ ತಾತ್ಕಾಲಿಕ ತಡೆ ನೀಡಿತ್ತು. ಈ ಮಾರ್ಗಸೂಚಿಗಳು ಸ್ಪಷ್ಟವಾಗಿಲ್ಲ, ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂಬ ಕಳವಳವನ್ನು ನ್ಯಾಯಾಲಯ ವ್ಯಕ್ತಪಡಿಸಿತ್ತು.

ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂರೆ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಕಿಶೋರ್ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ಕಿಶೋರ್ ಬರಹ
ಹಿಂದೂ ಹಿಂದಕ್ಕೆ ಜಾತಿ ಮುಂದಕ್ಕೆ... ಇದ್ದ ಕಾನೂನನ್ನೇ ಅರೆಬರೆ ತಿರುಚಿ ಓಬಿಸಿ ಓಟಿಗೆ ಕೈಹಾಕಿ, ಮೇಲ್ಜಾತಿಯ ಕಿಚ್ಚೆಬ್ಬಿಸಿ, ರೈತ ಹೋರಾಟದಲ್ಲಿ ವರ್ಷಗಟ್ಟಲೆ ತೆಪ್ಪಗೆ ಮಲಗಿದ್ದ ಸುಪ್ರೀಂಕೋರ್ಟನ್ನು ಮೂರೇದಿನದಲ್ಲೆಬ್ಬಿಸಿ ಅರೆಬರೆ ಕಾನೂನನ್ನೂ ಇಲ್ಲವಾಗಿಸಿ ಸುಪ್ರೀಂ ಮೂತಿಗೆ ಎಂಜಲು ಬಳಿದು ಮೊಸರು ತಿನ್ನುವ ಕುತಂತ್ರಿ ಬಿಜೆಪಿ ಆರೆಸ್ಸೆಸ್ ನ ಬಣ್ಣ ಬಯಲು ಎಂದು ಕಿಶೋರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ಧಾರೆ.
ಈ ಭಾರತದಲ್ಲಿ ಹಿಂದೂ ಎಲ್ಲಿ?? ಏಕ್ ಹೈ ತೊ ಸೇಫ್ ಹೈ, ಕಟೇಂಗೆ ತೊ ಬಟೇಂಗೆ, ಹಿಂದೂ ಖತರೇ ಮೆ ಎಲ್ಲ ಬರೀ ರಾಜಕೀಯದ ಸುಳ್ಳು ದಾಳಗಳು..ಒಟ್ಟಿನಲ್ಲಿ ಹಿಂದೂ ಎನ್ನುವುದೇ ಇಲ್ಲಿಲ್ಲ ಭಾರತದ ಸತ್ಯ ಬರೀ ಜಾತಿಯಷ್ಟೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ ಕಿಶೋರ್.
ಮುಂದುವರೆದು Rupee value, rupee performance, GDP rating, Women safety, Hunger, education, healthcare, unemployment, press freedom, happiness index ಹೀಗೆ ಎಲ್ಲ ಜಾಗತಿಕ ಸೂಚ್ಯಾಂಕಗಳಲ್ಲೂ ಕೊನೆಯಲ್ಲಿದ್ದರೂ ಬರದ ಕೋಪ, ನಡೆಯದ ಪ್ರತಿಭಟನೆ, ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ, ಜಾತಿತಾರತಮ್ಯದ ವಿರುದ್ಧ ಏನೂ ಮಾಡದೆಂದು ಅದರ ತಂತ್ರ ನೋಡಿದರೇ ಗೊತ್ತಾಗುವ ಒಂದು ಕಾನೂನಿನ ವಿರುದ್ಧ ಭುಗಿಲೇಳುತ್ತದೆಂದರೆ! ಇಲ್ಲಿ ಹಿಂದೂರಾಷ್ಟ್ರವಿರಲಿ ಹಿಂದುವೂ ಇಲ್ಲ ರಾಷ್ಟ್ರವೂ ಇಲ್ಲ ಇರುವುದು ಬರೀ ಜಾತಿ, ಜಾತೀವಾದ ಮತ್ತು ಜಾತ್ಯಾಂಧತೆಯಷ್ಟೆ ಎಂದು ಕಿಶೋರ್ ಹೇಳಿದ್ದಾರೆ.
ಸದ್ಯ ಕಿಶೋರ್ ಅವರ ಬರಹದಿಂದ ಎಂದಿನಂತೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಇನ್ನುಳಿದಂತೆ ಕೆಲ ದಿನಗಳ ಹಿಂದೆಯಷ್ಟೇ ಮುಸ್ಲಿಮರ ವಿರುದ್ಧ ವಂದೇ ಮಾತರಂ ಗೀತೆಯನ್ನು ದ್ವೇಷದ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ ಎಂದು ಹೇಳಿದ್ದ ಕಿಶೋರ್ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯ ಇಲ್ಲ ಎಂದು ಕಿಡಿ ಕಾರಿದ್ದರು.ಇದಕ್ಕೂ ಮುನ್ನ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕೆಂಡ ಕಾರಿದ್ದರು. ಶ್ರೀ ಭಾಗವತ್ ಅವರೇ, ಇಂದು ಆ ನಿಮ್ಮನಾಳೆಯ ಮರುದಿನ .. ನಾವು ಹಿಂದೂ ರಾಷ್ಟ್ರವಾಗಿಲ್ಲ.ಆಗಲೂ ಬಯಸುವುದಿಲ್ಲ. ನಿಜವಾದ ಸಮಸ್ಯೆಗಳ ಮೇಲೆ ಗಮನ ಹರಿಸುವುದರ ಬದಲು ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುವ ಇಂತಹ ಜನಗಳ ಮಾತುಗಳನ್ನು ಕೇಳುತ್ತಾ ಹೋದರೆ, ನಾವು ಖಂಡಿತವಾಗಿಯೂ ಹಿಂದೂ ಅಲ್ಲ ಖಾಯಂ ಹಿಂದುಳಿದ ರಾಷ್ಟ್ರವಾಗುತ್ತೇವೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದರು.


Click it and Unblock the Notifications










