ಚೇತನ್ಗೆ ನನ್ನ ಬೆಂಬಲ ಇದೆ: ನಟ ಕಿರಣ್ ಶ್ರೀನಿವಾಸ
ಜಾತಿ ವ್ಯವಸ್ಥೆ ಬಗ್ಗೆ ಸಿನಿಮಾ ರಂಗದಲ್ಲಿ ಚರ್ಚೆಯೊಂದು ಹುಟ್ಟಿಕೊಂಡಿದೆ. ಉಪೇಂದ್ರ ಆಡಿದ್ದ ಮಾತೊಂದಕ್ಕೆ ಪ್ರತಿಕ್ರಿಯೆಯಾಗಿ ನಟ ಚೇತನ್ ಜಾತಿ ವಿಷಯವಾಗಿ ಆರಂಭ ಮಾಡಿದ ಚರ್ಚೆ ರಾಜಕೀಯ ರೂಪ ಪಡೆದು, ಸಂಚಾರಿ ವಿಜಯ್ ಸಾವಿನ ನಂತರ ಮತ್ತೆ ಮುನ್ನೆಲೆಗೆ ಬಂದಿದೆ.
ನಟ ಚೇತನ್ ಬ್ರಾಹ್ಮಣರ ವಿರುದ್ಧವಾಗಿ ಮಾತನಾಡಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರುಗಳು ಸಲ್ಲಿಕೆಯಾಗಿ, ಅವರ ವಿಚಾರಣೆಯೂ ನಡೆದಿದೆ.
''ನಾನು ಮಾತನಾಡಿದ್ದು ಬ್ರಾಹ್ಮಣ್ಯದ ವಿರುದ್ಧವೇ ಹೊರತು ಬ್ರಾಹ್ಮಣರ ವಿರುದ್ಧವಲ್ಲ. ಅಲ್ಲದೆ, ನನ್ನ ಮಾತಿನಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ'' ಎಂದಿದ್ದಾರೆ ನಟ ಚೇತನ್.

ಇದೀಗ ನಟ ಕಿರಣ್ ಶ್ರೀನಿವಾಸ್ ಸಹ ಚೇತನ್ಗೆ ಬೆಂಬಲ ನೀಡಿದ್ದು, ''ಜಾತಿ ಅಸ್ಪೃಶ್ಯತೆ ಬಗ್ಗೆ ಮಾತನಾಡದಿದ್ದರೆ ಅದನ್ನು ನಿವಾರಿಸಲು ಸಾಧ್ಯವಿಲ್ಲ. ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ಅದನ್ನು ಬಗೆಹರಿಸಿಕೊಳ್ಳಬೇಕು. ಆದರೆ ಚರ್ಚೆ ಶಾಂತಿಯುತವಾಗಿ ಇರಬೇಕು'' ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ಕಿರಣ್ ಶ್ರೀನಿವಾಸ್, ''ಸಂವಿಧಾನ ಹಾಗೂ ಸರ್ಕಾರದ ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದು ಚೇತನ್ ಹೇಳಿದ್ದಾರೆ. ನಾನು ನನ್ನ ವಿಚಾರಧಾರೆ, ಅನಿಸಿಕೆ, ಅಭಿಪ್ರಾಯ, ಜಾತಿ ವ್ಯವಸ್ಥೆ ಹಾಗೂ ಅದರಿಂದ ಆಗುವ ಶೋಷಣೆಯ ವಿರುದ್ಧದ ನನ್ನ ಮಾತುಗಳನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ನನ್ನ ಹೋರಾಟ ಮುಂದುವರೆಸುತ್ತೇನೆ ಎಂದು ಚೇತನ್ ಹೇಳಿದ್ದಾರೆ. ಹಾಗಾಗಿ ನನ್ನ ಬೆಂಬಲ ಅವರಿಗೆ ಇದೆ. ಅವರು ನನ್ನ ಆತ್ಮೀಯ ಗೆಳೆಯ ಸಹ ಹೌದು'' ಎಂದಿದ್ದಾರೆ.
''ಚೇತನ್ಗೆ ಎಲ್ಲರೂ ಬೆಂಬಲಿಸೋಣ. ಬೆಂಬಲಿಸದೇ ಇದ್ದರೂ, ಚೇತನ್ ಅಭಿಪ್ರಾಯಕ್ಕೆ ವಿರೋಧವಿದ್ದವರೂ ಸಹ ಚರ್ಚೆ ಮೂಲಕ ಒಂದು ನಿಲವಿಗೆ ಬರೋಣ. ಶಾಂತಿಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ'' ಎಂದಿದ್ದಾರೆ ಕಿರಣ್.
Recommended Video
''ಜಾತಿ ವ್ಯವಸ್ಥೆಯಿಂದಾಗುತ್ತಿರುವ ಶೋಷಣೆ ಬಗ್ಗೆ ರಾಜ್ಯದಲ್ಲಿ ಚರ್ಚೆ ಪ್ರಾರಂಭವಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ. ವಿರೋಧಿಸುವವರೂ ಸಹ ಇದ್ದಾರೆ. ಅವರ ವಾದವನ್ನೂ ನಾವು ತಾಳ್ಮೆಯಿಂದ ಆಲಿಸಬೇಕಿದೆ. ನಂತರ ನಮ್ಮ ಅಭಿಪ್ರಾಯವನ್ನು ಮುಂದಿಡಬೇಕಿದೆ'' ಎಂದಿದ್ದಾರೆ ಕಿರಣ್.


Click it and Unblock the Notifications











