Cauvery dispute: ಬೆಂಗಳೂರು ಬಂದ್ಗೆ ಚಿತ್ರರಂಗ ಬೆಂಬಲ: ಚಿತ್ರೀಕರಣ, ಸಿನಿಮಾ ಪ್ರದರ್ಶನ ಇಲ್ಲ
ರಾಜ್ಯಕ್ಕೆ ಈ ವರ್ಷ ನೀರಿನ ಕೊರೆತ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ(ಸೆಪ್ಟೆಂಬರ್ 26) ಬೆಂಗಳೂರು ಬಂದ್ಗೆ ಕರೆ ನೀಡಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ರೈತರು, ವಿವಿಧ ಸಂಘಟನೆಗಳು ಮುಂದಾಗಿವೆ. ಜಲ ಹೋರಾಟ ಸಮಿತಿ ನೀಡಿರುವ ಬೆಂಗಳೂರು ಬಂದ್ ಕರೆಗೆ 180ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.
ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳೂ ನಾಳಿನ ಬೆಂಗಳೂರು ಬಂದ್ಗೆ ಬೆಂಬಲ ಘೋಷಿಸಿವೆ. ಆದರೆ ಕನ್ನಡ ಚಿತ್ರರಂಗ ಬೆಂಬಲ ಸೂಚಿಸಿಲ್ಲ. ಬದಲಿಗೆ ಶುಕ್ರವಾರ(ಸೆಪ್ಟೆಂಬರ್ 29) ವಾಟಾಳ್ ನಾಗರಾಜ್ ನೇತೃತ್ವದ ಅಖಂಡ ಕರ್ನಾಟಕ ಬಂದ್ಗೆ ಬೆಂಬಲ ಘೋಷಿಸಿದೆ. ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿದೆ. ಆದರೆ ಪ್ರತಿಭಟನೆಯಲ್ಲಿ ಭಾಗಿಯಾಗುವ ಬಗ್ಗೆ ಇನ್ನು ನಿರ್ಧಾರ ಕೈಗೊಂಡಿಲ್ಲ. ಸಭೆ ಬಳಿಕ ಮಾತನಾಡಿದ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಎನ್. ಎಂ ಸುರೇಶ್ ಹೋರಾಟದಲ್ಲಿ ಭಾಗಿ ಆಗುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಸಂಜೆ ವೇಳೆಗೆ ಆ ಬಗ್ಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಟೌನ್ಹಾಲ್ನಿಂದ ಪ್ರತಿಭಟನೆ ರ್ಯಾಲಿ ಶುರುವಾಗಲಿದೆ. ಕನ್ನಡ ಸಂಘಟನೆಗಳ ಮುಖಂಡರು, ರೈತರು, ಬಿಬಿಎಂಪಿ ಕಾರ್ಮಿಕರು, ಕೆಎಸ್ಆರ್ಟಿಸಿ ಕನ್ನಡ ಕಾರ್ಮಿಕರ ಸಂಘ, ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಕರ್ನಾಟಕ ಮರಾಠ ಮಂಡಲ ಸದಸ್ಯರು ಈ ಮೆರವಣಿಗೆಯಲ್ಲಿ ಭಾಗವಹಿಸಿ ಸರ್ಕಾರದ ಕ್ರಮವನ್ನು ಖಂಡಿಸಲು ಮುಂದಾಗಿದ್ದಾರೆ.
ಕನ್ನಡ ನೆಲ, ಜಲ, ಭಾಷೆಯ ವಿಚಾರ ಬಂದಾಗ ಕನ್ನಡ ಚಿತ್ರರಂಗ ಸದಾ ಬೆಂಬಲವಾಗಿ ನಿಲ್ಲುತ್ತದೆ. ನಾಳಿನ ಬೆಂಗಳೂರು ಬಂದ್ಗೆ ಬೆಂಬಲ ಸೂಚಿಸಿದರೂ ಸಕ್ರಿಯವಾಗಿ ಭಾಗವಹಿಸುವ ಬಗ್ಗೆ ಇನ್ನಷ್ಟೆ ನಿರ್ಧಾರ ಹೊರಬೀಳಬೇಕಿದೆ. ಈಗಾಗಲೇ ಕನ್ನಡ ಚಿತ್ರರಂಗದ ಸ್ಟಾರ್ ನಟರೆಲ್ಲಾ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಯಾವುದೇ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ. ನಾಳಿನ ಬೆಂಗಳೂರು ಬಂದ್ಗೆ ಒಂದಷ್ಟು ಸಂಘಟನೆಗಳು ಬೆಂಬಲ ಸೂಚಿಸಿವೆ. ಮತ್ತೆ ಕೆಲವರು ನೈತಿಕ ಬೆಂಬಲ ಘೋಷಿಸಿದ್ದಾರೆ.
ಚಿತ್ರೀಕರಣ, ಥಿಯೇಟರ್ಗಳು ಬಂದ್
ಬೆಂಗಳೂರು ಬಂದ್ಗೆ ಸಿನಿಮಾ ಪ್ರದರ್ಶಕರ ಸಂಘ ಬೆಂಬಲ ಸೂಚಿಸಿದೆ. ನಾಳೆ ಯಾವುದೇ ಸಿನಿಮಾ ಪ್ರದರ್ಶನ ಮಾಡದಿರಲು ನಿರ್ಧರಿಸಿರುವುದಾಗಿ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ. ವಿ ಚಂದ್ರಶೇಖರ್ ಹೇಳಿದ್ದಾರೆ. ಇದು ಕಾವೇರಿ ನೀರಿನ ವಿಚಾರ. ಚಿತ್ರಮಂದಿರಗಳು ಕೂಡ ಈ ಬಂದ್ಗೆ ಬೆಂಬಲ ಸೂಚಿಸುತ್ತವೆ ಎಂದಿದ್ದಾರೆ. ಇನ್ನು ಸಿನಿಮಾ ಚಿತ್ರೀಕರಣ ನಿಲ್ಲಿಸಿ ಬೆಂಬಲ ಸೂಚಿಸುವುದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್. ಎಂ ಸುರೇಶ್ ಹೇಳಿದ್ದಾರೆ.
ಬೆಂಗಳೂರು ಬಂದ್ಗೆ ಕಿರುತೆರೆ ಬೆಂಬಲ
ಕರ್ನಾಟಕ ಬಂದ್ನಲ್ಲಿ ಕನ್ನಡ ಚಿತ್ರರಂಗ ಭಾಘಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನು ಫಿಲ್ಮ್ ಚೇಂಬರ್ನಲ್ಲಿ ಸಭೆ ನಡೆಸಿ ಚರ್ಚಿಸಲಾಗುತ್ತಿದೆ. ಶುಕ್ರವಾರ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಿ ಬಂದ್ಗೆ ಬೆಂಬಲ ಸೂಚಿಸಲು ತೀರ್ಮಾನಿಸಲಾಗಿದೆ. ಚಿತ್ರರಂಗ ಬೆಂಗಳೂರು ಬಂದ್ ಬೆಂಬಲ ಸೂಚಿಸದಿದ್ದರೂ ಕಿರುತೆರೆ ಬೆಂಬಲಿಸಿದೆ. ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತನ್ನ ಸದಸ್ಯರಿಗೆ ಮನವಿ ಮಾಡಿದೆ.
ಕಾವೇರಿ ಹೋರಾಟಕ್ಕೆ ಧ್ರುವ ಬೆಂಬಲ
ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ನಟ ಧ್ರುವ ಸರ್ಜಾ, ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದಿದ್ದಾರೆ. ಬೆಂಗಳೂರು ಬಂದ್ ಕುರಿತಾದ ಪ್ರಶ್ನೆಗೆ "ನಾನು ಕಲಾವಿದ ಅನ್ನೋದನ್ನ ಬಿಟ್ಟು, ಕನ್ನಡಿಗನಾಗಿ ರೈತನ ಮಗನಾಗಿ ಮಾತನಾಡುತ್ತೇನೆ. ನಮ್ಮ ಕಲಾವಿದರ ಸಂಘದಿಂದ ಅನಂತ್ನಾಗ್, ರವಿಚಂದ್ರನ್ ಸರ್, ಶಿವಣ್ಣ ಎಲ್ಲರೂ ಒಂದು ನಿರ್ಧಾರ ಕೈಗೊಂಡು ಕಾವೇರಿ ಹೋರಾಟಕ್ಕೆ ಕರೆ ನೀಡಿದರೆ, ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ಕಾವೇರಿ ಸಮಸ್ಯೆ ಇವಾಗಿನದ್ದಲ್ಲ. ಸುಮಾರು ವರ್ಷಗಳಿಂದ ಇದೆ. ಚಿತ್ರರಂಗದಲ್ಲಿ ಹಿರಿಯ ನಟರಿದ್ದಾರೆ. ಅವರು ನಿರ್ಧರಿಸಲಿ ನಾವು ಜೊತೆಗೆ ಇರುತ್ತೇವೆ" ಎಂದಿದ್ದಾರೆ.
ಸೆಲ್ಫಿಗೆ ಮುಗಿಬೀಳುವುದು ಬೇಡ- ದೊಡ್ಡಣ್ಣ
ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ನಟ ದೊಡ್ಡಣ್ಣ, "ಕನ್ನಡ ನೆಲ ಜಲ ಭಾಷೆ ವಿಷಯ ಬಂದಾಗ ಚಿತ್ರರಂಗದ ಸದಾ ಬೆಂಬಲವಾಗಿ ನಿಲ್ಲುತ್ತಾ ಬರ್ತಿದೆ. ಮುಂದೆಯೂ ನಿಲ್ಲುತ್ತದೆ. ನಾನು ಬಂದ್ನಲ್ಲಿ ಒಂದು ಗಂಟೆ ಸಮಯ ಭಾಗಿ ಆಗುತ್ತೇನೆ. ಕಲಾವಿದರು ಒಟ್ಟಿಗೆ ಬರುವುದರಿಂದ ಸುಖಾಸುಮ್ಮನೆ ಗದ್ದಲವಾಗುತ್ತದೆ. ಜನ ಸೆಲ್ಫಿ, ಫೋಟೊ ಎಂದು ಮುಗಿಬೀಳ್ತಾರೆ. ಇದರಿಂದ ನಮ್ಮ ಭಾಗವಹಿಸುವಿಕೆಯ ಆಶಯವೇ ವ್ಯರ್ಥವಾಗುತ್ತದೆ. ನಮಗೆ ಒಂದು ವೇದಿಕೆ ಸಿಗಬೇಕು. ನಾವು ಮಾತನಾಡಬೇಕು. ಅದಕ್ಕೆ ಅವಕಾಶ ಕಲ್ಪಿಸಬೇಕು" ಎಂದಿದ್ದಾರೆ.


Click it and Unblock the Notifications











