ಮಾನವೀಯತೆ ಮೆರೆದ 'ನಾಗರಹಾವು' ನಿರ್ಮಾಪಕ ಸಾಜಿದ್ ಖುರೇಶಿ
ಅದ್ಧೂರಿ ಆಡಿಯೋ ರಿಲೀಸ್ ಕಾರ್ಯಕ್ರಮ ಮಾಡುವ ಬದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರಕ ಕಾಯಿಲೆಗಳಿಂದ ನರಳುತ್ತಿರುವ, ಹಣ ಇಲ್ಲದೆ ಪರದಾಡುತ್ತಿರುವ 25 ಬಡ ರೋಗಿಗಳಿಗೆ 'ಸಿಂಹ ಹಸ್ತ' ಟ್ರಸ್ಟ್ ಮೂಲಕ ತಲಾ ಒಂದು ಲಕ್ಷ ರೂಪಾಯಿ ಕೊಟ್ಟು, ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಆದರ್ಶವನ್ನು ಪಾಲಿಸಿ, 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಮಾನವೀಯತೆ ಮೆರೆದಿದ್ದರು. ['ಸಿಂಹ ಹಸ್ತ' ತಂಡದಿಂದ ಬಡ ರೋಗಿಗಳಿಗೆ ಸಹಾಯ ಹಸ್ತ]
ಇದೀಗ ಗೋಲಿಬಾರ್ ನಲ್ಲಿ ಬಲಿಯಾಗಿರುವ ತುಮಕೂರು ಜಿಲ್ಲೆಯ ಉಮೇಶ್ ರವರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ ನಿರ್ಮಾಪಕ ಸಾಜಿದ್ ಖುರೇಶಿ. ಉಮೇಶ್ ಅವರು ಕಾವೇರಿ ಗಲಭೆಯಲ್ಲಿ ಯಾವುದೇ ಹಿಂಸಾತ್ಮಕ ಕೃತ್ಯಕ್ಕೆ ಇಳಿಯದಿದ್ದರೂ ಪೊಲೀಸರ ಗುಂಡಿಗೆ ಬಲಿಯಾಗಿರುವುದು ವಿಧಿಯ ವಿಪರೀತ ಅಟ್ಟಹಾಸವೇ ಸರಿ.
ಬೆಂಗಳೂರಿನ ಪೀಣ್ಯದ ಬಳಿಯಿರುವ ಹೆಗ್ಗನಹಳ್ಳಿಯಲ್ಲಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ 25 ವರ್ಷದ ಉಮೇಶ್ ನಿನ್ನೆ (ಸೆಪ್ಟೆಂಬರ್ 12) ದುರಂತ ಸಾವಿಗೀಡಾದರು. ಮುಂದೆ ಓದಿ.... [ಐದು ಲಕ್ಷ ರು. ಪರಿಹಾರ ತಿರಸ್ಕರಿಸಿದ ಉಮೇಶ್ ಕುಟುಂಬ]

ಅಮಾಯಕ ಉಮೇಶ್
ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕ ಉಮೇಶ್ ಮನೆಗೆ ಮರಳುತ್ತಿರುವಾಗ ಪೊಲೀಸರ ಗುಂಡಿಗೆ ಬಲಿಯಾದರು. ಗುಂಡು ತಗುಲಿದ ನಂತರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಕರ್ನಾಟಕ ಸರ್ಕಾರದಿಂದ ಪರಿಹಾರ
ಮೃತ ಉಮೇಶ್ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಆದರೆ ಅದನ್ನ ಉಮೇಶ್ ಕುಟುಂಬ ತಿರಸ್ಕರಿಸಿದೆ. ನಂತರ ಪರಿಹಾರವನ್ನು ಪರಿಷ್ಕರಿಸಿ 10 ಲಕ್ಷ ರು. ನೀಡುವುದಾಗಿ ಸರಕಾರ ಘೋಷಿಸಿದೆ. ಉಮೇಶ್ ಹೆಂಡತಿ ಖಾಯಂ ಸರಕಾರಿ ಕೆಲಸ ಮತ್ತು ಮಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿಯೂ ಹೇಳಿದೆ.

'ನಾಗರಹಾವು' ನಿರ್ಮಾಪಕರ ಸಹಾಯ
ಮೃತ ಉಮೇಶ್ ಕುಟುಂಬಕ್ಕೆ 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಕೂಡ ಎರಡು ಲಕ್ಷ ರೂಪಾಯಿ ನೀಡಲು ಮುಂದಾಗಿದ್ದಾರೆ.

ಉಮೇಶ್ ಕುಟುಂಬ ಸ್ವೀಕರಿಸುತ್ತಾ?
'ಸಿಂಹ ಹಸ್ತ' ಟ್ರಸ್ಟ್ ವತಿಯಿಂದ 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ನೀಡುವ ಎರಡು ಲಕ್ಷ ರೂಪಾಯಿಯನ್ನ ಉಮೇಶ್ ಕುಟುಂಬ ಸ್ವೀಕರಿಸುತ್ತಾ, ಗೊತ್ತಿಲ್ಲ.

ಉಮೇಶ್ ಹೆಂಡತಿ ಆರು ತಿಂಗಳ ಗರ್ಭಣಿ
ತುಮಕೂರು ಜಿಲ್ಲೆಯ ತುರುವೇಕರೆ ತಾಲೂಕಿನ ಸಿಂಗೇನಹಳ್ಳಿಯ ಮೂಲದ ಉಮೇಶ್ ಬೆಂಗಳೂರಿನ ಹೆಗ್ಗನಹಳ್ಳಿ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಎರಡು ವರ್ಷದ ಹೆಣ್ಣು ಮಗುವಿದ್ದು, ಆತನ ಹೆಂಡತಿ ಸದ್ಯ ಆರು ತಿಂಗಳ ಗರ್ಭಿಣಿ.

ಗಾಯಗೊಂಡವರಿಗೆ ಐವತ್ತು ಸಾವಿರ ರೂಪಾಯಿ
ಕಾವೇರಿ ಕಿಚ್ಚಿನಲ್ಲಿ ಪೊಲೀಸರ ಗುಂಡಿಗೆ ಗಾಯಗೊಂಡ ಚಂದ್ರಮೋಹನ್ ಕುಟುಂಬಕ್ಕೆ ಐವತ್ತು ಸಾವಿರ ರೂಪಾಯಿ ನೀಡಲು ನಿರ್ಮಾಪಕ ಸಾಜಿದ್ ಖುರೇಶಿ ನಿರ್ಧರಿಸಿದ್ದಾರೆ.


Click it and Unblock the Notifications











