ಕಾವೇರಿ ವಿವಾದ: ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದು, ಟ್ರೋಲ್ಗೆ ಒಳಗಾದ ನಟ ನೆನಪಿರಲಿ ಪ್ರೇಮ್!
ಕಾವೇರಿ ನದಿ ನೀರು ವಿವಾದ ಎರಡು ರಾಜ್ಯಗಳ ನಡುವೆ ಬಿಸಿ ಬಿಸಿ ಚರ್ಚೆಯಾಗಿ ಬದಲಾಗಿದೆ. ಇದರ ನಡುವೆ ಕನ್ನಡ ಚಿತ್ರರಂಗ ರೈತರ ಜೊತೆಗೆ ನಿಂತಿದ್ದು, ಕರ್ನಾಟಕ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು. ಜೊತೆಗೆ ಚಿತ್ರರಂಗದ ಎಲ್ಲಾ ತಾರೆಯರು ಸೇರಿ ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ಹೋರಾಟ ಕೂಡ ಮಾಡಿದ್ದರು.
ಸ್ಯಾಂಡಲ್ವುಡ್ ತಾರೆಯರು ಕಾವೇರಿ ನದಿ ನೀರು ವಿವಾದದ ಬಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇದರ ನಡುವೆ ನಟ ನೆನಪಿರಲಿ ಪ್ರೇಮ್ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಬರೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೊತೆಗೆ ಟ್ರೋಲ್ಗೂ ಒಳಗಾಗಿದೆ.

ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್!
ನಟ ಪ್ರೇಮ್ ಹಂಚಿಕೊಂಡಿರುವ ವಿಡಿಯೋದಲ್ಲಿ ರಕ್ತದಲ್ಲಿ ಪತ್ರ ಬರೆಯುವುದನ್ನು ನೋಡಬಹುದು. ಈ ಪತ್ರದಲ್ಲಿ "ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ, ದಯವಿಟ್ಟು ನಮ್ಮ ಕಾವೇರಿ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿ. ಕಾವೇರಿ ನಮ್ಮದು. ಇಂತಿ ನೆನಪಿರಲಿ ಪ್ರೇಮ್ ಚಿತ್ರನಟ" ಎಂದು ಬರೆದಿದ್ದಾರೆ. ಜೊತೆಗೆ ಪತ್ರದಲ್ಲಿ ಅಂಗೈ ಗುರುತು ಇದೆ. ವಿಡಿಯೋಗೆ "ಸಿದ್ದ ಕಣೋ ಪ್ರಾಣ ಕೊಡೋಕೆ, ಈ ನೆಲ ಜಲ ನಾಡ ನುಡಿಗೆ" ಎಂಬ ಶೀರ್ಷಿಕೆ ನೀಡಿದ್ದಾರೆ.
ಈ ಸುದ್ದಿ ಬರೆಯುವ ಹೊತ್ತಿಗೆ ವಿಡಿಯೋಗೆ ಮೂರೂವರೆ ಲಕ್ಷ ವೀವ್ಸ್ ಮತ್ತು 23,000 ಲೈಕ್ಗಳು ಬಂದಿದ್ದವು. ವೀಡಿಯೊ ವೈರಲ್ ಆಗಿದೆ. ಜೊತೆಗೆ ಹಲವು ಮಂದಿ ಕಾಮೆಂಟ್ ಮಾಡಿದ್ದಾರೆ. ಆದರೆ, ಪ್ರೇಮ್ ಅವರ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಅಭಿಮಾನಿಗಳು ಇದನ್ನು ಹೊಗಳಿ, ಅವರ ಉದ್ದೇಶವನ್ನು ಸ್ವಾಗತಿಸಿದರೆ, ಹೆಚ್ಚಿನ ಜನರು ಇದಕ್ಕೆ ಪ್ರೇಮ್ ಅವರನ್ನು ಟೀಕಿಸಿದ್ದಾರೆ.
ಟ್ರೋಲ್ಗೆ ಒಳಗಾದ ನೆನಪಿರಲಿ ಪ್ರೇಮ್
ಹಲವು ಮಂದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕೇಳುವ ಬದಲು ಪ್ರಧಾನಿಯನ್ನು ಏಕೆ ಎಳೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. "ತಲೆಲಿ ಬುದ್ಧಿ ಇದ್ದವರು ಇಲ್ಲಿಯ ಸರ್ಕಾರನ ಕೇಳಬೇಕು, ಮೋದಿನ ಮಧ್ಯ ಯಾಕೆ ತರ್ತಿರಿ ಹಾ, ಊಟ ಬೇಕಾದರೆ ಹೋಟೆಲ್ಗೆ ಹೋಗಬೇಕು Jewellery Shopಗೆ ಅಲ್ಲ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ತಪ್ಪಿರೋದು ರಾಜ್ಯ ಸರ್ಕಾರದ್ದು ರಾಜ್ಯ ಸರ್ಕಾರಕ್ಕೆ ಪ್ರಶ್ನೆಸಿ ಮೊದಲು, 'ಮೋದಿಗಲ್ಲ ಸಿದ್ದುಗೆ ಕೇಳು .... ಉಪೇಂದ್ರ ಅವರ ಮಾತು ಒಮ್ಮೆ ಕೇಳು ಗೊತ್ತಾಗುತ್ತೆ.. ಎಲ್ಲಿ ಹೇಳಿದ್ರೆ ಪ್ರಾಬ್ಲಂ ಸಾಲ್ವ್ ಆಗುತ್ತೆ ಅಂತ', 'ರಾಜ್ಯ ಸರ್ಕಾರವನ್ನ ಏಕೆ ಪ್ರಶ್ನಿಸುವುದಿಲ್ಲ? ', 'ಯಾರನ್ನ ಕೇಳಬೇಕು ಯಾರನ್ನ ಕೇಳ್ತಾ ಇದ್ದೀರಾ. ಸಿನಿಮಾದವರು ಕಾಂಗ್ರೆಸ್ ಏಜೆಂಟ್ ಡಿಕೆ ಶಿವಕುಮಾರ್ ಏಜೆಂಟ್ ಗಳಂತೆ ವರ್ತಿಸುವುದು ನಿಲ್ಲಿಸಿ' ಎಂಬಂತಹ ಕಾಮೆಂಟ್ಗಳು ಹರಿದುಬರುತ್ತಿವೆ.

ಕಳೆದ ಒಂದು ವಾರದಲ್ಲಿ, ರಾಜ್ಯವೂ ಎರಡು ಬಂದ್ಗಳಿಗೆ ಸಾಕ್ಷಿಯಾಗಿದೆ. ಮೊದಲು ಬೆಂಗಳೂರು ಬಂದ್ ಮತ್ತು ನಂತರ ಇಡೀ ಕರ್ನಾಟಕ ಬಂದ್ ಮಾಡಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಕನ್ನಡ ಪರ ಸಂಘಟನೆಗಳು, ರೈತ ಸಂಘಗಳು, ಚಿತ್ರರಂಗ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.
ಆದರೆ, ಪ್ರತಿಭಟನೆಯ ನಡುವೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಗುರುವಾರ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್ಸಿ) ನಿರ್ಧಾರವನ್ನು ಎತ್ತಿಹಿಡಿದಿದೆ. ಅಕ್ಟೋಬರ್ 15 ರವರೆಗೆ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿದೆ.


Click it and Unblock the Notifications











