ಕರ್ನಾಟಕ ಬಂದ್: ನಟ ಶಿವರಾಜ್ಕುಮಾರ್ ನೇತೃತ್ವದಲ್ಲಿ ಚಿತ್ರರಂಗದಿಂದ ಪ್ರತ್ಯೇಕ ಪ್ರತಿಭಟನೆ
ಮಂಗಳವಾರ (ಸೆಪ್ಟಂಬರ್ 26) ನಡೆದ ಬೆಂಗಳೂರು ಬಂದ್ ಬೆನ್ನಲ್ಲೇ ಶುಕ್ರವಾರ (ಸೆಪ್ಟೆಂಬರ್ 29) ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆ ಕರುನಾಡು ಸ್ತಬ್ಧವಾಗಲಿದ್ದು, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆಯ ಮೇರೆಗೆ ರಾಜ್ಯಾದ್ಯಂತ ಹಲವು ಸಂಘ- ಸಂಸ್ಥೆಗಳು ಅಖಂಡ ಕರ್ನಾಟಕ ಬಂದ್ಗೆ ಬೆಂಬಲ ಘೋಷಿಸಿವೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮೇರೆಗೆ ಕನ್ನಡ ಚಿತ್ರರಂಗ ಕೂಡ ಬಂದ್ಗೆ ಸಂಪೂರ್ಣ ಬೆಂಬಲ ಘೋಷಿಸಿದೆ. 29ನೇ ತಾರೀಖು ಚಿತ್ರರಂಗದ ಎಲ್ಲಾ ಕೆಲಸ ನಿಲ್ಲಿಸಿ ಬಂದ್ಗೆ ಬೆಂಬಲ ನೀಡಲಿದೆ. ಮೊದಲು ವಾಣಿಜ್ಯ ಮಂಡಳಿ ಬಳಿ ಸೇರಿ ಅಲ್ಲಿಂದ ಟೌನ್ ಹಾಲ್ ಬಳಿಯ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಫಿಲಂ ಛೇಂಬರ್ ಅಧ್ಯಕ್ಷ ಎಮ್ ಎನ್ ಸುರೇಶ್ ಮಾಹಿತಿ ನೀಡಿದ್ದರು.

ಚಿತ್ರರಂಗದ ನೇತೃತ್ವ ವಹಿಸಲಿದ್ದಾರೆ ನಟ ಶಿವರಾಜ್ಕುಮಾರ್!
ಚಿತ್ರರಂಗದ ಪರವಾಗಿ ಅಧ್ಯಕ್ಷ ಎಮ್ ಎನ್ ಸುರೇಶ್ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಹಳಿಕೆ ನೀಡಿದ್ದಾರೆ. ಆದರೆ, ಇಲ್ಲಿ ಸಮಸ್ಯೆಯಿದ್ದದ್ದುಈ ಪ್ರತಿಭಟನೆಯ ನೇತೃತ್ವವನ್ನು ವಹಿಸುವವರು ಯಾರು ಎಂಬುದು. ಅದಕ್ಕೆ ಉತ್ತರ ಸಿಕ್ಕಿದ್ದು, ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ಚಿತ್ರರಂಗದ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ.
ಗುರುವಾರ ನಟ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕರ್ನಾಟಕ ಬಂದ್ ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು ಎಂದು ನಟನಲ್ಲಿ ಮನವಿ ಮಾಡಿದರು. ಅಧ್ಯಕ್ಷರ ಮನವಿಗೆ ಸ್ಪಂದಿಸಿರುವ ಶಿವರಾಜ್ಕುಮಾರ್ ಒಪ್ಪಿಗೆ ನೀಡಿದ್ದಾರೆ.
ನಾಳೆ ಕರ್ನಾಟಕ ಬಂದ್ ಏಕೆ ಎಂದ ಶಿವಣ್ಣ!
ಇನ್ನು, ಪ್ರತಿಭಟನೆಯ ನೇತೃತ್ವ ವಹಿಸಿಕೊಳ್ಳಿ ಎಂದು ಹೇಳಲು ಹೋಗಿದ್ದ ಫಿಲ್ಮಂ ಛೇಂಬರ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಶಿವರಾಜ್ಕುಮಾರ್ ವಿಚಿತ್ರ ಪ್ರಶ್ನೆ ಹಾಕಿದ್ದಾರೆ. ಅದು ನಾಳೆ ಬಂದ್ ಏಕೆ ಎಂದು!. ಹೌದು...ನಾಳೆ ಏಕೆ ಬಂದ್ ಮಾಡುತ್ತಿರುವುದು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ರೈತರ ಹೋರಾಟಕ್ಕೆ ಬೆಂಬಲ ನೀಡಲು ನಮ್ಮ ಪ್ರತಿಭಟನೆ ಎಂದು ಅವರಿಗೆ ತಿಳಿಸಿದ್ದೇವೆ ಎಂದು ಎಮ್ ಎನ್ ಸುರೇಶ್ ಹೇಳಿದ್ದಾರೆ.
ನಾಳೆ ಶಿವರಾಜ್ಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಸೆಪ್ಟೆಂಬರ್ 29ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಶಿವಾನಂದ ಸರ್ಕಲ್ ಬಳಿಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಕಾವೇರಿ ಹೋರಾಟಕ್ಕೆ ಸಂಬಂಧಿಸಿ ಚಿತ್ರರಂಗದಿಂದ ಪ್ರತ್ಯೇಕ ಹೋರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.

ಎಲ್ಲಾ ನಟ ನಟಿಯರು ಇಲ್ಲಿಯೇ ಬರಲಿದ್ದಾರೆ. ಶಿವಣ್ಣ, ರವಿಚಂದ್ರನ್, ಪ್ರೇಮ್, ಧ್ರುವಸರ್ಜಾ, ವಿಜಯ್ ರಾಘವೇಂದ್ರ, ಶ್ರೀಮುರುಳಿ, ಶೃತಿ, ಮಾಲಾಶ್ರೀ, ವಿನೋದ್ ಪ್ರಭಾಕರ್, ಪ್ರೇಮಾ ಸೇರಿದಂತೆ ಎಲ್ಲರಿಗೂ ತಿಳಿಸಿದ್ದೇವೆ. ಶಿವರಾಜ್ ಕುಮಾರ್ ಅವರು ಖಂಡಿತಾ ಬರುತ್ತೇನೆ ಎಂದು ಹೇಳಿದ್ದು ನಮಗೆ ಆನೆ ಬಲ ಬಂದಂತೆ ಎಂದು ಸುರೇಶ್ ಹೇಳಿದ್ದಾರೆ.
ಇನ್ನು, ಗುರುವಾರ ಅಂಗ ಸಂಸ್ಥೆಗಳ ಜೊತೆಗೆ ಸಭೆ ನಡೆಸಿದ್ದ ಬಳಿಕ ಫಿಲಂ ಛೇಂಬರ್ ಅಧ್ಯಕ್ಷ ಎಮ್ ಎನ್ ಸುರೇಶ್, "ರಾಜ್ ಕುಮಾರ್ ಅವರ ಕಾಲದಿಂದಲೂ ಚಿತ್ರರಂಗ ನಾಡಿನ ಪರ ಇದೆ. ಮುಂದೆಯೂ ಚಿತ್ರರಂಗ ನಾಡು ನುಡಿ ವಿಚಾರದಲ್ಲಿ ಜೊತೆ ಇರಲಿದೆ. 29ನೇ ತಾರೀಖು ಚಿತ್ರರಂಗದ ಎಲ್ಲಾ ಕೆಲಸ ನಿಲ್ಲಿಸಿ ಬಂದ್ಗೆ ಬೆಂಬಲ ನೀಡಲಿದೆ. ಟೌನ್ ಹಾಲ್ ಬಳಿಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ" ಎಂದಿದ್ದರು. ಆದರೆ, ಈಗ ಗುರುರಾಜ ಕಲ್ಯಾಣ ಮಂಟಪದಲ್ಲಿ ಚಿತ್ರರಂಗದಿಂದ ಪ್ರತ್ಯೇಕ ಹೋರಾಟ ನಡೆಯಲಿದೆ.


Click it and Unblock the Notifications











