ಹಣ ವಂಚನೆ ಪ್ರಕರಣ: ರಾಧಿಕಾ ಕುಮಾರಸ್ವಾಮಿ ಗೆ ಸಿಸಿಬಿ ನೊಟೀಸ್
ಸ್ವಾಮಿ ಅಲಿಯಾಸ್ ಯುವರಾಜ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಮನ್ಸ್ ನೀಡಿದ್ದಾರೆ.
ನಾಳೆ (ಜನವರಿ 8) ರಂದು ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ನೀಡಲಾಗಿದ್ದು. ಈ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಆರ್ಎಸ್ಎಸ್ ಮುಖಂಡ ಎಂದು ಹೇಳಿಕೊಂಡು, ವಿವಿಧ ನಿಗಮಗಳ ಅಧ್ಯಕ್ಷ ಸ್ಥಾನ ಕೊಡಿಸುತ್ತೇನೆ, ರಾಜ್ಯದ ರಾಜ್ಯಪಾಲರನ್ನಾಗಿ ಮಾಡುತ್ತೇನೆ ಎಂದೆಲ್ಲಾ ಹೇಳಿ ಹಲವರಿಂದ ಕೋಟ್ಯಂತರ ರೂಪಾಯಿ ಹಣವನ್ನು ಈ ಸ್ವಾಮಿ ಅಲಿಯಾಸ್ ಯುವರಾಜ್ ವಸೂಲಿ ಮಾಡಿದ್ದರು. ಪ್ರಸ್ತುತ ಈತ ಬಂಧನದಲ್ಲಿದ್ದಾನೆ.

ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಸಮನ್ಸ್
ಯುವರಾಜ್ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ಲಕ್ಷಾಂತರ ಹಣ ಹೋಗಿರುವುದು ಸಿಸಿಬಿ ತನಿಖೆಯಿಂದ ಗೊತ್ತಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಅನ್ನು ಈಗಾಗಲೇ ವಿಚಾರಣೆ ನಡೆಸಿದ ಸಿಸಿಬಿ. ಇದೀಗ ರಾಧಿಕಾ ಕುಮಾರಸ್ವಾಮಿ ಅವರಿಗೂ ಸಮನ್ಸ್ ನೀಡಿದೆ.

ನನ್ನ ಖಾತೆಗೆ 75 ಲಕ್ಷ ಹಾಕಿಸಿದ್ದಾರೆ: ರಾಧಿಕಾ ಕುಮಾರಸ್ವಾಮಿ
ಈ ಬಗ್ಗೆ ನಿನ್ನೆಯೇ ಸುದ್ದಿಗೋಷ್ಠಿ ನಡೆಸಿದ್ದ ರಾಧಿಕಾ ಕುಮಾರಸ್ವಾಮಿ, 'ಯುವರಾಜ್, ತಾನೊಂದು ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಆ ಕಾರಣಕ್ಕೆ ಅವರ ಸ್ವಂತ ಖಾತೆಯಿಂದ ನನಗೆ 15 ಲಕ್ಷ ವರ್ಗಾವಣೆ ಮಾಡಿದ್ದರು. ಮತ್ತೊಬ್ಬರ ಖಾತೆಯಿಂದ 60 ಲಕ್ಷ ವರ್ಗಾವಣೆ ಮಾಡಿದ್ದರು' ಎಂದು ಹೇಳಿದ್ದಾರೆ.

ಜ್ಯೋತಿಷಿ ಆದ ಕಾರಣ ಪರಿಚಯ: ರಾಧಿಕಾ
'ಜ್ಯೋತಿಷಿ ಆಗಿದ್ದ ಕಾರಣ ಅವರ ಪರಿಚಯ ಬಹಳ ವರ್ಷಗಳಿಂದಲೂ ಇದೆ. ಆದರೆ ನಮ್ಮ ನಡುವೆ ರಾಜಕೀಯ ವಿಷಯದ ಚರ್ಚೆಯಾಗಲಿ, ರಾಜಕೀಯ ಸಂಬಂಧವಾಗಲಿ ಇಲ್ಲ. ಅವರದ್ದು ಒಂದು ಪ್ರೊಡಕ್ಷನ್ ಹೌಸ್ ಇದ್ದು, ಸಿನಿಮಾ ನಿರ್ಮಿಸಬೇಕು ಎಂದ ಕಾರಣವಷ್ಟೆ ನಾನು ಹಣ ಪಡೆದಿದ್ದೇನೆ' ಎಂದಿದ್ದರು.

ಸಿಸಿಬಿ ವಿಚಾರಣೆಯಲ್ಲಿ ನೀಡುವ ಮಾಹಿತಿಯೇ ಅಂತಿಮ
ಸ್ವಾಮಿ ಅಲಿಯಾಸ್ ಯುವರಾಜ್ ಹಲವು ದೊಡ್ಡ-ದೊಡ್ಡ ವ್ಯಕ್ತಿಗಳೊಂದಿಗೆ ಇದ್ದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ಅವನ್ನೆಲ್ಲಾ ನೋಡಿ ಮೋಸ ಹೋದೆ. ಆ ವ್ಯಕ್ತಿ ಅಂಥಹವನೆಂದು ಗೊತ್ತಿರಲಿಲ್ಲ ಎಂದಿದ್ದಾರೆ ರಾಧಿಕಾರ. ಆದರೆ ಈಗ ರಾಧಿಕಾರ ಸಿಸಿಬಿ ವಿಚಾರಣೆ ನಡೆಯಲಿದ್ದು, ಸಿಸಿಬಿ ಮುಂದೆ ಅವರು ಏನು ಹೇಳುತ್ತಾರೆ ಎಂಬುದೇ ಅಂತಿಮವಾಗಲಿದೆ.


Click it and Unblock the Notifications











