ತೆಲುಗು ವಾರಿಯರ್ಸ್ ವಿರುದ್ಧ ಸೆಮಿಫೈನಲ್ ಸೋತ ಕರ್ನಾಟಕ; ವಿಲನ್ ಆದ ಯುವರತ್ನ ಮ್ಯೂಸಿಕ್ ಡೈರೆಕ್ಟರ್!

ಸದ್ಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಹತ್ತನೇ ಆವೃತ್ತಿ ಜರುಗುತ್ತಿದ್ದು, ಮಾರ್ಚ್ 24ರಂದು ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಸುತ್ತಿನ ಪಂದ್ಯಗಳು ಜರುಗಿವೆ. ಸಂಜೆ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ 6 ವಿಕೆಟ್ಗಳ ಗೆಲುವನ್ನು ದಾಖಲಿಸಿ ಫೈನಲ್ ಪಂದ್ಯಕ್ಕೆ ಎಂಟ್ರಿ ಪಡೆದುಕೊಂಡಿದೆ. ತೆಲುಗು ವಾರಿಯರ್ಸ್ ಇಂದು ( ಮಾರ್ಚ್ 25 ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭೋಜ್ಪುರಿ ದಬಾಂಗ್ಸ್ ವಿರುದ್ಧ ಸೆಣಸಾಡಲಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕನೇನಿ ಫೀಲ್ಡಿಂಗ್ ಆಯ್ದುಕೊಂಡು ತಮ್ಮ ಎದುರಾಳಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಪ್ರದೀಪ್ ಬೋಗಾದಿ ಅವರ ಅಬ್ಬರದ ಅಜೇಯ ಅರ್ಧಶತಕದ ನೆರವಿನಿಂದ 10 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿತು.
ಮೊದಲ ಇನ್ನಿಂಗ್ಸ್:
ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಡಾರ್ಲಿಂಗ್ ಕೃಷ್ಣ 33, ಚಂದನ್ ಕುಮಾರ್ 5, ರಾಜೀವ್ ಹನು 4, ಕರಣ್ ಆರ್ಯನ್ ಡಕ್ ಔಟ್, ಅರುಣ್ ಬಚ್ಚನ್ ಡಕ್ ಔಟ್, ಕಿಚ್ಚ ಸುದೀಪ್ ಹಾಗೂ ಪ್ರದೀಪ್ ಬೋಗಾದಿ 2 ಸಿಕ್ಸರ್, 5 ಬೌಂಡರಿ ಸಹಿತ 26 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು. ತೆಲುಗು ವಾರಿಯರ್ಸ್ ಪರ ಸಾಮ್ರಾಟ್ ಎರಡು ವಿಕೆಟ್ ಪಡೆದರೆ, ಪ್ರಿನ್ಸ್ ಹಾಗೂ ಸಚಿನ್ ಜೋಶಿ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ತೆಲುಗು ವಾರಿಯರ್ಸ್ ತಂಡ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ನಲ್ಲಿ 10 ಓವರ್ಗೆ 6 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿತು. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 4 ರನ್ಗಳ ಮುನ್ನಡೆಯನ್ನು ಕಾಯ್ದುಕೊಂಡಿತು.ತೆಲುಗು ವಾರಿಯರ್ಸ್ ಪರ ಅಖಿಲ್ ಅಕ್ಕಿನೇನಿ 14, ಸಚಿನ್ ಜೋಷಿ 10, ಪ್ರಿನ್ಸ್ 13, ಅಶ್ವಿನ್ ಬಾಬು 36, ರಘು 4, ರೋಷನ್ 11 ಹಾಗೂ ಸಾಮ್ರಾಟ್ ಯಾವುದೇ ರನ್ ಕಲೆ ಹಾಕದೇ ಅಜೇಯರಾಗಿ ಉಳಿದುಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ಪರ ಸುನಿಲ್ ರಾವ್ ಎರಡು ವಿಕೆಟ್ ಪಡೆದರೆ, ಜಯರಾಮ್ ಕಾರ್ತಿಕ್, ಪೆಟ್ರೋಲ್ ಪ್ರಸನ್ನ, ಡಾರ್ಲಿಂಗ್ ಕೃಷ್ಣ ಹಾಗೂ ಪ್ರದೀಪ್ ಬೋಗಾಗಿ ತಲಾ ಒಂದೊಂದು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್:
ಮೊದಲ ಇನ್ನಿಂಗ್ಸ್ನಲ್ಲಿ 4 ರನ್ಗಳ ಮುನ್ನಡೆ ಕಾಯ್ದುಕೊಂಡಿದ್ದ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಇನ್ನಿಂಗ್ಸ್ನಲ್ಲಿ 10 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿತು. ಈ ಮೂಲಕ ಎದುರಾಳಿ ತೆಲುಗು ವಾರಿಯರ್ಸ್ ತಂಡಕ್ಕೆ ಗೆಲ್ಲಲು 103 ರನ್ಗಳ ಗುರಿಯನ್ನು ನೀಡಿತು. ಕರ್ನಾಟಕ ಬುಲ್ಡೋಜರ್ಸ್ ಪರ ರಾಜೀವ್ ಹನು 32, ಕಿಚ್ಚ ಸುದೀಪ್ 1, ಜಯರಾಮ್ ಕಾರ್ತಿಕ್ 21, ಕರಣ್ ಆರ್ಯನ್ 13, ಡಾರ್ಲಿಂಗ್ ಕೃಷ್ಣ 13 ಹಾಗೂ ಅರುಣ್ ಬಚ್ಚನ್ ಅಜೇಯ 12 ರನ್ ಬಾರಿಸಿದರು. ತೆಲುಗು ವಾರಿಯರ್ಸ್ ಪರ ಸಚಿನ್ ಜೋಷಿ ಮೂರು ವಿಕೆಟ್ ಕಬಳಿಸಿದರು.
ಅತ್ತ ಕರ್ನಾಟಕ ಬುಲ್ಡೋಜರ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ತೆಲುಗು ವಾರಿಯರ್ಸ್ 9.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಕಂಡು ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ತೆಲುಗು ವಾರಿಯರ್ಸ್ ಪರ ಅಶ್ವಿನ್ ಬಾಬು 5, ರೋಷನ್ 27, ಆರ್ ರಘು 22, ಅಖಿಲ್ ಅಕ್ಕಿನೇನಿ 5, ಪ್ರಿನ್ಸ್ ಅಜೇಯ 11 ಹಾಗೂ ಎಸ್ ಎಸ್ ಥಮನ್ ಅಜೇಯ 25 ರನ್ ಬಾರಿಸಿದರು. ಕರ್ನಾಟಕ ಬುಲ್ಡೋಜರ್ಸ್ ಪರ ಗಣೇಶ್ ಎರಡು ವಿಕೆಟ್ ಹಾಗೂ ಪೆಟ್ರೋಲ್ ಪ್ರಸನ್ನ ಒಂದು ವಿಕೆಟ್ ಪಡೆದರು.
ಮೊದಲಿಗೆ ರೋಷನ್ ಹಾಗೂ ರಘು ಸ್ಪೋಟಕ ಬ್ಯಾಟಿಂಗ್ನಿಂದ ಅಬ್ಬರದ ಆರಂಭ ಪಡೆದುಕೊಂಡು ಆರಂಭದಿಂದಲೇ ಗೆಲುವಿನ ಟ್ರ್ಯಾಕ್ನಲ್ಲಿದ್ದ ತೆಲುಗು ವಾರಿಯರ್ಸ್ ಈ ಇಬ್ಬರ ವಿಕೆಟ್ ಕಳೆದುಕೊಂಡ ಬಳಿಕ ಹಾಗೂ ಅಖಿಲ್ ಅಕ್ಕಿನೇನಿಯೂ ಸಹ ಔಟ್ ಆದ ಬಳಿಕ ತುಸು ನಿಧಾನವಾಗಿ ರನ್ ಗಳಿಸಲಾರಂಭಿಸಿತು. ಈ ಸಂದರ್ಭದಲ್ಲಿ ವಿಕೆಟ್ ಪಡೆದಿದ್ದರೆ ಕರ್ನಾಟಕ ಬುಲ್ಡೋಜರ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದರೆ ಸಂಗೀತ ನಿರ್ದೇಶಕ ಥಮನ್ ಅದಕ್ಕೆ ಅವಕಾಶ ನೀಡಲಿಲ್ಲ. ವಿಕೆಟ್ ಒಪ್ಪಿಸದೇ ಅನಿವಾರ್ಯ ಪರಿಸ್ಥಿತಿಯಲ್ಲಿ ಬಾಲ್ ವ್ಯರ್ಥ ಮಾಡದೇ ರನ್ ಗಳಿಸಿ ಅಂತಿಮ ಓವರ್ನಲ್ಲಿಯೂ ಬೌಂಡರಿ ಬಾರಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ತೆಲುಗು ಸಂಗೀತ ನಿರ್ದೇಶಕ ಥಮನ್ ಪುನೀತ್ ರಾಜ್ಕುಮಾರ್ ನಟನೆಯ ಪವರ್, ಚಕ್ರವ್ಯೂಹ ಹಾಗೂ ಯುವರತ್ನ ಸೇರಿದಂತೆ ಜಾಗ್ವಾರ್ ಹಾಗೂ ಜೂಮ್ ಎಂಬ ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.


Click it and Unblock the Notifications











