CCL 2025: ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಸೋಲಿನ ಬಗ್ಗೆ ಸುದೀಪ್ ಪ್ರತಿಕ್ರಿಯೆ
ಸಿಸಿಎಲ್ ಕ್ರಿಕೆಟ್ 2025 ಫೈನಲ್ ಪಂದ್ಯಕ್ಕೆ ಕೆಲವೇ ಕ್ಷಣಗಳು ಬಾಕಿಯಿದೆ. ನಿನ್ನೆ(ಮಾರ್ಚ್ 1) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಸೋತಿತ್ತು. ಅಲ್ಲಿಗೆ ಟ್ರೋಫಿ ಗೆಲ್ಲುವ ಕನಸು ಕರಗಿತ್ತು. ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
11ನೇ ಸೀಸನ್ ಯಶಸ್ವಿಯಾಗಿ ಮುಕ್ತಾಯದ ಹಂತ ತಲುಪಿದೆ. ಲೀಗ್ ಹಂತದ ಮೂರು ಪಂದ್ಯಗಳನ್ನು ಗೆದ್ದು ನಟ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಅಬ್ಬರಿಸಿತ್ತು. ಈ ಬಾರಿ ನಾವೇ ಚಾಂಪಿಯನ್ ಎನ್ನುವಂತೆ ತಂಡ ಅದ್ಭುತ ಪ್ರದರ್ಶನ ತೋರಿತ್ತು. ಆದರೆ ಪಂಜಾಬ್ ದೇ ಶೇರ್ ವಿರುದ್ಧದ ಪಂದ್ಯದಲ್ಲಿ ಪರಾಭವಗೊಂಡಿತ್ತು. ಲೀಗ್ ಹಂತದಲ್ಲೇ ಚೆನ್ನೈ ವಿರುದ್ಧ ಗೆದ್ದಿದ್ದ ಬುಲ್ಡೋಜರ್ಸ್ ಸೆಮಿಫೈನಲ್ನಲ್ಲಿ ಮಾತ್ರ ಅವರ ವಿರುದ್ಧವೇ ಸೋಲುಂಡರು.

ಫೈನಲ್ ಪಂದ್ಯಕ್ಕೂ ಮುನ್ನ ನಟ ಸುದೀಪ್ ಟ್ವೀಟ್ ಮಾಡಿ ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಬೆಂಬಲ ನೀಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು.. ಖಂಡಿತ ನಮ್ಮದು ಟ್ರೋಫಿ ಗೆಲ್ಲಲು ಅರ್ಹ ತಂಡವಾಗಿತ್ತು. ಆದರೂ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಆತ್ಮೀಯ ಸ್ವಾಗತ ಮತ್ತು ಪ್ರೀತಿ ನೀಡಿದ ಮೈಸೂರಿನ ಎಲ್ಲಾ ಸ್ನೇಹಿತರಿಗೆ ಧನ್ಯವಾದಗಳು. ಫೈನಲ್ ಪಂದ್ಯ ಆಡುತ್ತಿರುವ ಚೆನ್ನೈ ರೈನೋಸ್ ಮತ್ತು ಪಂಜಾಬ್ ದೇ ಶೇರ್ ತಂಡಗಳಿಗೆ ಶುಭಾಶಯಗಳು" ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಮೈಸೂರಿನ ಶ್ರೀಕಂಠ ನರಸಿಂಹರಾಜ ದತ್ತ ಒಡೆಯರ್ ಮೈದಾನದಲ್ಲಿ ಸಿಸಿಎಲ್ ಸೆಮಿ-ಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ವೇದಿಕೆಯಾಗಿದೆ. ಮೈಸೂರಿನ ಅಭಿಮಾನಿಗಳ ನಡುವೆ ಚೆನ್ನೈ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಆಡಿತ್ತು. 4 ಇನ್ನಿಂಗ್ಸ್ಗಳಾಗಿ ಸಿಸಿಎಲ್ ಟೂರ್ನಿ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಟಾಸ್ ಸೋತಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ ಸುದೀಪ್ ನೇತೃತ್ವದ ತಂಡ 10 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 111 ರನ್ ಕಲೆ ಹಾಕಿದ್ದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 105 ರನ್ ಪೇರಿಸಿತ್ತು. ಕೇಲವ 6 ರನ್ಗಳ ಮುನ್ನಡೆಯೊಂದಿಗೆ ಕರ್ನಾಟಕ ಬುಲ್ಡೋಜರ್ಸ್ 2ನೇ ಇನ್ನಿಂಗ್ಸ್ ಆರಂಭಿಸಿದ್ದರು.
5 ವಿಕೆಟ್ ಕಳೆದುಕೊಂಡು 10 ಓವರ್ಗಳಲ್ಲಿ ತಂಡ 125 ರನ್ ಕಲೆ ಹಾಕಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಚೆನ್ನೈ ರೈನೋಸ್ ಒಟ್ಟು 131 ರನ್ ಗುರಿ ಬೆನ್ನಟ್ಟಿತು. ಅಂತಿಮವಾಗಿ ಇನ್ನು 3 ಎಸೆತಗಳು ಬಾಕಿ ಇರುವಂತೆ 132 ರನ್ ಗಳಿಸಿ ಚೆನ್ನೈ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿತು. ನಾಲ್ಕು ಇನ್ನಿಂಗ್ಸ್ನಲ್ಲಿ ವಿಕೆಟ್ ಬಿದ್ದಿದ್ದು ಕಮ್ಮಿ. ರನ್ ಚೆನ್ನಾಗಿ ಹರಿದು ಬಂತು. ಅದು ಬ್ಯಾಟಿಂಗ್ ಪಿಚ್ ಎನ್ನುವುದು ಗೊತ್ತಾಗಿತ್ತು.
ಒಟ್ಟಾರೆ ಮೊದಲು ಆಡಿದ 3 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಟ್ರೋಫಿ ಗೆಲ್ಲುವುದು ಖಚಿತ ಎಂದೇ ಕೆಲವರು ಭಾವಿಸಿದ್ದರು. ಕಿಚ್ಚನ ತಂಡ ಫೈನಲ್ಗೆ ಬರುತ್ತದೆ ಎಂದು ಕೆಲ ಅಭಿಮಾನಿಗಳು ಟಿಕೆಟ್ ಖರೀದಿಸಿ ಕಾಯುತ್ತಿದ್ದರು. ಅವರಿಗೆಲ್ಲಾ ನಿರಾಸೆ ಆದಂತಾಗಿದೆ. 3ನೇ ಬಾರಿ ಸಿಸಿಎಲ್ ಟ್ರೋಫಿ ಗೆಲ್ಲುವ ಕಿಚ್ಚನ ಆಸೆ ಈಡೇರಲಿಲ್ಲ.


Click it and Unblock the Notifications











