CCL 2025 ; ಮುಂಬೈ ಹೀರೋಗಳನ್ನು ಸುಲಭವಾಗಿ ಮಣಿಸಿದ ಕರ್ನಾಟಕ ಬುಲ್ದೋಜರ್ಸ್...!
ಸಿಸಿಎಲ್ 11ನೇ (CCL 2025) ಸೀಸನ್ ಫೆಬ್ರವರಿ 8ನೇ ತಾರೀಕಿನಿಂದ ಅದ್ಧೂರಿಯಾಗಿ ಆರಂಭ ಆಗಿವೆ. ಈಗ ಎರಡನೇ ವೀಕೆಂಡ್ನಲ್ಲಿ ಮತ್ತೆ ಹೈ ವೋಲ್ಟೇಜ್ ಪಂದ್ಯಗಳು ನಡೆಯುತ್ತಿವೆ. ಈ ವಾರು ಒಟ್ಟು ಆರು ಪಂದ್ಯಗಳು ನಡೆಯಲಿದ್ದು, ಹೈದರಾಬಾದ್ನಲ್ಲಿ ಇಂದು ಕರ್ನಾಟಕ ಬುಲ್ದೋಜರ್ಸ್ ತಂಡ ಮುಂಬೈ ಹೀರೋಸ್ ತಂಡವನ್ನು ಸುಲಭವಾಗಿ ಮಣಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಹೀರೋಸ್ ತಂಡ ಆರಂಭದಲ್ಲಿಯೇ ಡಾರ್ಲಿಂಗ್ ಕೃಷ್ಣ ಕ್ಯಾಚನ್ನು ಕೈ ಚೆಲ್ಲಿತು. ಈ ಮೂಲಕ ಮ್ಯಾಚ್ ಕೂಡ ಮುಂಬೈ ಹೀರೋಸ್ ತಂಡದ ತೆಕ್ಕೆಯಿಂದ ಜಾರಿ ಬಿತ್ತು. ಸಿಕ್ಕ ಈ ಅವಕಾಶವನ್ನು ಅತ್ಯದ್ಭುತವಾಗಿ ಬಳಸಿಕೊಂಡ ಡಾರ್ಲಿಂಗ್ ಕೃಷ್ಣ ಮುಂಬೈ ಬೌಲರ್ಗಳ ಬೆವರು ಇಳಿಸಿದರು.

ರಾಜೀವ್ ಜೊತೆ ಕೃಷ್ಣ ಮೊದಲ ವಿಕೆಟ್ಗೆ 48 ಎಸೆತಗಳಲ್ಲಿ 116 ಜೊತೆಯಾಟ ಆಡಿದರು. ಕೇವಲ 33 ಎಸೆತಗಳಲ್ಲಿ ನೂರು ರನ್ ಬಾರಿಸಿದ ಡಾರ್ಲಿಂಗ್ ಕೃಷ್ಣ ತಮ್ಮ ಈ ಇನಿಂಗ್ಸ್ನಲ್ಲಿ 10 ಫೋರ್ ಮತ್ತು 08 ಸಿಕ್ಸರ್ಗಳನ್ನು ಸಿಡಿಸಿದರು. ಈ ಮೂಲಕ ಸಿಸಿಎಲ್ ಇತಿಹಾಸದಲ್ಲಿಯೇ ಹೊಸ ಇತಿಹಾಸವನ್ನು ಬರೆದರು. ಡಾರ್ಲಿಂಗ್ ಕೃಷ್ಣ ಅವರ ಸ್ಫೋಟಕ ಬ್ಯಾಟಿಂಗ್ನ ನೆರವಿನಿಂದ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಇನಿಂಗ್ಸ್ನಲ್ಲಿ 171 ರನ್ಗಳನ್ನು ಗಳಿಸಿತು. ಈ ಮೂಲಕ ಸಿಸಿಎಲ್ 2025ರಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ಡಾರ್ಲಿಂಗ್ ಕೃಷ್ಣ 110 ರನ್ಗಳನ್ನು ಬಾರಿಸಿ ಈ ಟೂರ್ನಾಮೆಂಟ್ನಲ್ಲಿ ಮೂರನೇ ಬಾರಿ ಅಜೇಯರಾಗಿ ಉಳಿದರು.
ಕರ್ನಾಟಕ ಬುಲ್ಡೋಜರ್ಸ್ ನೀಡಿದ 171 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಮುಂಬೈ ಹೀರೋಸ್ ತಂಡ ಆರಂಭದಲ್ಲಿಯೇ ವಿಕೆಟ್ಗಳನ್ನು ಕಳೆದುಕೊಂಡಿತು. ಜೆಕೆ ಮುಂಬೈ ನಾಯಕ ಶಖೀಬ್ ಸಲೀಂ ಮತ್ತು ರಾಜೀವ್ ಪಿಳ್ಳೈ ಅವರ ವಿಕೆಟ್ ಕಬಳಿಸಿದರೆ ಸುನೀಲ್ ರಾವ್ ಅವರು ಶರದ್ ಖೇಲ್ಕರ್ ಅವರ ವಿಕೆಟ್ ಪಡೆದರು. ಏಕಾಂಗಿ ಹೋರಾಟ ನಡೆಸಿದ ಶಬ್ಬೀರ್ ಅಹ್ಲುವಾಲಿಯಾ 16 ಎಸೆತಗಳಲ್ಲಿ 35 ರನ್ ಗಳಿಸಿದರು. ಮೊದಲ ಇನಿಂಗ್ಸ್ನಲ್ಲಿ ಮುಂಬೈ ಹೀರೋಸ್ ತಂಡ ಕೇವಲ ನೂರು ರನ್ ಮಾತ್ರ ಗಳಿಸಿತು.
ಇನ್ನು ಎರಡನೇ ಇನಿಂಗ್ಸ್ನಲ್ಲಿ ಜೆ ಕೆ ಜೊತೆ ಮಂಜುನಾಥ್ ಗೌಡ ಆರಂಭಿಕ ಬ್ಯಾಟ್ಸಮನ್ ಆಗಿ ಕಣಕ್ಕಿಳಿದರು. ಕೇವಲ 26 ಬಾಲ್ಗಳಲ್ಲಿ ಮಂಜುನಾಥ್ ಗೌಡ 55 ರನ್ ಬಾರಿಸಿದರು. ತಮ್ಮ ಅರ್ಧ ಶತಕವನ್ನು ಪೂರ್ಣಗೊಳಿಸಿದರು. ನವದೀಪ್ಗೆ ವಿಕೆಟ್ ಒಪ್ಪಿಸಿದರು. ಆ ನಂತರ ಮತ್ತೆ ಕಣಕ್ಕಿಳಿದ ಡಾರ್ಲಿಂಗ್ ಕೃಷ್ಣ 8 ಎಸೆತಗಳಲ್ಲಿ 19 ರನ್ ಗಳಿಸಿದರು. ಶಬ್ಬೀರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಈ ಸಿಸಿಎಲ್ನಲ್ಲಿ ಮೊದಲ ಬಾರಿ ತಮ್ಮ ವಿಕೆಟ್ನ್ನು ಒಪ್ಪಿಸಿದರು ಡಾರ್ಲಿಂಗ್ ಕೃಷ್ಣ. ಮಂಜುನಾಥ್ ಗೌಡ ಮತ್ತು ಡಾರ್ಲಿಂಗ್ ಕೃಷ್ಣ ಅವರ ಬ್ಯಾಟಿಂಗ್ ನೆರವಿನಿಂದ ಎರಡನೇ ಇನಿಂಗ್ಸ್ನಲ್ಲಿ ಕರ್ನಾಟಕ ಬುಲ್ದೋಜರ್ಸ್ ತಂಡ ಎರಡನೇ ಇನಿಂಗ್ಸ್ನಲ್ಲಿ 127 ರನ್ ಗಳಿಸಿತು. ಈ ಮೂಲಕ ಒಟ್ಟಾರೆ 198ರನ್ ಗಳ ಮುನ್ನಡೆಯನ್ನು ಪಡೆಯಿತು. ಮುಂಬೈ ಹೀರೋಸ್ ಗೆ 199 ರನ್ಗಳ ಟಾರ್ಗೆಟ್ ನೀಡಿತು.
199 ರನ್ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಹೀರೋಸ್ ತಂಡಕ್ಕೆ ಡಾರ್ಲಿಂಗ್ ಕೃಷ್ಣ ತಮ್ಮ ಬೌಲಿಂಗ್ ಮೂಲಕ ಆರಂಭಿಕ ಆಘಾತ ನೀಡಿದರು. ಸಿದ್ಧಾಂಥ್ ಅವರನ್ನು ಪೆವಲಿಯನ್ಗೆ ಕಳಿಸಿದರು. ಆ ನಂತರ್ ಅನೂಪ್ ಭಂಡಾರಿ ನಿಶಾಂತ್ ದಹಿಯಾ ಅವರನ್ನು ಔಟ್ ಮಾಡಿದರು. ಮೊದಲ ಎರಡು ವಿಕೆಟ್ ಕಳೆದುಕೊಂಡ ನಂತರ ಗೆಲ್ಲುವುದು ಅಸಾಧ್ಯವಾದರೂ ಕೂಡ ಮುಂಬೈ ಹೀರೋಸ್ ತಂಡ ಸಂಪೂರ್ಣ ಶ್ರಮವನ್ನು ಹಾಕಿತು. ಅದರಲ್ಲಿಯೂ ತಂಡದ ನಾಯಕ ಶಖೀಬ್ ಮತ್ತು ಶಬ್ಬೀರ್ ಪ್ರತಿಯೊಂದು ಎಸೆತವನ್ನು ಬೌಂಡರಿ ಹೊರಗಡೆ ಕಳಿಸುವ ಪ್ರಯತ್ನ ಮಾಡಿದರು. ಅತ್ಯುತ್ತಮ ಲಯದಲ್ಲಿ ಇದ್ದ ಮುಂಬೈ ಹೀರೋಸ್ ತಂಡದ ಸ್ಟಾರ್ ಪ್ಲೇಯರ್ ಶಬ್ಬೀರ್ 49 ರನ್ಗಳಿಸಿ ಸುನೀಲ್ ರಾವ್ಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಎರಡನೇ ಇನಿಂಗ್ಸ್ನಲ್ಲಿ ಹತ್ತು ಓವರ್ಗಳಲ್ಲಿ 113 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮುಂಬೈ ಹೀರೋಸ್ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ 85ರನ್ಗಳಿಂದ ಸುಲಭವಾಗಿ ಮಣಿಸಿತು.


Click it and Unblock the Notifications











