CCL 2026 Final: ಇಂದು ಸಿಸಿಎಲ್ ಫೈನಲ್ ಕದನ; ಕರ್ನಾಟಕ ಬುಲ್ಡೋಜರ್ಸ್ ಎದುರಾಳಿಯ ಬಲಾಬಲ?
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ರೋಚಕ ಸೆಮಿಫೈನಲ್ ಪಂದ್ಯಗಳ ಬಳಿಕ ಫೈನಲ್ ಪಂದ್ಯಕ್ಕ ಕ್ಷಣಗಣನೆ ಶುರುವಾಗಿದೆ. ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಕರ್ನಾಟಕ ಬುಲ್ಡೋಜರ್ಸ್ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ. ಸೆಮಿಫೈನಲ್ ರೋಚಕ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ತಂಡವನ್ನು ಬಗ್ಗುಬಡಿದು ಫೈನಲ್ ಪ್ರವೇಶಿಸಿದೆ.
ಇದು ಸಿಸಿಎಲ್ 12ನೇ ಆವೃತ್ತಿ. ಈಗಾಗಲೇ 2 ಬಾರಿ ಕಿಚ್ಚನ ಪಡೆ ಚಾಂಪಿಯನ್ ಆಗಿ ಸಂಭ್ರಮಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಸಾಧ್ಯವಾಗುತ್ತಿರಲಿಲ್ಲ. ಫೈನಲ್ ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿರುವ ಉದಾಹರಣೆಗಳಿವೆ. ಆದರೆ ಈ ಬಾರಿ ತಂಡ ಅದ್ಭುತ ಫಾರ್ಮ್ನಲ್ಲಿದ್ದು ಟ್ರೋಫಿ ಎತ್ತಿ ಹಿಡಿಯುವುದು ಗ್ಯಾರಂಟಿ ಎನ್ನಲಾಗ್ತಿದೆ. ಅಷ್ಟರಮಟ್ಟಿಗೆ ತಂಡ ಪ್ರದರ್ಶನ ತೋರುತ್ತಿದೆ. ಹೈದರಾಬಾದ್ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಯುತ್ತದೆ ಎನ್ನಲಾಗಿತ್ತು. ಆದರೆ ಬಳಿಕ ಕೊಯಂಬತ್ತೂರಿನ ಎಸ್ಎನ್ಆರ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಇಂದು(ಫೆಬ್ರವರಿ 1) ಸಂಜೆ ಅದೇ ಮೈದಾನದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಕಿಚ್ಚನ ಪಡೆ ಎದುರಿಸಲಿದೆ.

ಜಿಸ್ಸು ಸೇನ್ಗುಪ್ತಾ ನೇತೃತ್ವದ ಬೆಂಗಾಲ್ ಟೈಗರ್ಸ್ ತಂಡ ಕೂಡ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಲೀಗ್ ಹಂತದಲ್ಲಿ ಆಡಿದ 3 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದ ತಂಡ ಕೇರಳ ಸ್ಟ್ರೈಕರ್ಸ್ ತಂಡವನ್ನು ಮಣಿಸಿ ಫೈನಲ್ ಹಂತಕ್ಕೇರಿದೆ. ಹಾಗಾಗಿ ಅಂತಿಮ ಹಣಾಹಣಿಯಲ್ಲಿ ಭಾರೀ ಪೈಪೋಟಿ ಏರ್ಪಡುವ ಸುಳಿವು ಸಿಗುತ್ತಿದೆ.
ಸಂಜೆ 6.30ಕ್ಕೆ ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ಬೆಂಗಾಲ್ ಟೈಗರ್ಸ್ ಪಂದ್ಯ ಆರಂಭವಾಗಲಿದೆ. ಜಿಯೋ ಹಾಟ್ಸ್ಟರ್ನಲ್ಲಿ ಪಂದ್ಯವನ್ನು ಲೈವ್ ವೀಕ್ಷಿಸಬಹುದು. ಜೊತೆಗೆ ಸುವರ್ಣ ಪ್ಲಸ್ ವಾಹಿನಿಯಲ್ಲಿ ಕೂಡ ರೋಚಕ ಪಂದ್ಯ ಕಣ್ತುಂಬಿಕೊಳ್ಳಬಹುದು. ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 30 ವರ್ಷ ಕಳೆದಿದೆ. ಜನವರಿ 31ರಂದು ಚಿತ್ರರಂಗದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು. ಅದೇ ಸಂಭ್ರಮದಲ್ಲಿ ಕಿಚ್ಚನಿಗೆ ಗೆಲುವಿನ ಉಡುಗೊರೆ ಸಿಕ್ಕಿದೆ.
ಚೆನ್ನೈ ಕಿಂಗ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವಿನ ಮೂಲಕ ಬುಲ್ಡೋಜರ್ಸ್ ಫೈನಲ್ ಪ್ರವೇಶಿಸಿದರು. ಜೆಕೆ ಅದ್ಭುತ ಬ್ಯಾಟಿಂಗ್ನಿಂದ ತಂಡ ಗೆಲುವಿನ ತಡ ಸೇರಿತು. ಕಳೆದ ಬಾರಿ ಮೈಸೂರಿನಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧವೇ ಕಿಚ್ಚನ ಸೈನ್ಯ ಸೋತಿತ್ತು. ಇದೀಗ ಕೊಯಂಬತ್ತೂರಿನಲ್ಲಿ ಅದಕ್ಕೆ ಸೇಡು ತೀರಿಸಿಕೊಂಡಂತಾಗಿದೆ. ಗೆಲುವಿನ ಸಂಭ್ರಮದಲ್ಲಿ ಕಿಚ್ಚ ಸುದೀಪ್ ಕನ್ನಡ ಧ್ವಜ ಹಿಡಿದು ಸಂಭ್ರಮಿಸಿದರು.
2011ರಲ್ಲಿ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಟೂರ್ನಿ ಆರಂಭವಾಗಿತ್ತು. ಮೊದಲ ಟೂರ್ನಿಯಲ್ಲಿ 4 ತಂಡಗಳು ಸೆಣೆಸಿದ್ದವು. 2ನೇ ಸರಣಿಯಲ್ಲಿ ಬೆಂಗಾಲ್ ಟೈಗರ್ಸ್ ತಂಡ ಸೇರಿಕೊಂಡಿತ್ತು. ಎರಡು ವರ್ಷದ ಹಿಂದೆ(2024) ಬೆಂಗಾಲ್ ಟೈಗರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. 2016, 2019 ಹಾಗೂ 2025ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಎರಡನೇ ಬಾರಿ ಫೈನಲ್ ಹಂತಕ್ಕೆ ಏರಿದ್ದು ಕಿಚ್ಚನ ಪಡೆಗೆ ಸವಾಲು ಹಾಕಲಿದೆ.
ಬೆಂಗಾಲ್ ತಂಡದಲ್ಲಿ ಜಾಮಿ ಹಾಗೂ ನಾಯಕ ಜಿಸ್ಸು ಸೇನ್ಗುಪ್ತಾ ಒಳ್ಳೆ ಫಾರ್ಮ್ನಲ್ಲಿದ್ದಾರೆ. ಕಿಚ್ಚ ಪಡೆಗೆ ಕಂಟಕವಾಗುವ ಸಾಧ್ಯತೆಯಿದೆ. ಕರಣ್ ಹಾಗೂ ಪ್ರದೀಪ್ ಗಾಯಗೊಂಡಿರುವುದು ಕರ್ನಾಟಕ ಬುಲ್ಡೋಜರ್ಸ್ ತಂಡದ ಆತಂಕಕ್ಕೆ ಕಾರಣವಾಗಿದೆ. ಸೆಮಿಫೈನಲ್ ಪಂದ್ಯಕ್ಕೂ ಪ್ರದೀಪ್ ಅಲಭ್ಯರಾಗಿದ್ದರು. ಆದರೆ ರಾಜೀವ್, ಡಾರ್ಲಿಂಗ್ ಕೃಷ್ಣ, ಜೆಕೆ ಬ್ಯಾಟಿಂಗ್ನಲ್ಲಿ ತಂಡಕ್ಕೆ ಆಸರೆ ಆಗಲಿದ್ದಾರೆ. ಚಂದನ್, ಸಚಿನ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.
ಚೆನ್ನೈ ಕಿಂಗ್ಸ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯ ಬಹಳ ರೋಚಕವಾಗಿತ್ತು. ಗೆಲುವುದು ಕಷ್ಟ ಎಂದುಕೊಂಡಿದ್ದ ಸಮಯದಲ್ಲಿ ಜೆಕೆ ಅಬ್ಬರದ ಬ್ಯಾಟಿಂಗ್ ನೆರವಿನಿಂದ ತಂಡ ಗೆಲುವಿಗೆ ನಗೆ ಬೀರಿತು.


Click it and Unblock the Notifications











