CCL 2026: ಮೈಸೂರಿನಲ್ಲಿ ನಮ್ಮನ್ನು ಸೋಲಿಸಿದ್ರು, ತಮಿಳುನಾಡಲ್ಲೇ ಚೆನ್ನೈ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಳ್ತೀವಿ
ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ಚೆನ್ನೈ ಕಿಂಗ್ಸ್ ತಂಡಗಳು ಸಿಸಿಎಲ್ ಸೆಮಿಫೈನಲ್ ಪ್ರವೇಶಿಸಿವೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಲೀಗ್ ಹಂತದಲ್ಲಿ ಆಡಿದ 3 ಪಂದ್ಯಗಳನ್ನು ಗೆದ್ದು ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 3 ಪಂದ್ಯಗಳಲಲಿ ಒಂದು ಪಂದ್ಯ ಮಾತ್ರ ಗೆದ್ದು ಚೆನ್ನೈ ಕಿಂಗ್ಸ್ 4ನೇ ಸ್ಥಾನದಲ್ಲಿದೆ.
ಬೆಂಗಾಲ್ ಟೈಗರ್ಸ್ ಆಡಿದ 3 ಪಂದ್ಯ ಗೆದ್ದು 2ನೇ ಸ್ಥಾನದಲ್ಲಿದೆ. 2 ಪಂದ್ಯ ಗೆದ್ದು ಕೇರಳ ಸ್ಟೈಕರ್ಸ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಮೊದಲ ಸ್ಥಾನ ಪಡೆದ ಕಿಚ್ಚನ ಪಡೆ 4ನೇ ಸ್ಥಾನದಲ್ಲಿರುವ ಚೆನ್ನೈ ತಂಡವನ್ನು ಸೆಮಿಫೈನಲ್ನಲ್ಲಿ ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಹಾಗೂ ಕೇರಳ ಸ್ಟೈಕರ್ಸ್ ತಂಡಗಳು ಮುಖಾಮುಖಿ ಆಗಲಿವೆ.

ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ತಂಡ ಒಳ್ಳೆ ಫಾರ್ಮ್ನಲ್ಲಿದೆ. ಬಹಳ ವರ್ಷಗಳಿಂದ ಮರೀಚಿಕೆ ಆಗಿರುವ ಟ್ರೋಫಿಯನ್ನು ಎತ್ತಿ ಹಿಡಿಯಲು ಕಿಚ್ಚನ ಪಡೆ ಹವಣಿಸುತ್ತಿದೆ. ಅದಕ್ಕಾಗಿ ಶನಿವಾರ ಕೊಯಂಬತ್ತೂರಿನಲ್ಲಿ ನಡೆಯುವ ಪಂದ್ಯದಲ್ಲಿ ವಿಕ್ರಾಂತ್ ನೇತೃತ್ವದ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಬೇಕಿದೆ.
ಕಳೆದ ಭಾನುವಾರ(ಜನವರಿ 25) ಭೋಜ್ಪುರಿ ದಬಾಂಗ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಬೀಗಿತ್ತು. ಪಂದ್ಯದ ಬಳಿಕ ಕಿಚ್ಚ ಸುದೀಪ್ ಕನ್ನಡ ಬಾವುಟ ಹಿಡಿದು ಸಂಭ್ರಮಾಚರಣೆ ಮಾಡಿದ್ದರು. ಈ ಶನಿವಾರ ತಮಿಳುನಾಡಿನಲ್ಲೇ ಚೆನ್ನೈ ಕಿಂಗ್ಸ್ ತಂಡವನ್ನು ಸೋಲಿಸಬೇಕು ಎಂದು ಕಿಚ್ಚನ ಪಡೆ ಸನ್ನದ್ಧವಾಗಿದೆ. ಕಳೆದ ಬಾರಿ ಮೈಸೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಚೆನ್ನೈ ತಂಡ ಗೆದ್ದಿತ್ತು. ಅದಕ್ಕೆ ಸೋಲು ತೀರಿಸಿಕೊಳ್ಳಲು ಆಟಗಾರರು ಸಜ್ಜಾಗುತ್ತಿದ್ದಾರೆ.
ಈ ಹಿಂದೆ ಚೆನ್ನೂ ರೈನೋಸ್ ಹೆಸರಿನಲ್ಲಿ ತಮಿಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು ಸಿಸಿಎಲ್ ಟೂರ್ನಿ ಆಡುತ್ತಿದ್ದರು. ಈ ಬಾರಿ ತಂಡದ ಹೆಸರನ್ನು ವೆಲ್ಸ್ ಚೆನ್ನೈ ಕಿಂಗ್ಸ್ ಎಂದು ಬದಲಿಸಿಕೊಂಡಿದ್ದಾರೆ. ನಟ ವಿಕ್ರಾಂತ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಸರಣಿಯಲ್ಲಿ 10 ಓವರ್ಗಳ 4 ಇನ್ನಿಂಗ್ಸ್ಗಳಾಗಿ ಪಂದ್ಯಗಳು ನಡೆದಿತ್ತು. ಈ ಬಾರಿ ಮತ್ತೆ ಟಿ-20 ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿವೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಅಪಮಾನವಾಗಿತ್ತು. ತಮಿಳುನಾಡಿನ ಈರೋಡ್ ನಿವಾಸಿ ಸಿಲಂಬರಸನ್ ಕರ್ನಾಟಕದ ವಾಹನಕ್ಕೆ ಕಟ್ಟಿದ್ದ ಕನ್ನಡ ಧ್ವಜವನ್ನು ಬಲವಂತವಾಗಿ ತೆಗೆಸಿ ಕಾಲಿನಿಂದ ತುಳಿದು ಅಪಮಾನ ಮಾಡಿದ್ದ ಘಟನೆ ನಡೆದಿತ್ತು. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಬೆಂಗಳೂರು ಪೊಲೀಸರು ಪ್ರಕರಣದ ಸಂಬಂಧ ಆತನನ್ನು ವಶಕ್ಕೆ ಪಡೆದಿದ್ದಾರೆ. ಅದೇ ತಮಿಳುನಾಡಿನಲ್ಲಿ ಸುದೀಪ್ ಕನ್ನಡ ಬಾವುಟ ಹಾರಿಸಿದ್ದು ಕನ್ನಡಿಗರಿಗೆ ಸಂತಸ ತಂದಿತ್ತು. ಇದೀಗ ಶನಿವಾರ ಚೆನ್ನೈ ಕಿಂಗ್ಸ್ ವಿರುದ್ಧ ಗೆಲ್ಲುವ ಹುಮ್ಮಸ್ಸಿನಲ್ಲಿದೆ ಕಿಚ್ಚನ ಪಡೆ.
ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರ ಚಂದನ್ ಮಾತನಾಡಿ ಕೊಯಂಬತ್ತೂರಿನಲ್ಲಿ ಚೆನ್ನೈ ತಂಡವನ್ನು ಸೋಲಿಸುತ್ತೇವೆ ಎಂದಿದ್ದಾರೆ. "ಈ ಬಾರಿ ತಂಡಕ್ಕೆ ಬಹಳ ಭರವಸೆ ಇದೆ. ಚೆನ್ನೈ ತಂಡವನ್ನು ಕೊಯಂಬತ್ತೂರಿನಲ್ಲಿ ಸೋಲಿಸಬೇಕು. ಅವರ ನಾಡಿಗೆ ಹೋಗಿ ಗೆದ್ದರೆ ಚೆನ್ನಾಗಿರುತ್ತೆ ಅಲ್ವಾ? ಕಳೆದ ಬಾರಿ ಅವ್ರು ಮೈಸೂರಿನಲ್ಲಿ ನಮ್ಮ ತಂಡವನ್ನು ಸೋಲಿಸಿದ್ರು. ಈ ಬಾರಿ ಸೇಡು ತೀರಿಸಿಕೊಳ್ಳುವ ಆಸೆಯಿದೆ. ಅದು ಸಾಧ್ಯ ಆಗುತ್ತದೆ ಎನ್ನುವ ಭರವಸೆ ಇದೆ" ಎಂದಿದ್ದಾರೆ.
ಸೆಮಿಫೈನಲ್ ಮಾತ್ರವಲ್ಲ, ಕೊಯಂಬತ್ತೂರಿನಲ್ಲೇ ಫೈನಲ್ ಪಂದ್ಯವನ್ನು ಕೂಡ ಗೆದ್ದು ಕನ್ನಡ ಬಾವುಟವನ್ನು ಜೋರಾಗಿ ಹಾರಿಸುತ್ತೇವೆ ಎಂದು ಚಂದನ್ ಭರವಸೆ ಮಾತುಗಳನ್ನಾಗಿದ್ದಾರೆ. ಬೌಲರ್ ಆಗಿ ಚಂದನ್ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಗುರ್ತಿಸಿಕೊಂಡಿದ್ದಾರೆ.


Click it and Unblock the Notifications











