CCL 2026: ಇಂದು ಕರ್ನಾಟಕ ಬುಲ್ಡೋಜರ್ಸ್ vs ಚೆನ್ನೈ ಕಿಂಗ್ಸ್ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯ; ಎಲ್ಲಿ ನೋಡ್ಬೋದು?
ಸಿಸಿಎಲ್ 2026 ಅಂತಿಮ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. 3 ವಾರಾಂತ್ಯಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಇಂದು(ಜನವರಿ 31) ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು ನಾಳೆ(ಫೆಬ್ರವರಿ 1) ಫೈನಲ್ ಪಂದ್ಯ ಹಣಾಹಣಿಗೆ ವೇದಿಕೆ ಸಿದ್ಧವಾಗಲಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ 4ನೇ ಸ್ಥಾನದಲ್ಲಿರುವ ಚೆನ್ನೈ ಕಿಂಗ್ಸ್ ವಿರುದ್ಧ ಮೈದಾನಕ್ಕೆ ಇಳಿಯಲಿದೆ. ಅದಕ್ಕೂ ಮುನ್ನ 2ನೇ ಸ್ಥಾನದಲ್ಲಿರುವ ಬೆಂಗಾಲ್ ಟೈಗರ್ಸ್ ಎದುರು ಕೇರಳ ಸ್ಟೈಕರ್ಸ್ ಸೆಣೆಸಲಿದೆ. ತಮಿಳುನಾಡು ಕೋಯಂಬತ್ತೂರಿನ SNR ಕಾಲೇಜು ಮೈದಾನದಲ್ಲಿ ಪಂದ್ಯಗಳನ್ನು ನಡೆಯಲಿವೆ. ಐಪಿಎಲ್ ಮಾದರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದೆ. 6.30ಕ್ಕೆ ಎರಡನೇ ಪಂದ್ಯ ನಡೆಯಲಿದೆ.

ಹಿಂದಿನ ಸೀಸನ್ನಲ್ಲಿ ಟೆಸ್ಟ್ ಮ್ಯಾಚ್ ರೀತಿ 10 ಓವರ್ಗಳ 4 ಇನ್ನಿಂಗ್ಸ್ಗಳಲ್ಲಿ ಪಂದ್ಯ ನಡೆದಿತ್ತು. ಆದರೆ ಈ ಬಾರಿ ಮತ್ತೆ ಟಿ-20 ಮಾದರಿಯಲ್ಲೇ ಪಂದ್ಯಗಳು ನಡೀತಿವೆ. ಆಡಿದ 3 ಪಂದ್ಯ ಗೆದ್ದು ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಒಂದು ಪಂದ್ಯ ಮಾತ್ರ ಗೆದ್ದು ಅದೃಷ್ಟ ಕೈಹಿಡಿದು ರನ್ರೇಟ್ ಸಹಾಯದಿಂದ ಚೆನ್ನೈ ಸೆಮಿಫೈನಲ್ ಹಂತಕ್ಕೆ ಬಂದಿದೆ.
ಕಳೆದ ಸೀಸನ್ಗಳಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ಕಿಂಗ್ಸ್ ತಂಡಗಳು ಎದುರುಬದಿರಾಗಿದ್ದವು. ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಕಿಚ್ಚನ ಪಡೆಗೆ ಸೋಲಾಗಿತ್ತು. ಇದೀಗ ತಮಿಳುನಾಡಿನ ಮೈದಾನದಲ್ಲೇ ಸೆಮಿಫೈನಲ್ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಬುಲ್ಡೋಜರ್ಸ್ ಹವಣಿಸುತ್ತಿದ್ದಾರೆ. ಸಂಜೆ 6.30ಕ್ಕೆ ಪಂದ್ಯ ಆರಂಭವಾಗಲಿದೆ. ಜಿಯೋ ಹಾಟ್ಸ್ಟರ್ನಲ್ಲಿ ಪಂದ್ಯವನ್ನು ಲೈವ್ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶವಿದೆ. ಅದೇ ರೀತಿ ಸುವರ್ಣ ಪ್ಲಸ್ ವಾಹಿನಿಯಲ್ಲಿ ಕನ್ನಡದಲ್ಲೇ ಪಂದ್ಯದ ಕಾಮೆಂಟ್ರಿ ಸಹ ಸಿಗಲಿದೆ.
ಕರ್ನಾಟಕ ಬುಲ್ಡೋಜರ್ಸ್ ತಂಡ ಅದ್ಭುತ ಫಾರ್ಮ್ನಲ್ಲಿದೆ. 3 ಪಂದ್ಯಗಳಲ್ಲಿ ತಂಡದ ಸ್ಟಾರ್ ಆಟಗಾರ ಡಾರ್ಲಿಂಗ್ ಕೃಷ್ಣಗೆ ಬ್ಯಾಟ್ ಮಾಡಲು ಸರಿಯಾಗಿ ಇನ್ನು ಅವಕಾಶ ಸಿಕ್ಕಿಲ್ಲ. ಹಾಗಾಗಿ ಇಂದಿನ ಪಂದ್ಯದಲ್ಲಿ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನು ರಾಜೀವ್ ಹಾಗೂ ಪ್ರದೀಪ್ ಆರಂಭಿಕ ಬ್ಯಾಟ್ಸಮನ್ಗಳಾಗಿ ತಂಡದ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಸುದೀಪ್ ಕೂಡ ಬ್ಯಾಟ್ ಹಿಡಿದು ಅಬ್ಬರಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಕನ್ನಡ ಧ್ವಜಕ್ಕೆ ವ್ಯಕ್ತಿಯೊಬ್ಬ ಅವಮಾನ ಮಾಡಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಕೋಯಂಬತ್ತೂರಿನಲ್ಲಿ ನಡೆದ ಭೊಜ್ಪುರಿ ದಬಾಂಗ್ಸ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದಿತ್ತು. ಸುದೀಪ್ ಕನ್ನಡ ಧ್ವಜ ಹಿಡಿದು ಮೈದಾನದಲ್ಲಿ ಸಂಭ್ರಮಿಸಿದ್ದರು. ಚೆನ್ನೈ ವಿರುದ್ಧ ಕೂಡ ಗೆದ್ದು ಸಂಭ್ರಮಿಸಲು ತಂಡ ಸಜ್ಜಾಗಿದೆ. ಈ ಬಗ್ಗೆ ತಂಡದ ಆಟಗಾರ ಚಂದನ್ ಸಹ ಮಾತನಾಡಿದ್ದಾರೆ. ಕಳೆದ ಬಾರಿ ಮೈಸೂರಿನಲ್ಲಿ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಬೇಕು ಎಂದಿದ್ದಾರೆ.
ಸಿಸಿಎಲ್ ಇತಿಹಾಸದಿಂದ ಈ ಹಿಂದೆ ಹಲವು ಬಾರಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಎರಡೂ ತಂಡಗಳು ಸಮಬಲ ಸಾಧಿಸುತ್ತಾ ಬಂದಿವೆ. ಇದೀಗ ಮತ್ತೊಂದು ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.
ಈವರೆಗೆ ಕಿಚ್ಚನ ಪಡೆ 2 ಬಾರಿ ಮಾತ್ರ ಸಿಸಿಎಲ್ ಟ್ರೋಫಿ ಎತ್ತಿ ಹಿಡಿದಿದೆ. 2013 ಹಾಗೂ 2014ರಲ್ಲಿ ಚಾಂಪಿಯನ್ ಆಗಿತ್ತು. ಒಟ್ಟು 5 ಬಾರಿ ರನ್ನರ್ ಅಪ್ ಆಗಿತ್ತು. ಮೂರು ಬಾರಿ ಸೆಮಿಫೈನಲ್ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಈ ಬಾರಿ ಟ್ರೋಫಿ ಮೇಲೆ ಕಿಚ್ಚನ ಪಡೆ ಕಣ್ಣಿಟ್ಟಿದೆ. ಅಭಿಮಾನಿಗಳ ಬೆಂಬಲ ಕೂಡ ತಂಡಕ್ಕಿದೆ. ವಯಸ್ಸು 50 ದಾಟಿದ್ರು ಕಿಚ್ಚ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕೀಪರ್ ಆಗಿ ತಂಡಕ್ಕೆ ನೆರವಾಗುವುದು ಮಾತ್ರವಲ್ಲ ನಾಯಕನಾಗಿ ತಂಡ ಮುನ್ನಡೆಸುತ್ತಿದ್ದಾರೆ.


Click it and Unblock the Notifications











