ಮೊದಲ ಇನ್ನಿಂಗ್ಸ್ನಲ್ಲಿ 50 ಚಚ್ಚಿದ್ದವನ ಬದಲು ಕಿಚ್ಚ ಓಪನಿಂಗ್; ಕರ್ನಾಟಕದ ಸೋಲಿಗೆ ಕಾರಣವಾದ ಅಂಶಗಳಿವು!
ನಿನ್ನೆ ( ಮಾರ್ಚ್ 24 ) ವಿಶಾಖಪಟ್ಟಣದ ವೈ ಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಸ್ತುತ ನಡೆಯುತ್ತಿರುವ ಒಂಬತ್ತನೇ ಆವೃತ್ತಿಯ ಸೆಮಿಫೈನಲ್ ಪಂದ್ಯಗಳು ಜರುಗಿದವು. ಮಧ್ಯಾಹ್ನ ಭೋಜ್ಪುರಿ ದಬಾಂಗ್ಸ್ ಹಾಗೂ ಮುಂಬೈ ಹೀರೊಸ್ ತಂಡಗಳ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆದರೆ, ಸಂಜೆ ಲೀಗ್ ಹಂತದ ಟೇಬಲ್ ಟಾಪರ್ಸ್ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ನಡುವೆ ಎರಡನೇ ಸೆಮಿಫೈನಲ್ ಪಂದ್ಯಗಳು ಜರುಗಿದವು.
ಹಾಲಿ ಚಾಂಪಿಯನ್ಸ್ ಎನಿಸಿಕೊಂಡಿದ್ದ ಮುಂಬೈ ಹೀರೊಸ್ ವಿರುದ್ಧ ಭೋಜ್ಪುರಿ ದಬಾಂಗ್ಸ್ ಜಯವನ್ನು ಸಾಧಿಸಿ ಫೈನಲ್ ಪ್ರವೇಶಿಸಿದರೆ, ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡ ಗೆದ್ದು ಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿತು. ಈ ಮೂಲಕ ಈ ಬಾರಿಯ ಸಿಸಿಎಲ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಇದೇ ಮೊದಲ ಬಾರಿಗೆ ಸೋಲನ್ನು ಕಂಡು ಸೆಮಿಫೈನಲ್ ಸುತ್ತಿನಲ್ಲಿ ಟೂರ್ನಿಯಿಂದ ಹೊರಬಿದ್ದಿದೆ.

ಹೀಗೆ ಮೂರನೇ ಬಾರಿಗೆ ಸಿಸಿಎಲ್ ಟ್ರೋಫಿಯನ್ನು ಎತ್ತಿಹಿಡಿಯಬೇಕೆಂಬ ಕರ್ನಾಟಕ ಬುಲ್ಡೋಜರ್ಸ್ ತಂಡದ ಕನಸು ಈ ವರ್ಷವೂ ಸಹ ಕನಸಾಗಿಯೇ ಉಳಿದುಕೊಂಡಿದೆ. ಇನ್ನು ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಿಡಿತವನ್ನು ಸಾಧಿಸಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಮುನ್ನಡೆಯನ್ನೂ ಸಹ ಕರ್ನಾಟಕ ಬುಲ್ಡೋಜರ್ಸ್ ಸಾಧಿಸಿತ್ತು. ಹೌದು, ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಪ್ರದೀಪ್ ಬೋಗಾದಿ ಅವರ ಅಬ್ಬರದ ಅಜೇಯ ಅರ್ಧಶತಕದ ನೆರವಿನಿಂದ 10 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿತು.
ಅತ್ತ ತೆಲುಗು ವಾರಿಯರ್ಸ್ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 10 ಓವರ್ಗೆ 6 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿತ್ತು. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 4 ರನ್ಗಳ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್ ರೀತಿ ತೆಲುಗು ವಾರಿಯರ್ಸ್ ಮೇಲೆ ಹಿಡಿತ ಸಾಧಿಸಲಿಲ್ಲ. ರಾಜೀವ್ ಹನು ಹಾಗೂ ಜಯರಾಮ್ ಕಾರ್ತಿಕ್ ಹೊರತುಪಡಿಸಿ ಯಾರೊಬ್ಬರೂ ಹೆಚ್ಚು ರನ್ ಕಲೆಹಾಕಲಿಲ್ಲ. ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ 10 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿದ ಕರ್ನಾಟಕ ಬುಲ್ಡೋಜರ್ಸ್ ತೆಲುಗು ವಾರಿಯರ್ಸ್ ತಂಡಕ್ಕೆ ಗೆಲ್ಲಲು 103 ರನ್ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ತೆಲುಗು ವಾರಿಯರ್ಸ್ 9.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಪೈಪೋಟಿಯುತ ಮೊತ್ತವನ್ನು ಗುರಿಯನ್ನಾಗಿ ನೀಡಿದ್ದರೂ ಸಹ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಇನ್ನಿಂಗ್ಸ್ನಲ್ಲಿ ಮಾಡಿದ ಈ ತಪ್ಪುಗಳಿಂದಾಗಿ ಪಂದ್ಯವನ್ನೇ ಸೋತಿದೆ.

* ಮೊದಲ ಇನ್ನಿಂಗ್ಸ್ನಲ್ಲಿ ತಂಡದ ಬಹುತೇಕರು ಬ್ಯಾಟಿಂಗ್ನಲ್ಲಿ ದೊಡ್ಡ ಕೊಡುಗೆ ಕೊಡದೇ ಮಂಕಾದಾಗ 26 ಎಸೆತಗಳಲ್ಲಿ ಅಜೇಯ 50 ರನ್ ಸಿಡಿಸಿ ಆಸರೆಯಾಗಿದ್ದ ಪ್ರದೀಪ್ ಬೋಗಾದಿ ಅವರಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನೀಡದೇ ಇದ್ದದ್ದು ಆಶ್ಚರ್ಯ ಮೂಡಿಸಿತು ಹಾಗೂ ಇದೂ ಸಹ ಸೋಲಿಗೆ ಒಂದು ಕಾರಣ ಎಂದು ಹೇಳಬಹುದು. ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅರ್ಧಶತಕ ಬಾರಿಸಿ ಅಬ್ಬರಿಸಿದ್ದ ಪ್ರದೀಪ್ ಬದಲು ಎರಡನೇ ಇನ್ನಿಂಗ್ಸ್ನಲ್ಲಿ ಕಿಚ್ಚ ಸುದೀಪ್ ಆರಂಭಿನಾಗಿ ಕಣಕ್ಕಿಳಿದು ಐದು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿದರು. ಇದು ತಂಡದ ರನ್ ಗಳಿಕೆಯಲ್ಲಿ ಪರಿಣಾಮ ಬೀರಿದ್ದು ಸುಳ್ಳಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಆಟಗಾರ ಎರಡನೇ ಇನ್ನಿಂಗ್ಸ್ನಲ್ಲಿ ಆರಂಭ ಮಾಡಬಾರದು ಎಂಬ ನಿಯಮವಿದೆ. ಆದರೆ ಸುದೀಪ್ ಬದಲು ವೇಗವಾಗಿ ರನ್ ಗಳಿಸುವ ಆಟಗಾರನನ್ನು ಕಣಕ್ಕಿಳಿಸಬಹುದಿತ್ತು.
* ಇನ್ನು ಡಾರ್ಲಿಂಗ್ ಕೃಷ್ಣ ವಿಚಾರದಲ್ಲಿಯೂ ಸಹ ಇದೇ ಕಥೆ. ಮೊದಲ ಇನ್ನಿಂಗ್ಸ್ನಲ್ಲಿ ಪ್ರದೀಪ್ ಜತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಕೃಷ್ಣ 33 ರನ್ ಕಲೆಹಾಕಿದ್ದರು. ಆದರೆ ಎರಡನೇ ಕ್ರಮಾಂಕದಲ್ಲಿ ಐದನೇ ಕ್ರಮಾಂಕದಲ್ಲಿ ಕೃಷ್ಣ ಅವರನ್ನು ಕಣಕ್ಕಿಳಿಸಲಾಯಿತು. ಆದರೂ ಸಹ ಕೃಷ್ಣ 6 ಎಸೆತಗಳಲ್ಲಿ 13 ರನ್ ಗಳಿಸಿದರು. ಕೃಷ್ಣ ಅವರನ್ನು ತುಸುಬೇಗನೆ ಕಣಕ್ಕಿಳಿಸಿದ್ದರೆ ಇನ್ನಷ್ಟು ರನ್ ಬರುತ್ತಿತ್ತು.
* ಇನ್ನು ತಂಡದ ಸೋಲಿಗೆ ಪ್ರಮುಖ ಕಾರಣವೆಂದರೆ ಎರಡನೇ ಇನ್ನಿಂಗ್ಸ್ನಲ್ಲಿ ಮಾಡಿದ ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್. ಹೌದು, ಎರಡನೇ ಇನ್ನಿಂಗ್ಸ್ನಲ್ಲಿ ಗಣೇಶ್ ಹೊರತುಪಡಿಸಿ ಬೇರೆ ಯಾವ ಬೌಲರ್ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಬೌಲಿಂಗ್ ಮಾಡಿದ ಎಲ್ಲರೂ ಸಹ ಹತ್ತಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ಬೌಲಿಂಗ್ ಮಾಡಿದವರೇ. ಇನ್ನು ಕೆಲವೊಂದು ಪ್ರಮುಖ ಕ್ಯಾಚ್ ಕೈಚೆಲ್ಲಿದ್ದು ಸಹ ತಂಡಕ್ಕೆ ಹಿನ್ನಡೆಯನ್ನು ಉಂಟು ಮಾಡಿದೆ.


Click it and Unblock the Notifications











