ಡಾ ರಾಜ್ಕುಮಾರ್ 17ನೇ ವರ್ಷದ ಪುಣ್ಯಸ್ಮರಣೆ; ಅಣ್ಣಾವ್ರ ನೆನಪಿನಲ್ಲಿ ಫ್ಯಾನ್ಸ್, ಕಲಾವಿದರು, ರಾಜಕಾರಣಿಗಳು

2006ರ ಏಪ್ರಿಲ್ 12ನೇ ತಾರೀಖಿನಂದು ಬಂದಿದ್ದ ಆ ಸುದ್ದಿ ಇಡೀ ಕರ್ನಾಟಕವನ್ನು ಬೇಸರಕ್ಕೆ ದೂಡಿತ್ತು. ಕನ್ನಡ ಚಿತ್ರರಂಗದ ಮೇರುನಟ ಡಾ ರಾಜ್ಕುಮಾರ್ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಕೇಳಿದ್ದ ಅಭಿಮಾನಿಗಳು ಹಾಗೂ ಕಲಾ ರಸಿಕರು ಕಣ್ಣೀರು ಹಾಕಿದ್ರು. ಅನೇಕ ವರ್ಷಗಳ ಕಾಲ ತಮ್ಮ ಚಿತ್ರಗಳಿಂದ ಜನರನ್ನು ರಂಜಿಸಿದ್ದ, ಸಂದೇಶವನ್ನು ನೀಡಿದ್ದ ಮಹಾನ್ ಕಲಾವಿದ ದೂರಾಗಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು.
ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ ಅಭಿಮಾನಿಗಳ ಕಿವಿಗೆ ಬೀಳುತ್ತಿದ್ದಂತೆ ಅಪಾರವಾದ ಅಭಿಮಾನಿಗಳು ತಮ್ಮ ಕೆಲಸಗಳನ್ನು ಬಿಟ್ಟು ರಾಜ್ ಪಾರ್ಥಿವ ಶರೀರ ನೋಡಲು ಧಾವಿಸಿದ್ದರು. ರಾಜ್ಯದ ಮೂಲೆ ಮೂಲೆಗಳಿಂದಲೂ ರಾಜ್ಕುಮಾರ್ಗೆ ಅಂತಿಮ ನಮನ ಸಲ್ಲಿಸಲು ಬೆಂಗಳೂರಿಗೆ ಆಗಮಿಸಿದ್ದರು. ಆ ದಿನ ಬೆಂಗಳೂರು ಎಂದಿನಂತಿರದೇ ಮೌನಕ್ಕೆ ಶರಣಾಗಿತ್ತು.
ರಾಜ್ ಅಗಲಿಕೆಯ ಸುದ್ದಿಯನ್ನು ಕೇಳಿದ ಬಳಿಕ ಹಲವರು ಟೈರ್ಗಳಿಗೆ ಬೆಂಕಿ ಹಚ್ಚಿ ಬಂದ್ ಆಚರಿಸಿದರೆ, ಇನ್ನೂ ಕೆಲವರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು. ಅಲ್ಲದೇ ಅನೇಕ ಅಭಿಮಾನಿಗಳು ನೋವನ್ನು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದರು. ಹೀಗೆ ನೆಚ್ಚಿನ ನಟನನ್ನು ಕಳೆದುಕೊಂಡ ಅಭಿಮಾನಿಗಳು ಪ್ರತಿ ವರ್ಷ ಈ ದಿನದಂದು ಅವರ ಪುಣ್ಯಭೂಮಿಗೆ ತೆರಳಿ ಸಮಾಧಿಗೆ ನಮನ ಸಲ್ಲಿಸಿ ರಾಜ್ಕುಮಾರ್ ಅವರನ್ನು ನೆನೆಯುತ್ತಿದ್ದಾರೆ.
ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ರಾಜ್ಕುಮಾರ್ ಅವರ ಅಪರೂಪದ ಫೋಟೊಗಳನ್ನು ಹಂಚಿಕೊಂಡು ಸ್ಮರಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಕಲಾವಿದರು ಹಾಗೂ ರಾಜಕಾರಣಿಗಳು ಸಹ ರಾಜ್ಕುಮಾರ್ ಅವರನ್ನು ಅವರನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಣ್ಣಾವ್ರನ್ನು ಸ್ಮರಿಸಿದ್ದಾರೆ. ಯಾರೆಲ್ಲಾ ರಾಜ್ಕುಮಾರ್ ಅವರನ್ನು ನೆನೆದು ಪೋಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ನಟಿ ಹಾಗೂ ರಾಜಕಾರಣಿ ಸುಮಲತಾ ಅಂಬರೀಶ್ ರಾಜ್ಕುಮಾರ್ ಅವರನ್ನು ನೆನೆದಿದ್ದು "ನಟರಿಗೆ ಮಾದರಿಯಾದ ವರನಟ, ಕರುನಾಡ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಗೆ ನನ್ನ ನಮನಗಳು. ಸಿನಿಮಾ, ಕನ್ನಡ ಪರವಾದ ಹೋರಾಟ, ಅವರಿಗಿದ್ದ ಬದುಕಿನ ಬದ್ಧತೆ ಹಾಗೂ ಸರಳ, ಸಜ್ಜನ ವ್ಯಕ್ತಿತ್ವ ನಮಗೆಲ್ಲ ಮಾದರಿ" ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.
ರಾಜಕಾರಣಿ ದಿನೇಶ್ ಗುಂಡೂರಾವ್ "ಕನ್ನಡಿಗರ ಹೆಮ್ಮೆ, ಕಲಾಸರಸ್ವತಿಯ ವರಪುತ್ರ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನ ಪೂರ್ವಕ ನಮನಗಳು" ಎಂದು ಬರೆದುಕೊಂಡಿದ್ದಾರೆ.
"ಕಲೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ದಾನಿ ಅಭಿಮಾನಿಗಳನ್ನೇ ದೇವರು ಮಾಡಿದ ಸುಜ್ನ್ಯಾನಿ ಅಭಿನಯಿಸಿದ ಪ್ರತಿ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಿದ ವಿಜ್ನ್ಯಾನಿ.. ಕರುನಾಡಿಗೆ ಮತ್ತು ನಿಮ್ಮ ಅಭಿಮಾನಿ ದೇವರುಗಳಿಗಾಗಿ ಮತ್ತೆ ಹುಟ್ಟಿ ಬನ್ನಿ..Miss u Appaji" ಎಂದು ನಟ, ನಿರ್ದೇಶಕ ರಘುರಾಮ್ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ..


Click it and Unblock the Notifications











