ಸಾರಾ ಗೋವಿಂದು ವಿರುದ್ಧ ಸಿಡಿದೆದ್ದ ಪತ್ರಕರ್ತೆ, ಬರಹಗಾರ್ತಿ ರೇಖಾರಾಣಿ
'ಡಾ. ರಾಜ್ ಕುಮಾರ್ ಇಂತಹ ಕೆಟ್ಟವರನ್ನೇ ತಮ್ಮ ಆತ್ಮಕಥೆಯಲ್ಲಿ 'ಸಾಸಿವೆ ಸಿಡಿಸೋ ಜನ' ಅಂತ ಕರೆದಿದ್ದು' ಎಂದು ಹೇಳುವ ಮೂಲಕ ನಿರ್ಮಾಪಕ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ವಿರುದ್ಧ ಪತ್ರಕರ್ತೆ, ಬರಹಗಾರ್ತಿ ರೇಖಾರಾಣಿ ಕಶ್ಯಪ್ ಆಕ್ರೋಶ ಹೊರಹಾಕಿದ್ದಾರೆ.
ಚಲನಚಿತ್ರ ಸೆನ್ಸಾರ್ ಮಂಡಳಿಗೆ ನೂತನವಾಗಿ ಸದಸ್ಯರನ್ನು ನೇಮಕ ಮಾಡಲಾಗಿತ್ತು. ಇದರಲ್ಲಿ ಬಹುತೇಕ ಚಲನಚಿತ್ರ ಅಕಾಡೆಮಿ ಹಾಗು ಕಿರುತೆರೆಗೆ ಸಂಬಂಧಿಸಿದವರೇ ಇದ್ದಾರೆ, ಸೆನ್ಸಾರ್ ಮಂಡಳಿಯಲ್ಲಿ ಕುಟುಂಬ ವಾರಸುದಾರಿಕೆ ನಡೆಯುತ್ತಿದೆ ಎಂದು ಸಾರಾ ಗೋವಿಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
'ಅಶೋಕ್ ಕಶ್ಯಪ್ ಅಕಾಡೆಮಿಯಲ್ಲಿದ್ದಾರೆ, ಅವರ ಪತ್ನಿ ರೇಖಾರಾಣಿ ಸೆನ್ಸಾರ್ ಮಂಡಳಿಗೆ ಸದಸ್ಯರು, ಚಲನಚಿತ್ರೋತ್ಸವ ನಡೆದರೆ ಅದಕ್ಕೆ ಆಕೆ ಚೇರ್ಮನ್, ಸಿನಿಮಾ ಬಗ್ಗೆ ಅವರಿಗೇನು ಗೊತ್ತಿದೆ. ಇದೇನು ಕುಟುಂಬ ವಾರಸುದಾರಿಕೆನಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ರೇಖಾ ರಾಣಿ ಫೇಸ್ಬುಕ್ನಲ್ಲಿ ಸಿಡಿದೆದ್ದಿದ್ದಾರೆ. ಮುಂದೆ ಓದಿ...

ಡಾ ರಾಜ್ ಇಂತವರನ್ನೇ 'ಸಾಸಿವೆ ಸಿಡಿಸೋ ಜನ' ಅಂದಿದ್ದು
''ಡಾ.ರಾಜ್ ಕುಮಾರ್ ಇಂತಹ ಕೆಟ್ಟವರನ್ನೇ ತಮ್ಮ ಆತ್ಮಕಥೆಯಲ್ಲಿ ' ಸಾಸಿವೆ ಸಿಡಿಸೋ ಜನ' ಅಂತ ಕರೆದಿದ್ದು'' ಎಂದು ಹೇಳುವ ಮೂಲಕ ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾಗಿರುವ ಸಾರಾ ಗೋವಿಂದುಗೆ ನೇರವಾಗಿ ರೇಖಾರಾಣಿ ತಿರುಗೇಟು ನೀಡಿದ್ದಾರೆ.

ಬೇರೆಯವರ ಜೀವನದಲ್ಲಿ ಕಡ್ಡಿ ಆಡಿಸೋರು ನೀವು
''ಮಾಡಿರೋ ಕೆಲಸಗಳಿಗಿಂತ ಬೇರೆಯವರ ಜೀವನದಲ್ಲಿ ಕಡ್ಡಿ ಆಡಿಸುತ್ತಾ, ಇಲ್ಲಸಲ್ಲದ ವೀಡಿಯೋ ಮಾಡಿ ಕಾಲಹರಣ ಮಾಡುತ್ತಿರುವ ಆ ಕುಮಾರ್ ಶ್ರೀನಿವಾಸಮೂರ್ತಿ, ಈಗ ಈ ಸಾ.ರಾ. ಗೋವಿಂದು. ಥೂ ನಿಮ್ಮ ಮುಖಾ ಮುಚ್ಚಾ! ಅಂತ ಬಯ್ಯೋಕ್ಕೂ ಮನಸ್ಸು ಬರ್ತಿಲ್ಲ'' ಎಂದು ಆಕ್ರೋಶವಾಗಿ ಪ್ರತಿಕ್ರಿಯಿಸಿದ್ದಾರೆ.

ನಿಮಗೆ ಮುಂಚೆ ಬಂದಿದ್ದು ನಾನು
''ನೀವೆಲ್ಲಾ ಸಿನೆಮಾ ಇಂಡಸ್ಟ್ರಿಗೆ ಬರುವ ಮೊದಲೇ ನಾನು ಪತ್ರಕರ್ತಳಾಗಿ, ಸಿನೆಮಾ ಪತ್ರಕರ್ತಳಾಗಿ, ಕಥೆಗಾರ್ತಿಯಾಗಿ ನಂತರ ಧಾರಾವಾಹಿ ಸಿನೆಮಾ ಅಂತ ಕಳೆದ ನಲ್ವತ್ತು ವರ್ಷಗಳಿಂದ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಸುಳ್ಳು ಹೇಳೋದು, ಚಿತ್ರರಂಗದವರು ಕೆಲವರು ಮಾಡೋ ಒಳ್ಳೆಯ ಕೆಲಸಗಳಿಗೂ ತಪ್ಪು ಕಂಡುಹಿಡಿಯೋದು...ಇಷ್ಟೇ ಸಧ್ಯಕ್ಕೆ ನೀವುಗಳು ಮಾಡ್ತಿರೋ ಕೆಲಸ. ಚಿತ್ರರಂಗದವರನ್ನು, ಕಿರುತೆರೆಯವರನ್ನು ಹಿಯ್ಯಾಳಿಸುವ ಮುನ್ನ ನಮಗಿಂತಾ ಒಳ್ಳೆ ಕೆಲಸ ಮಾಡಿ ತೋರಿಸ್ರೋ..ಸಾಸಿವೆ ಮಕ್ಕಳಾ!'' ಎಂದು ಫೇಸ್ಬುಕ್ನಲ್ಲಿ ವಾಗ್ದಾಳಿ ನಡೆಸಿದರು.
Recommended Video

ವಕೀಲರ ಮೂಲಕ ಉತ್ತರಿಸುತ್ತೇನೆ
''ನಾನು ಸೆನ್ಸಾರ್ ಮಂಡಳಿಗೆ ಆಯ್ಕೆಯಾಗಿದ್ದು, ಚಲನಚಿತ್ರ ಅಕಾಡೆಮಿಯಿಂದ ಛೇರ್ಮನ್ ಆಗಿ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಹೇಗೆ ಮತ್ತು ಯಾಕೆ ಅಂತ ಇವರು ಪ್ರಶ್ನೆ ಕೇಳ್ತಿದ್ದಾರೆ...ನಾನು ಉತ್ತರ ವಕೀಲರ ಮೂಲಕ ಕೊಡಬೇಕೆಂದಿದ್ದೇನೆ. ಹೀಗೇ ಬಿಟ್ಟರೆ ವಿತ್ತಂಡ ವಾದಗಳಿಂದ ನಮ್ಮ ಚಿತ್ರರಂಗವನ್ನು ಹಾಳುಮಾಡಿಬಿಡುತ್ತಾರೆ'' ಎಂದು ಎಚ್ಚರಿಸಿದ್ದಾರೆ.


Click it and Unblock the Notifications











