ಜಯಲಲಿತಾ ಚೆನ್ನೈ ಖಾಸಗಿ ದರ್ಬಾರ್ ಗೆ ತೆರೆ
ಸಾಕಷ್ಟು ವಾದ ವಿವಾದಗಳ ನಡುವೆಯೇ ಚೆನ್ನೈನಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಸಿನಿಮಾ ಶತಮಾನೋತ್ಸವಕ್ಕೆ ಮಂಗಳವಾರ (ಸೆ.24) ತೆರೆಬಿದ್ದಿದೆ. ಭಾರತೀಯ ಸಿನಿಮಾ 100 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಈ ವರ್ಣರಂಜಿತ ಕಾರ್ಯಕ್ರಮವನ್ನು ತಮಿಳುನಾಡು ಸರ್ಕಾರ ಹಮ್ಮಿಕೊಂಡಿತ್ತು.
ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ತಮಿಳುನಾಡು ಸರ್ಕಾರಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಆದರೆ ಸಾಕಷ್ಟು ಹಿರಿಯ ಕಲಾವಿದರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿಯೇ ಇಲ್ಲ. ಇದು ಒಂಥರಾ ಜಯಲಲಿತಾ ಅವರ ಖಾಸಗಿ ದರ್ಬಾರ್ ನಂತಿತ್ತು ಎಂಬ ಮಾತುಗಳು ಧಾರಾಳವಾಗಿ ಕೇಳಿಬರುತ್ತಿವೆ.
ಕಾರ್ಯಕ್ರಮದ ಅಂತಿಮ ದಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ, ಕೇರಳ ಮುಖ್ಯಮಂತ್ರಿ ಓಮನ್ ಚಾಂಡಿ ಹಾಗೂ ತಮಿಳುನಾಡು ರಾಜ್ಯಪಾಲ ಕೆ ರೋಸಯ್ಯ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇನ್ನೊಂದು ಮುಖ್ಯವಾದ ವಿಚಾರ ಅಂದರೆ ಕರ್ನಾಟಕ ಹಾಗೂ ಆಂಧ್ರ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವುದು. ದಕ್ಷಿಣ ಭಾರತದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಫುಲ್ ಪೇಜ್ ಜಾಹೀರಾತು ನೀಡಿದ್ದಾರೆ. ಆದರೆ ಅದರಲ್ಲಿ ಸಿದ್ದರಾಮಯ್ಯ ಹೆಸರಾಗಲಿ ಕಿರಣ್ ಕುಮಾರ್ ರೆಡ್ಡಿ ಹೆಸರಾಗಲಿ ಇಲ್ಲದಿರುವುದು ಅಚ್ಚರಿಗೊಳಿಸಿದೆ.
ನಟ ರೆಬಲ್ ಸ್ಟಾರ್ ಅಂಬರೀಶ್, ಪಾರ್ವತಮ್ಮ ರಾಜ್ ಕುಮಾರ್, ವಿ ರವಿಚಂದ್ರನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಉಪೇಂದ್ರ, ದ್ವಾರಕೀಶ್, ಡಾ.ಜಯಮಾಲಾ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿತ್ತು.
ಆದರೆ ಇವರಲ್ಲಿ ಉಪೇಂದ್ರ, ದರ್ಶನ್ ಅವರು ಗೈರುಹಾಜರಾದರು. ಡಾ.ಜಯಮಾಲಾ ಅವರಿಗೆ ಸನ್ಮಾನವನ್ನೇ ಮಾಡಲಿಲ್ಲ. ಈ ರೀತಿಯ ಸಾಕಷ್ಟು ವಿವಾದಗಳ ನಡುವೆಯೇ ಜಯಮ್ಮನ ನಾಲ್ಕು ದಿನಗಳ ಖಾಸಗಿ ದರ್ಬಾರ್ ಮುಗಿದಿದೆ.


Click it and Unblock the Notifications












