ಕನ್ನಡದ ಚೆಲುವೆ ಚೈತ್ರಾ ಆಚಾರ್ ಜೊತೆ ಇರುವ ಈ ವ್ಯಕ್ತಿ ಯಾರು ? ಬಿಸಿ ಬಿಸಿ ಚರ್ಚೆ..!
ಚಿತ್ರರಂಗವೇ ಹಾಗೇ. ಇಲ್ಲಿ ನಾಯಕಿಯರು ಯಾರೇ ಹುಡುಗರ ಜೊತೆ ಕಾಣಿಸಿಕೊಂಡರೆ, ಓಡಾಡಿದರೆ ಸಾಕು, ಕಲಾ ರಸಿಕರು ತಲೆ ಕೆದರಿಕೊಳ್ಳುತ್ತಾರೆ. ಆ ಹುಡುಗನ ಕುಲ, ಗೋತ್ರ, ಜನ್ಮ ಜಾಲಾಡುವರೆಗೆ ಅವರಿಗೆ ನೆಮ್ಮದಿ ಇರುವುದಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆಯೇ ಚೈತ್ರಾ ಆಚಾರ್ ಸುತ್ತ ಮುತ್ತ ನಡೆಯುತ್ತಿರುವ ಚರ್ಚೆ.
ಹೌದು, ಚೈತ್ರಾ ಆಚಾರ್, ನಾಯಕಿ ಕಂ ಗಾಯಕಿ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ನಟಿ ಇವರು. ಇದಕ್ಕೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಮತ್ತು ಟೋಬಿ ಇತ್ತೀಚಿನ ಉದಾಹರಣೆ.

ಇಂಥಾ ಚೈತ್ರಾ ಆಚಾರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಬ್ಬ ವ್ಯಕ್ತಿಯ ಜೊತೆ ಇರುವ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಫೋಟೊ ಜೊತೆ ಕೆಲ ಸಾಲುಗಳನ್ನು ಬರೆದು ಆ ವ್ಯಕ್ತಿಯನ್ನು ಬಾಯ್ತುಂಬ ಹೊಗಳಿದ್ದಾರೆ. ಚೈತ್ರಾ ಬರೆದುಕೊಂಡ ಈ ಸಾಲುಗಳು ಈಗ ಅನೇಕರ ಕುತೂಹಲಕ್ಕೆ ಕಾರಣವಾಗಿವೆ. ಈ ವ್ಯಕ್ತಿ ಯಾರು ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ. ಡಿಜಿಟಲ್ ಕಾಮುಕರ ಹಾವಳಿಯಿಂದ ಬೇಸತ್ತು ಚೈತ್ರಾ ತಮ್ಮ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಈ ಹಿನ್ನೆಲೆ ನೇರಾನೇರವಾಗಿಯೇ ಪ್ರಶ್ನೆಯನ್ನು ಕೇಳದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ಚೈತ್ರಾ ಆಚಾರ್ ಅವರ ಜೊತೆ ಇರುವ ವ್ಯಕ್ತಿಯ ಹೆಸರು ಅರುಣ್ ವಿಶ್ವ. ಪಕ್ಕದ ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರು ಇವರು. ಸಿದ್ಧಾರ್ಥ್ ಅಭಿನಯದ 40ನೇ ಚಿತ್ರಕ್ಕೆ ಇವರೇ ನಿರ್ಮಾಪಕರು. ವಿಶೇಷ ಅಂದರೆ ಈ ಚಿತ್ರದ ಮೂಲಕವೇ ಚೈತ್ರಾ ಆಚಾರ್ ಕಾಲಿವುಡ್ಗೆ ಪ್ರವೇಶವನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆ ತಮ್ಮ ಮೊದಲ ತಮಿಳು ಚಿತ್ರದ ನಿರ್ಮಾಪಕರ ಬರ್ತ್ಡೇ ಪ್ರಯುಕ್ತ ಚೈತ್ರಾ ಆಚಾರ ಅವರ ಜೊತೆ ಇರುವ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಅರುಣ್ ವಿಶ್ವ ಅವರ ಹಾಸ್ಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ. ಅರುಣ್ ವಿಶ್ವ ಅವರ ವ್ಯಕ್ತಿತ್ವನ್ನು ಬಾಯ್ತುಂಬ ಹೊಗಳಿದ್ದಾರೆ.
ಇಷ್ಟೇ ಅಲ್ಲ ನಾನು ಚೆನ್ನೈಗೆ ಬಂದಾಗೆಲ್ಲ ನನ್ನ ಫೋಟೊಗಳನ್ನು ತೆಗೆಯುವ ಕೆಲಸವನ್ನು ನೀವು ಮುಂದುವರೆಸಿ, ತಮಿಳಿನಲ್ಲಿ ಬರುವ ಹೊಸ ಚಿತ್ರಗಳ ಬಗ್ಗೆ ಸಂಗೀತ ಬಗ್ಗೆ ಕೂಡ ನನಗೆ ಆಗಾಗ ಹೇಳುತ್ತೀರಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಚೈತ್ರಾ ಆಚಾರ್ ಮತ್ತು ಅರುಣ್ ವಿಶ್ವ ಅವರ ನಡುವೆ ಇರುವ ಈ ಆತ್ಮೀಯತೆ ಮತ್ತು ಒಡನಾಟವನ್ನು ಅರಿಯದ ಅನೇಕರು ಸದ್ಯ ನಾನಾ ರೀತಿಯ ಚರ್ಚೆಗಳನ್ನು ಮಾಡುತ್ತಿದ್ದಾರೆ.
ಇನ್ನುಳಿದಂತೆ ಯಾರ ಬಳಿಯೂ ಅಭಿನಯದ ಅಕ್ಷರಾಭ್ಯಾಸ ಮಾಡದೇ, ಯಾವ ಗಾಡ್ ಫಾದರ್ ಸಹಾಯ ಇಲ್ಲದೇ, ಕನ್ನಡ ಚಿತ್ರರಂಗಕ್ಕೆ ಬಂದು ತನ್ನ ಕಾಲ ಮೇಲೆ ನಿಂತಿರುವ ಚೈತ್ರಾ ಆಚಾರ್ 2021ರಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜಿ ಮಲ್ಲಿಗೆ ಹಾಡಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಚಿತ್ರರಂಗಕ್ಕೆ ಬಂದ ಈ 7 ವರ್ಷಗಳಲ್ಲಿ ಹೆಚ್ಚು ಕಡಿಮೆ 09 ಚಿತ್ರಗಳನ್ನು ಮಾಡಿರುವ ಚೈತ್ರಾ ಟ್ರೋಲಿಗರ ಪಾಲಿಗೆ ಅಚ್ಚು ಮೆಚ್ಚಿನ ವ್ಯಕ್ತಿ ಕೂಡ ಹೌದು.
ಸದ್ಯ ಕನ್ನಡದ ಉತ್ತರಕಾಂಡ ಚಿತ್ರದಲ್ಲಿ ಅಭಿನಯಿಸುತ್ತಿರುವ ಚೈತ್ರಾ , ತಮಿಳಿನಲ್ಲಿ ಸಿದ್ಧಾರ್ಥ್ ಜೊತೆಗಿನ ಚಿತ್ರವಲ್ಲದೇ ಮತ್ತೊಂದು ಚಿತ್ರದಲ್ಲಿ ಕೂಡ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಜು ಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ಶಶಿಕುಮಾರ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.


Click it and Unblock the Notifications











