ಮತ್ತೆ ಒಂದಾಗಲಿದೆ ಕಾಟೇರ ಜೋಡಿ ; ದರ್ಶನ್ 59ನೇ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ?
ಒಂದು ಕಡೆ ದರ್ಶನ್ ಹುಟ್ಟುಹಬ್ಬ. ಇನ್ನೊಂದು ಕಡೆ ಬೆಳ್ಳಿ ಪರ್ವ. ಎರಡೆರಡು ಸಂಭ್ರಮದ ಅಲೆಯಲ್ಲಿ ದರ್ಶನ್ ಅವರ ಅಭಿಮಾನಿಗಳು ತೇಲ್ತಿರುವ ಈ ಸಮಯದಲ್ಲಿ, ಇನ್ನೊಂದು ಸುದ್ದಿ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತರುಣ್ ಸುಧೀರ್ ಇನ್ನೊಮ್ಮೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಎಲ್ಲಾ ಕಡೆ ಪುಕಾರೆದ್ದಿದೆ.
ಹರಿದಾಡ್ತಿರುವ ಈ ಸುದ್ದಿಯ ಮೇಲೆ ಅಧಿಕೃತವಾದ ಮೊಹರು ಇನ್ನೂ ಬಿದ್ದಿಲ್ಲವಾದರೂ, ಈ ಬ್ಲಾಕ್ ಬಸ್ಟರ್ ಸಮಾಚಾರ ಗಾಳಿಯಲ್ಲಿ ತೇಲುತ್ತಾ, ತೇಲುತ್ತಾ, ಸಾಮಾಜಿಕ ಜಾಲತಾಣವನ್ನ ತಲುಪಿದೆ. ದರ್ಶನ್ ಅವರ ಅಭಿಮಾನಿ ಬಳಗದ ಸಂಭ್ರಮವನ್ನೂ ದುಪ್ಪಟ್ಟಾಗಿಸಿದೆ. ಆದರೆ ಇದು ಅಂದುಕೊಂಡತೆ ಅಲ್ಲ. ತರುಣ್ ಸುಧೀರ್ ದರ್ಶನ್ ಜೊತೆ ಮತ್ತೊಂದು ಸಿನಿಮಾ ಮಾಡಲು ಸಿದ್ಧರಾದರೂ ಕೂಡ ಅದಕ್ಕೆ ಸಮಯ ಇನ್ನೂ ಬೇಕು. ಯಾಕೆಂದರೆ ದರ್ಶನ್ ಕಾಲ್ ಶೀಟ್ ಸದ್ಯಕ್ಕೆ ಫ್ರೀ ಇಲ್ಲ.

ಹೌದು, ಸಾಮಾನ್ಯಕ್ಕೆ ದರ್ಶನ್ ಒಂದು ಸಿನಿಮಾ ಆರಂಭ ಮಾಡಿದರೆ, ಆ ಸಿನಿಮಾವನ್ನ ಹೊರತು ಪಡಿಸಿ ಬೇರೆ ಸಿನಿಮಾಗಳ ಬಗ್ಗೆ ಮಾತನಾಡಲ್ಲ. ಒಂದು ಸಿನಿಮಾ ಮುಗಿಯೋವರೆಗೆ, ಮತ್ತೊಂದು ಸಿನಿಮಾಗೆ ನಾಂದಿಯೂ ಹಾಡಲ್ಲ. ಸದ್ಯಕ್ಕೆ ದರ್ಶನ್ ಡೆವಿಲ್ ದಿ ಹೀರೋ ಚಿತ್ರವನ್ನ ಧ್ಯಾನಿಸುತ್ತಿದ್ದಾರೆ. ಇನ್ನೂ ಡೆವಿಲ್ ದಿ ಹೀರೋ ಮುಕ್ತಾಯವಾದ ನಂತರ ಸರತಿ ಸಾಲಿನಲ್ಲಿ ಜೋಗಿ ಪ್ರೇಮ್ ಇದ್ದಾರೆ.
ಡಾ.ಶಿವರಾಜ್ ಕುಮಾರ್ ಹಾಗೂ ರಮ್ಯಾ ನಟಿಸಿದ್ದ ಆರ್ಯನ್ ಚಿತ್ರವನ್ನ ನಿರ್ಮಿಸಿದ್ದ ಧ್ರುವ ದಾಸ್ ಕೂಡ ದರ್ಶನ್ ಜೊತೆ ಸಿನಿಮಾ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಹೀಗೊಂದು ಸುದ್ದಿ ಕಳೆದ ವರ್ಷ ಇದೇ ಸಮಯದಲ್ಲಿ ಸದ್ದು ಮಾಡಿತ್ತು, ಹುಟ್ಟುಹಬ್ಬದ ಶುಭಾಶಯವನ್ನೊತ್ತ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು ಅನ್ನುವುದು ನಿಮ್ಮ ಗಮನಕ್ಕಿರಲಿ.

ಮಿಕ್ಕಂತೆ ದರ್ಶನ್ ಅವರ ಇನ್ನೊಬ್ಬ ಅತ್ಯಾಪ್ತ ಗೆಳೆಯ ಸಚ್ಚಿದಾನಂದ ಇಂಡುವಾಳು ಕೂಡ, ದರ್ಶನ್ ಚಿತ್ರವನ್ನ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಬಹುದು. ಆ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಕಳೆದ ವರ್ಷ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಸಚ್ಚಿದಾನಂದ್ ಇಂಡುವಾಳು ನಿರ್ಮಾಣದಡಿ ಚಿತ್ರ ಬರಲಿದೆ ಎಂಬ ವಿಚಾರವನ್ನ ಘೋಷಿಸಲಾಗಿತ್ತು. ಬಿಡಲಾಗಿದ್ದ ಪೋಸ್ಟರ್ ನಲ್ಲಿ ನಿರ್ದೇಶನ ತರುಣ್ ಸುಧೀರ್ ಎಂದು ನಮೂದಿಸಲಾಗಿತ್ತು. ಆ ಪ್ರಾಜೆಕ್ಟ್ ಗೆ ಈಗ ವರ್ಷದ ನಂತರ ಹುಟ್ಟುಹಬ್ಬದ ನೆಪದಲ್ಲಿ ಮತ್ತೆ ಮರು ಜೀವ ಸಿಕ್ಕರೂ ಸಿಗಬಹುದು. ಕಳೆದ ವರ್ಷದಂತೆ ಈ ವರ್ಷ ಇನ್ನೊಂದು ಪೋಸ್ಟರ್ ಬಿಡುಗಡೆ ಮಾಡಿ, ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನ ಸಚ್ಚಿದಾನಂದ್ ಅವರು ಕೋರಿದರು ಕೋರಬಹುದು.
ಸಿಂಧೂರ ಲಕ್ಷ್ಮಣನಾಗಬೇಕಿತ್ತು ಚಾಲೆಂಜಿಂಗ್ ಸ್ಟಾರ್
ಎಲ್ಲವೂ ಅಂದುಕೊಂಡತೆ ನಡೆದಿದ್ದರೆ ರಾಬರ್ಟ್ ಚಿತ್ರದ ನಂತರ, ತರುಣ್ ಸುಧೀರ್ ಹಾಗೂ ದರ್ಶನ್ ಸಿಂಧೂರ ಲಕ್ಷ್ಮಣ ಚಿತ್ರವನ್ನ ಮಾಡಬೇಕಿತ್ತು. ಇದಕ್ಕೆ ತರುಣ್ ಸುಧೀರ್ ಬೇಕಿರುವ ತಯಾರಿಗಳನ್ನ ಮಾಡಿಕೊಂಡಿದ್ದರು ಕೂಡ. ಆದರೆ ಆ ನಂತರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಜೊತೆ ಉಂಟಾದ ಮನಸ್ತಾಪ ಹಾಗೂ ಕೊರೊನಾ ಹಾವಳಿಯಿಂದ ಆ ಚಿತ್ರಕ್ಕೆ ಅಲ್ಪವಿರಾಮ ಹಾಕಲಾಯಿತು
ಒಟ್ಟಿನಲ್ಲಿ ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತರುಣ್ ಸುಧೀರ್ ಮತ್ತೆ ನಿರ್ದೇಶನ ಮಾಡ್ತಾರೆ ಅನ್ನುವ ಸುದ್ದಿ ಸದ್ದು ಮಾಡ್ತಿದೆ. ಈ ಸುದ್ದಿ ನಿಜವೇ ಆದಲ್ಲಿ ಅದು ಅಭಿಮಾನಿಗಳಿಗೆ ಹಬ್ಬ. ಆದರೆ ಆ ಹಬ್ಬಕ್ಕೆ ಅಭಿಮಾನಿಗಳು ಕೊನೆ ಪಕ್ಷ ಇನ್ನೂ ಒಂದು ವರ್ಷವಾದರೂ ಕಾಯ್ಲೇಬೇಕು.


Click it and Unblock the Notifications











