ಚಾಲೆಂಜಿಂಗ್ ಸ್ಟಾರ್ ದರ್ಶನ್ ಬದುಕಿನ ನಿಜವಾದ ದರ್ಶನ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಿಂದು 38ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ಜನ್ಮದಿನವನ್ನ ಅಭಿಮಾನಿಗಳೊಂದಿಗೆ, ಅವರ ಸಮ್ಮುಖದಲ್ಲೇ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ಈ 'ಮೆಜೆಸ್ಟಿಕ್' ಹೀರೋ.
'ಸ್ಯಾಂಡಲ್ ವುಡ್ ಸುಲ್ತಾನ್' ಅಂತ ಎಲ್ಲರ ಬಾಯಲ್ಲಿ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಇಂದು ಕೋಟ್ಯಾಧಿಪತಿ. ಗಾಂಧಿನಗರದ ಪ್ರತಿಷ್ಟಿತ 'ತೂಗುದೀಪ ಪ್ರೊಡಕ್ಷನ್ಸ್', 'ತೂಗುದೀಪ ಡಿಸ್ಟ್ರಿಬ್ಯೂಟರ್ಸ್' ಸಂಸ್ಥೆಯ ಒಡೆಯ.
ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿರುವ ಈಗಿನ ಪರಿಸ್ಥಿತಿಗೆ ತಲುಪುವುದಕ್ಕೆ ದರ್ಶನ್ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ದರ್ಶನ್ ಬರ್ತಡೆ ಪ್ರಯುಕ್ತ, ಹದಿನೈದು ವರ್ಷಗಳ ಫ್ಲ್ಯಾಶ್ ಬ್ಯಾಕ್ ಗೆ ಹೋಗುವುದಾದರೆ, ಅಂದಿನ ದಿನಗಳಲ್ಲಿ ದರ್ಶನ್ ಪಟ್ಟ ಕಷ್ಟದ ಬಗ್ಗೆ ಆಪ್ತೇಷ್ಟರು ಬಿಚ್ಚಿಟ್ಟಿರುವ ಸತ್ಯ ಸಂಗತಿ ಇಲ್ಲಿದೆ ಓದಿ....

ದರ್ಶನ್ ಗೆ ನಟನೆ, ಕಲೆ ಅನ್ನೋದು ಹುಟ್ಟಿನಿಂದಲೇ ಬಂದಿದ್ದು. ಚಿಕ್ಕವಯಸ್ಸಲ್ಲೇ ಹೀರೋ ಆಗಬೇಕು ಅಂತ ಕನಸು ಹೊತ್ತಿದ್ದ ದರ್ಶನ್, 'ನೀನಾಸಂ' ರಂಗಶಿಕ್ಷಣ ಕೇಂದ್ರಕ್ಕೆ ಸೇರಿಕೊಂಡರು. ಅದು ಅಪ್ಪನ ಮಾತನ್ನ ಧಿಕ್ಕರಿಸಿ.
ಚಿತ್ರರಂಗದಲ್ಲೇ ಇದ್ದ ತೂಗುದೀಪ ಶ್ರೀನಿವಾಸ್ ರವರಿಗೆ ಮಕ್ಕಳು ಇದೇ ಹಾದಿ ಹಿಡಿಯುವುದು ಕಿಂಚಿತ್ತು ಇಷ್ಟವಿರಲಿಲ್ಲ. ಆದ್ರೆ, ದರ್ಶನ್ ಗೆ ಆಕ್ಟಿಂಗ್ ಬಿಟ್ಟು ಬೇರೇನೂ ಮಾಡೋಕ್ಕೆ ಆಗಲಿಲ್ಲ.

'ನೀನಾಸಂ'ನಲ್ಲಿ ತರಬೇತಿ ಪಡೆದುಕೊಂಡ ದರ್ಶನ್ ಅವಕಾಶಕ್ಕಾಗಿ ಫೋಟೋ ಹಿಡಿದುಕೊಂಡು ಗಾಂಧಿನಗರದಲ್ಲಿ ಅಲೆದಾಡುತ್ತಿದ್ದರು. ಹೊಟ್ಟೆ ಪಾಡಿಗಾಗಿ ಅನಿವಾರ್ಯದಿಂದ ಏನಾದರೊಂದು ಕೆಲಸ ಮಾಡಲೇಬೇಕು ಅಂತ ಕ್ಯಾಮರಾ ಅಸಿಸ್ಟೆಂಟ್ ಆಗಿ ಗೌರಿಶಂಕರ್ ಗರಡಿಗೆ ಸೇರಿಕೊಂಡರು.
ಕ್ಯಾಮರಾ ಸಹಾಯಕರಾಗಿ ಫೋಕಸ್ಸಿಂಗ್, ಲೆನ್ಸ್ ಬಗ್ಗೆ ಜ್ಞಾನ ಬೆಳೆಸಿಕೊಂಡ ದರ್ಶನ್ ಅಂದು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಕೇವಲ ಎರಡಂಕಿ ಸಂಖ್ಯೆ...90 ರೂಪಾಯಿ! ಕೂಲಿ ಕಾಸಿಗಾಗಿ ದರ್ಶನ್ ಸೆಟ್ ನಲ್ಲಿ ಬೆವರಿಳಿಸಿ ಕೆಲಸ ಮಾಡ್ತಿದ್ರು. [ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?]

ಆನಂದ್ ರಾವ್ ಸರ್ಕಲ್ ಬಳಿ ಇದ್ದ ಗೂಡಂಗಡಿಯಲ್ಲಿ ಸಿಗ್ತಿದ್ದ ಚಿತ್ರಾನ್ನ ಅಂದು ದರ್ಶನ್ ಪಾಲಿಗೆ ಮೃಷ್ಟಾನ್ನ ಭೋಜನ. ಪ್ರತಿನಿತ್ಯ ಅಲ್ಲೇ ತಿಂಡಿ ಮಾಡುತ್ತಿದ್ದ ದರ್ಶನ್, ಅಂದು ಓಡಾಡುತ್ತಿದ್ದದ್ದು ಲೂನಾ ಗಾಡಿಯಲ್ಲಿ ಅನ್ನೋದು ನಿಮ್ಗೆ ಗೊತ್ತಾ. ಅದಕ್ಕೆ ಪೆಟ್ರೋಲ್ ಹೊಂದಿಸಿಕೊಳ್ಳುವುದಕ್ಕೂ ದರ್ಶನ್ ತಿಣುಕಾಡುತ್ತಿದ್ದರಂತೆ.
ಸೀರಿಯಲ್ ಮತ್ತು ಕಾರ್ಟೂನ್ ಚಿತ್ರಗಳಿಗೆ ಡಬ್ಬಿಂಗ್ ಮಾಡುತ್ತಿದ್ದ ದರ್ಶನ್ ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಇಂದು ಗಾಂಧಿನಗರದ ಪಾಲಿಗೆ 'ಗಜ'ಗಾತ್ರದಲ್ಲಿ ಬೆಳೆದಿದ್ದಾರೆ. ಇದು ದರ್ಶನ್ ಬದುಕಿನ ನಿಜವಾದ ದರ್ಶನ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











