ಫೇಕ್.. ಫೇಕ್.. ಬರೀ ಫೇಕ್.. ಬೇಸರಗೊಂಡು ಹಾವಳಿ ಇಟ್ಟ ಫ್ಯಾನ್ಸ್: 'ಕ್ರಾಂತಿ' ಚಿತ್ರತಂಡಕ್ಕೆ ಹೊಸ ತಲೆನೋವು?
ಅಭಿಮಾನಿಗಳು 'ಕ್ರಾಂತಿ' ಸಿನಿಮಾ ಅಪ್ಡೇಟ್ಗಾಗಿ ಪಟ್ಟು ಹಿಡಿದಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಯುವವರೆಗೂ ಯಾವುದೇ ಮಾಹಿತಿ ನೀಡದೇ ಇರಲು ಚಿತ್ರತಂಡ ನಿರ್ಧರಿಸಿದೆ. ಮತ್ತೊಂದ್ಕಡೆ ಕೊನೆ ಹಂತದ ಶೂಟಿಂಗ್ ಭರದಿಂದ ಸಾಗುತ್ತಿದೆ. ನವೆಂಬರ್ ಕೊನೆ ವಾರದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ಗಳನ್ನು ಕ್ರಿಯೇಟ್ ಮಾಡಿ ಕಾಟ ಕೊಡೋಕೆ ಶುರು ಮಾಡಿದ್ದಾರೆ.
ವಿ. ಹರಿಕೃಷ್ಣ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಕ್ರಾಂತಿ'. ಬಹಳ ಅದ್ಧೂರಿಯಾಗಿ ಈ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸ್ತಿದ್ದು, ದೊಡ್ಡ ತಾರಾಗಣ ಚಿತ್ರದಲ್ಲಿದೆ. ಒಂದಷ್ಟು ಪೋಸ್ಟರ್ಗಳು ಹಾಗೂ ದರ್ಶನ್ ಬರ್ತ್ಡೇ ಸ್ಪೆಷಲ್ ಟೀಸರ್ ಬಿಟ್ಟರೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ರಿಲೀಸ್ ಡೇಟ್ ಅನೌನ್ಸ್ ಆಗುವುದಕ್ಕು ಮೊದಲೇ ಅಭಿಮಾನಿಗಳು ರಾಜ್ಯಾದ್ಯಂತ 'ಕ್ರಾಂತಿ' ಸಿನಿಮಾ ಪ್ರಮೋಷನ್ ಮಾಡ್ತಾ ಬರ್ತಿದ್ದಾರೆ. ಆದರೆ ಅಭಿಮಾನಿಗಳಿಗೆ ಅದೊಂದು ಬೇಸರ ಇದೆ.
ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ 'ಕ್ರಾಂತಿ' ಸಿನಿಮಾ ನಿರ್ಮಾಣ ಮಾಡ್ತಿದೆ. ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ಬಗ್ಗೆ ಚರ್ಚೆ ನಡೀತಿದೆ. ದರ್ಶನ್ ಎನ್ಆರ್ಐ ರೋಲ್ನಲ್ಲಿ ನಟಿಸಿರುವುದಾಗಿ ಹೇಳಲಾಗ್ತಿದೆ. ಸಿನಿಮಾ ಬಗ್ಗೆ ಈವರೆಗೆ ಚಿತ್ರತಂಡ ಅಫೀಷಿಯಲ್ ಆಗಿ ಎಲ್ಲೂ ಮಾತನಾಡಿಲ್ಲ.

ಟ್ವಿಟರ್ನಲ್ಲಿ ಫೇಕ್ ಅಕೌಂಟ್ಗಳ ಹಾವಳಿ
'ಕ್ರಾಂತಿ' ಅಪ್ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಚಿತ್ರತಂಡ ಮಾತ್ರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಗಣೇಶ ಹಬ್ಬದ ಸಂಭ್ರಮದಲ್ಲಿ ಏನಾದರೂ ಅಪ್ಡೇಟ್ ಸಿಗುತ್ತೆ ಎಂದುಕೊಂಡಿದ್ದರು. ಒಂದು ಸಾಂಗ್ ರಿಲೀಸ್ ಮಾಡಿ ಎಂದರು ಆದರೂ ಅದು ಸಾಧ್ಯವಾಗಲಿಲ್ಲ. ದಸರಾ ಹಬ್ಬಕ್ಕೆ ಕೊನೆ ಪಕ್ಷ ಒಂದು ಪೋಸ್ಟರ್ ಕೂಡ ರಿಲೀಸ್ ಮಾಡಲಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ನಿರ್ದೇಶಕರು ಹಾಗೂ ನಿರ್ಮಾಪಕರ ಹೆಸರಿನಲ್ಲಿ ಫೇಕ್ ಟ್ವಿಟರ್ ಅಕೌಂಟ್ ಕ್ರಿಯೇಟ್ ಮಾಡಿ ಶೀಘ್ರದಲ್ಲೇ 'ಕ್ರಾಂತಿ' ಅಪ್ಡೇಟ್ ಬರುತ್ತೆ ಎಂದು ಪೋಸ್ಟ್ ಮಾಡ್ತಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್ ಇಂತದ್ದೇ ಒಂದು ಅಕೌಂಟ್ ಸ್ಕ್ರೀನ್ಶಾಟ್ ತೆಗೆದು ಇದು ಫೇಕ್ ಅಕೌಂಟ್ ಯಾರು ನಂಬಬೇಡಿ ಎಂದಿದ್ದಾರೆ.

'ಕ್ರಾಂತಿ' ಅಪ್ಡೇಟ್ ಕೊಡದಿದ್ದರೆ 'D56' ಅಪ್ಡೇಟ್
ಅಭಿಮಾನಿಗಳು ಹೇಗಾದರೂ ಮಾಡಿ ಚಿತ್ರತಂಡದ ಗಮನ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ನಿರ್ದೇಶಕ ವಿ. ಹರಿಕೃಷ್ಣ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಮಾಡಿ ಶೀಘ್ರದಲ್ಲೇ 'ಕ್ರಾಂತಿ' ಅಪ್ಡೇಟ್ ಬರುತ್ತೆ ಎಂದು ಬರೆದಿದ್ದರು. ಇದೀಗ ನಿರ್ದೇಶಕ ನಿರ್ದೇಶಕ ತರುಣ್ ಸುಧೀರ್ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. "ಹರಿಕೃಷ್ಣ ಸರ್ ನೀವು 'ಕ್ರಾಂತಿ' ಅಪ್ಡೇಟ್ ಕೊಡದೇ ಇದ್ದರೆ, ನಾನು 'D56' ಅಪ್ಡೇಟ್ ಕೊಡ್ತೀನಿ" ಎಂದು ಪೋಸ್ಟ್ ಮಾಡಿದ್ದಾರೆ. ಕೆಲವರು ಇದನ್ನು ನಿಜ ಎಂದು ನಂಬಿ ಅವಕ್ಕಾಗಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಸಂಭಾಷಣೆ ಮುಂದುವರೆದಿದೆ.

'ಕ್ರಾಂತಿ' ಚಿತ್ರದಲ್ಲಿ ಸಂಯುಕ್ತಾ ಹೊರನಾಡ್
ರಚಿತಾ ರಾಮ್ 'ಕ್ರಾಂತಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿರೋದು ಗೊತ್ತೇಯಿದೆ. ಇದೀಗ ತಂಡಕ್ಕೆ ಹೊಸ ನಟಿಯ ಆಗಮನವಾಗಿದೆ. ನಟಿ ಸಂಯುಕ್ತಾ ಹೊರನಾಡ್ ಕೂಡ ಚಿತ್ರದ ಪಾತ್ರವೊಂದರಲ್ಲಿ ನಟಿಸ್ತಿದ್ದಾರೆ. ದರ್ಶನ್, ರಚ್ಚು, ಸಂಯುಕ್ತ ಜೊತೆಗಿರುವ ಫೋಟೊವೊಂದು ಸಖತ್ ವೈರಲ್ ಆಗಿದೆ. ಮೈಸೂರಿನಲ್ಲಿ ಕೊನೆ ಹಂತದ ಶೂಟಿಂಗ್ ನಡೆದಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸೆಟ್ ಹಾಕಿ ಸಾಂಗ್ ಶೂಟಿಂಗ್ ಮಾಡಿರುವುದಾಗಿ ಗುಸುಗುಸು ಕೇಳಿಬಂದಿತ್ತು.

ನವೆಂಬರ್ ಕೊನೆ ವಾರದಲ್ಲಿ 'ಕ್ರಾಂತಿ'
ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ 'ಕ್ರಾಂತಿ' ಸಿನಿಮಾ ಮೂಡಿ ಬರ್ತಿದೆ. ಅಕ್ಷರ ಕ್ರಾಂತಿಯ ಕಥೆ, ಕನ್ನಡ ಸರ್ಕಾರಿ ಶಾಲೆಗಳ ಕುರಿತಾದ ಸಂದೇಶ ಚಿತ್ರದಲ್ಲಿದೆ. ಹಾಗಾಗಿ ರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ನವೆಂಬರ್ ಆರಂಭದಲ್ಲಿ ಅಲ್ಲದೇ ಇದ್ದರೂ ಕೊನೆಯ ವಾರದಲ್ಲಿ ಸಿನಿಮಾ ತೆರೆಗೆ ತರುವ ಸಾಧ್ಯತೆಯಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ 'ಕ್ರಾಂತಿ' ಅಪ್ಡೇಟ್ ಸಿಗಲಿದೆ.


Click it and Unblock the Notifications











