ಮಾತಾಡೋಕೆ ಭಯ, ಏನ್ ಮಾತಾಡಿದ್ರು ಕಾಂಟ್ರವರ್ಸಿ ಆಗುತ್ತೆ: ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಕಾಂಟ್ರವರ್ಸಿಗಳಿಂದ ಹೆಚ್ಚು ಚರ್ಚೆಯಲ್ಲಿದ್ದಾರೆ. "ನನಗೆ ಮಾತನಾಡುವುದಕ್ಕೆ ಭಯವಾಗುತ್ತೆ ಏನೇ ಮಾತಾಡಿದರೂ ಕಾಂಟ್ರವರ್ಸಿ ಆಗುತ್ತೆ" ಎಂದು ಸ್ವತಃ ನಟ ದರ್ಶನ್ ವೇದಿಕೆಯೊಂದರಲ್ಲಿ ಹೇಳಿದ್ದಾರೆ. ಇನ್ನು 'ಸಂಗೊಳ್ಳಿ ರಾಯಣ್ಣ' ಸಿನಿಮಾ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದ್ದಾರೆ.
75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿನ್ನೆ(ಆಗಸ್ಟ್ 15) ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್ಎಸ್ಆರ್ ಲೇಔಟ್ನಲ್ಲಿ ನಡೆದ 'ತಿರಂಗ ರಾಗಾ' ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಅದ್ಧೂರಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅಸಂಖ್ಯಾತ ಫ್ಯಾನ್ಸ್ ಜಮಾಯಿಸಿ ದರ್ಶನ್ ಹಾಗೂ 'ಕ್ರಾಂತಿ' ಚಿತ್ರಕ್ಕೆ ಜೈಕಾರ ಹಾಕಿದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಹಾಗೂ ಸಚಿವರಾದ ಆರ್. ಅಶೋಕ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
Recommended Video
ನಟ ದರ್ಶನ್ ಇತ್ತೀಚೆಗೆ ಪದೇ ಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಪುನೀತ್ ರಾಜ್ಕುಮಾರ್ ಸಾವಿನ ಬಗ್ಗೆ ದಾಸ ಮಾತನಾಡಿದ್ದು ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ದರ್ಶನ್ ಫ್ಯಾನ್ಸ್ ಹಾಗೂ ಅಪ್ಪು ಫ್ಯಾನ್ಸ್ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆದಿತ್ತು. ಹಾಗಾಗಿ ದರ್ಶನ್ ಈಗ ಏನೇ ಮಾತನಾಡುವುದಕ್ಕೂ ಹಿಂದು ಮುಂದು ನೋಡುವಂತಾಗಿದೆ. ಅದನ್ನು ಸ್ವತಃ ದರ್ಶನ್ ಕೂಡ ಒಪ್ಪಿಕೊಂಡಿದ್ದಾರೆ.

ನನಗೆ ಮಾತನಾಡೋಕೆ ಭಯವಾಗುತ್ತೆ- ದರ್ಶನ್
"ಸ್ವಾತಂತ್ರ್ಯ ದಿನಾಚರಣೆಯ ಅಂದಾಕ್ಷಣ ನಮಗೆ ಮೊದಲಿಗೆ ಕಾಣಿಸುವುದು ಗಾಂಧೀಜಿ, ಸುಭಾಷ್ಚಂದ್ರ ಬೋಸ್, ಭಗತ್ ಸಿಂಗ್ರಂತಹವರು. ಮುಂಚೂಣಿಯಲ್ಲಿ ಇದ್ದವರು ಎಲ್ಲರೂ ಕಾಣಿಸುತ್ತಾರೆ, ಆದರೆ ನನಗೆ ಈಗ ಹೇಳುವುದಕ್ಕೆ ಸ್ವಲ್ಪ ಭಯ ಕೂಡ ಆಗುತ್ತದೆ, ಯಾಕಂದ್ರೆ ಕಾಂಟ್ರವರ್ಸಿ ಕೂಡ ಆಗುತ್ತದೆ. ಕಾಂಟ್ರವರ್ಸಿಯಲ್ಲೇ ನಾನಿರೋದು ಆಕ್ಯ್ಚುಲಿ. ಮಾತೇತ್ತಿದ್ರೆ ಕಾಂಟ್ರವರ್ಸಿಯಲ್ಲಿ ಇರ್ತೀನಿ. ಇದಕ್ಕೆ ಕಾಂಟ್ರವರ್ಸಿ ಅಂದುಕೊಂಡರೂ ಪರವಾಗಿಲ್ಲ. ಮುಂಚೂಣಿಯಲ್ಲಿ ಗಾಂಧಿಜಿ ಸೇರಿದಂತೆ ಸಾಕಷ್ಟು ಜನರನ್ನು ನೋಡ್ತೀವಿ. ಆದರೆ ಅವರ ಹಿಂದೆ ಸಾಕಷ್ಟು ಜನ ಇದ್ದರು, ಅವರನ್ನು ನಾವು ನೆನಪಿಸಿಕೊಳ್ಳುವುದಿಲ್ಲ, ಅವರ ಹೆಸರು ಗೊತ್ತಿಲ್ಲ. ಆದರೆ ಈ ವೇದಿಕೆ ಮೇಲೆ ಆ ರೀತಿ ಸ್ವಾತಂತ್ರ್ಯಕ್ಕಾಗಿ ಹಿಂದಿನ ಸಾಲಿನಲ್ಲಿ ನಿಂತು ಹೋರಾಡಿದವರಿಗಾಗಿ ಎರಡು ನಿಮಿಷ ಮೌನಾಚರಣೆ ಮಾಡಿದರೆ ಅವರಿಗೆ ಬೆಲೆ ಸಿಗುತ್ತದೆ" ಎಂದರು.

'ಕ್ರಾಂತಿ' ಸಿನಿಮಾ ಮೋಸ ಮಾಡಲ್ಲ
"ನನ್ನಂಥ ಸಣ್ಣ ಕಲಾವಿರನ್ನು ಕಾಂಟ್ರವರ್ಸಿಯಲ್ಲಿ ಇರುವವರನ್ನು ಹರಸಿ ಬೆಳೆಸಿ. ವೇದಿಕೆ ಮುಂದೆ ಕೂಡ ನನ್ನ ಸೆಲೆಬ್ರೆಟಿಗಳು 'ಕ್ರಾಂತಿ' ಪೋಸ್ಟರ್ ಹಿಡಿದುಕೊಂಡಿದ್ದೀರಾ ತುಂಬಾ ಥ್ಯಾಂಕ್ಸ್. 'ಕ್ರಾಂತಿ' ಚಿತ್ರಕ್ಕೆ ನಿಮ್ಮ ಬೆಂಬಲ ಜೀವನದಲ್ಲಿ ಯಾವತ್ತೂ ಮರೆಯೋದಿಲ್ಲ. ನೀವು ಕೊಡುತ್ತಿರುವ ಪ್ರೀತಿ ಪ್ರೋತ್ಸಾಸ ಬೆಂಬಲ ಯಾವಾಗಲೂ ಸಿನಿಮಾ ಮಾಡಲು ಹುಮ್ಮಸ್ಸು ಕೊಡುತ್ತದೆ. ಖಂಡಿತ 'ಕ್ರಾಂತಿ' ಸಿನಿಮಾ ಮೋಸ ಮಾಡಲ್ಲ ಎಂದು ಆಶ್ವಾಸನೆ ಕೊಡ್ತೀನಿ. ನೀವು ಕಿರುಚೋಕೆ ಅರಚೋಕೆ ಕೂಗಾಡೋಕೆ ಎಲ್ಲಾ ಇದೆ, ಜೊತೆಗೆ ಸಣ್ಣ ನೀತಿಪಾಠ ಕೂಡ ಹೇಳಿದ್ದೀವಿ. ವಿದ್ಯೆ ಅಂದರೆ ಏನು, ಸರ್ಕಾರಿ ಶಾಲೆಗಳು ಏನಾಗುತ್ತಿದೆ ಅನ್ನುವುದರ ಬಗ್ಗೆ ಸಿನಿಮಾ, ಏನೋ ಎಕ್ಸ್ಟ್ರಾಡರಿನರಿಯಾಗಿ ಮಾಡಿದ್ದೀವಿ ಅಂತ ಅಲ್ಲ. ಇವತ್ತಿನ ಪರಿಸ್ಥಿತಿ ಇಟ್ಟುಕೊಂಡು ಮಾಡಿದ್ದೀವಿ. ನಿಮ್ಮ ಪ್ರೀತಿ ಪ್ರೋತ್ಸಾಹ ಕನ್ನಡ ಸಿನಿಮಾಗಳ ಮೇಲಿರಲಿ" ಎಂದು ದರ್ಶನ್ ಮನವಿ ಮಾಡಿದರು.

ಬೆಳ್ಳಿ ಗದೆ ವಾಪಸ್ ಕೊಟ್ಟ ದರ್ಶನ್
ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದದ್ದ ದರ್ಶನ್ಗೆ ಬೆಳ್ಳಿ ಗದೆಯನ್ನು ಉಡುಗೊರೆಯಾಗಿ ನೀಡಲಾಯಿತು. "ಈ ಗದೆ ಹಿಡಿದುಕೊಳ್ಳುವ ಯೋಗ್ಯತೆನೂ ನಮಗಿಲ್ಲ. ಆದರೆ ಅವರು ಪ್ರೀತಿಯಿಂದ ಕೊಟ್ಟಿದ್ದಾರೆ. ಹೆಚ್ಎಸ್ಆರ್ ಲೇಔಟ್ನಲ್ಲಿ ಯಾರು ಚೆನ್ನಾಗಿ ಓದುತ್ತಾರೋ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಇದನ್ನು ಕೊಟ್ಟು ಬಿಡಿ" ಎಂದು ನಟ ದರ್ಶನ್ ಗದೆಯನ್ನು ವಾಪಸ್ ಕೊಟ್ಟರು.

'ಸಂಗೊಳ್ಳಿ ರಾಯಣ್ಣ' ಡೈಲಾಗ್ ಹೊಡೆದ ದರ್ಶನ್
"ಇವತ್ತು ಸಂಗೊಳ್ಳಿ ರಾಯಣ್ಣ ಅವರ ಹುಟ್ಟಿದ ದಿನ. ಆಗಸ್ಟ್ 15ರಂದು ರಾಯಣ್ಣ ಹುಟ್ತಾರೆ, ಜನವರಿ 26 ರಿಪಬ್ಲಿಕ್ ಡೇ ದಿನ ಅವರನ್ನು ಗಲ್ಲಿಗೆ ಹಾಕ್ತಾರೆ. ಯಾರಿಗೆ ಆ ಅದೃಷ್ಟ ಸಿಗುತ್ತೆ ಹೇಳಿ" ಎಂದು ದರ್ಶನ್ ತಾವು ನಟಿಸಿದ್ದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು.


Click it and Unblock the Notifications











