ಮಕ್ಕಳನ್ನು ನೀರಿಗೆ ತಳ್ಳಿ ಸಾಯಲು ಮನಸ್ಸು ಮಾಡಿದ್ರಾ ಮೀನಮ್ಮ? ಶಾಕಿಂಗ್ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್
ಬಿಡುವಿಲ್ಲದ ಚುನಾವಣೆ ಪ್ರಚಾರದ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥಸ್ವಾಮಿಯ ದರ್ಶನ ಪಡೆದಿದ್ದಾರೆ. ಅಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾತನಾಡಿ ತಮ್ಮ ಜೀವನದಲ್ಲಿ ನಡೆದ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ದರ್ಶನ್ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಧರ್ಮಸ್ಥಳ ಕ್ಷೇತ್ರದ ಮಹಿಮೆ ಹಾಗೂ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರ ಕುರಿತು ನಟ ದರ್ಶನ್ ಮಾತನಾಡಿದ್ದಾರೆ. ಅಲ್ಲಿ ಕೂಡ ಜೈಕಾರ ಹಾಕುತ್ತಿದ್ದ ಅಭಿಮಾನಿಗಳಿಗೆ ಹಿತವಚನ ಹೇಳಿದ್ದಾರೆ. ಇಲ್ಲಿ ಆ ರೀತಿ ಮಾಡಬಾರದು ಎಂದಿದ್ದಾರೆ. ತಂದೆ ತೂಗೂದೀಪ ಶ್ರೀನಿವಾಸ್ ನಿಧನರಾದ ಸಮಯದಲ್ಲಿ ಮನೆಯ ಪರಿಸ್ಥಿತಿ ಹೇಗಿತ್ತು? ತಾಯಿ ಮೀನಮ್ಮ ಮೂರು ಜನ ಮಕ್ಕಳನ್ನು ಕೆಆರ್ಎಸ್ಗೆ ತಳ್ಳಿ ತಾವು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರಂತೆ. ಆದರೆ ಮಂಜುನಾಥಸ್ವಾಮಿಯ ದರ್ಶನ ಮಾಡಿ ವೀರೇಂದ್ರ ಹೆಗ್ಗಡೆ ಭೇಟಿಯ ಬಳಿಕ ನಿರ್ಧಾರ ಬದಲಿಸಿಕೊಂಡಿದ್ದರು ಎಂದು ದರ್ಶನ್ ಹೇಳಿದ್ದಾರೆ.

ಸಾಮೂಹಿಕ ವಿವಾಗ ಮಹೋತ್ಸವದ ನಂತರ ಮಾತನಾಡಿದ ದರ್ಶನ್ "ಹೊಸ ಜೀವನಕ್ಕೆ ಕಾಲಿಡುತ್ತಿರುವ ಎಲ್ಲಾ 201 ಜೋಡಿಗಳಿಗೆ ಶುಭಾಶಯ. ಭಗವಂತ ನಿಮಗೆ ಆಯುಷ್ ಆರೋಗ್ಯ ಕೊಡಲಿ. ಜೀವನ ಬಹಳ ಚೆನ್ನಾಗಿರಲಿ. ಇಲ್ಲಿ ಬಂದಿರುವ ಎಲ್ಲಾ ಜೋಡಿಗಳು ಒಳ್ಳೆ ಕೆಲಸ ಮಾಡಿದ್ಧಾರೆ. ಯಾಕಂದ್ರೆ ಇವತ್ತು ಮದುವೆ ಮಾಡೋದು ಬಹಳ ಕಷ್ಟ. ಇಲ್ಲಿ ಮದುವೆಯಾದರೆ ಬಹಳ ಉಪಯೋಗ ಇದೆ. ಹೆಣ್ಣಿನ ಮನೆಯವರು ಅದು ಮಾಡಿಲ್ಲ, ಇದು ಮಾಡಿಲ್ಲ ಎಂದು ಯಾರು ಹೇಳಲ್ಲ. ಇದನ್ನು ನಾನು ಯಾಕೆ ಹೇಳ್ತೀನಿ ಅಂದ್ರೆ ನಾನು ಮದುವೆ ಮಾಡಿಕೊಂಡಿದ್ದು ಇಲ್ಲೇನೆ"
"ಈ ಜಾಗದ ಮಹಿಮೆ ಎಂಥದ್ದು ಅಂತ ನಾನು ಹೇಳ್ತೀನಿ. ಇವತ್ತಿನವರೆಗೂ ಎಲ್ಲೂ ಹೇಳಿಲ್ಲ. ನಮ್ಮ ತಂದೆ ನಿಧನರಾದ ಹೊಸತು ಆಗ. ನಾನು ಚಿಕ್ಕವನು, ನಮ್ಮ ತಮ್ಮ ಇನ್ನು ಚಿಕ್ಕವನು. ನಮ್ಮ ಅಕ್ಕನ ಮದುವೆ ಆಗಿರಲಿಲ್ಲ. ಆಗ ತುಂಬಾ ಕಷ್ಟ ಇತ್ತು. ಈ ಜಾಗದ ಮಹಿಮೆ, ಹೆಗ್ಗಡೆಯವರ ಹಿತವಚನ ಎಂಥದ್ದು ಅಂತ ಹೇಳಬೇಕು. ನಮ್ಮ ತಾಯಿ ಒಂದಷ್ಟು ಹಣ ಹೊಂದಿಸುಕೊಂಡು ಕಾರು ತೆಗಿ ಅಂದ್ರು. ಡೀಸಲ್ ತರೋಕೆ ಕಾಸಿಲ್ಲ. ನಮ್ಮಮ್ಮ ಕಾರು ತೆಗಿ ಎನ್ನುತ್ತಿದ್ದಾರೆ ಎಂದು ಅಚ್ಚರಿ ಆಯಿತು"
"ಧರ್ಮಸ್ಥಳಕ್ಕೆ ಹೋಗೋಣ ನಡೀ ಅಂದ್ರು. ಅಲ್ಲಿಂದ ನಾವು ನಾಲ್ಕು ಜನ, ನಾನು ನಮ್ಮಮ್ಮ, ನನ್ನ ತಮ್ಮ ನನ್ನ ಅಕ್ಕ. ನಾಲ್ಕು ಜನ ಬಂದ್ವಿ. ಇಲ್ಲೊಂದು ರೂಮ್ ಬುಕ್ ಮಾಡಿದ್ವಿ. ದೇವರ ದರ್ಶನ ಮಾಡಿಕೊಂಡ್ವಿ. ಅಲ್ಲಿಂದ ನಮ್ಮ ಅಮ್ಮ ಕೊಂಚ ಡಲ್ ಆಗಿ ಇದ್ದರು. ನಮಗೆ ಯಾಕೆ ಅಂತ ಗೊತ್ತಿರಲಿಲ್ಲ. ಹೆಗ್ಗಡೆ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋದೆವು. ಅಲ್ಲಿ ನಮ್ಮ ಅಮ್ಮ ಮಾತನಾಡಿದ್ದು ನನಗೆ ಭಯವಾಯಿತು."

"ನಮ್ಮಮ್ಮ ಅಷ್ಟರಲ್ಲಿ ಡಿಸೈಡ್ ಮಾಡಿದ್ದರಂತೆ. ಮೂರು ಜನ ಮಕ್ಕಳನ್ನು ಕೆಆರ್ಎಸ್ಗೆ ತಳ್ಳಿ ನಾನು ಬಿದ್ದು ಬಿಡೋಣ ಎಂದುಕೊಂಡಿದ್ದರಂತೆ. ಯಾಕಂದ್ರೆ ಮನೆಗೆ ಆಧಾರ ಸ್ತಂಭ ಇರಲಿಲ್ಲ ಅಂತ. ಅಂದು ವೀರೇಂದ್ರ ಹೆಗ್ಗಡೆ ಅವರು ಹೇಳಿದ ಮಾತು ಚೆನ್ನಾಗಿದೆ. ಅಲ್ಲಮ್ಮ ಇಬ್ಬಿಬ್ಬರು ಗಂಡುಮಕ್ಕಳು ಇದ್ದಾರೆ. ಒಳ್ಳೆದಾಗುತ್ತೆ ಹೋಗು ಅಂತ. ಅವತ್ತು ಹೋಗು ಅಂತ ಕಳುಹಿಸಿದರು. ಇವತ್ತು ಇಲ್ಲಿ ನಿಂತಿದ್ದೀನಿ. ಅವರ ಹಿತವಚನ ಇಲ್ಲಿವರೆಗೂ ಕರೆದುಕೊಂಡು ಬಂದಿದೆ."
"ಇಲ್ಲಿ ಬಂದವರು ಯಾರು ಬರೀಗೈಲಿ ಹೋಗಿಲ್ಲ. ಹೊಸದಾಗಿ ಮದುವೆಯಾದ ಜೋಡಿಗಳಿಗೆ ನಾನು ಅದೇ ಹೇಳ್ತೀನಿ. ಜೀವನದಲ್ಲಿ ಏನೇ ಕಷ್ಟ ಬಂದ್ರು ಇಲ್ಲಿಗೆ ಬನ್ನಿ. ಕಷ್ಟಸುಖ ಏನೇ ಇದ್ದರೂ ವೀರೇಂದ್ರ ಹೆಗ್ಗಡೆ ಅವರ ಬಳಿ ಹೇಳಿಕೊಳ್ಳಿ" ಎಂದು ದರ್ಶನ್ ಸಲಹೆ ನೀಡಿದ್ದಾರೆ.


Click it and Unblock the Notifications











