ಆನೆ ನಡೆದಿದ್ದೇ ದಾರಿ: ವಿಡಿಯೋ ಶೇರ್ ಮಾಡಿ ದರ್ಶನ್ ಹೇಳಿದ್ದೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಯಜಮಾನ' ಸಿನಿಮಾ ಸೂಪರ್ ಹಿಟ್ ಆಗಿತ್ತು. ನಿಜ ಜೀವನದಲ್ಲಿ ದರ್ಶನ್ ನೇರ ನಡೆ, ನುಡಿ, ಸಹಾಯ ಗುಣವನ್ನು ಚಿತ್ರದ ಕೆಲ ಸಂಭಾಷಣೆ, ಹಾಡಿನ ಸಾಹಿತ್ಯದಲ್ಲಿ ಸೇರಿಸಿ ಬರೆಯಲಾಗಿತ್ತು. ಅದು ಅಭಿಮಾನಿಗಳಿಗೂ ಇಷ್ಟವಾಗಿತ್ತು. ಅದರಲ್ಲೂ 'ಆನೆ ನಡೆದಿದ್ದೆ ದಾರಿ' ಅನ್ನೋ ಡೈಲಾಗ್ ಸಖತ್ ಕಿಕ್ ಕೊಟ್ಟಿತ್ತು. ಸದ್ಯ 'ಕ್ರಾಂತಿ' ಸಿನಿಮಾ ಟ್ಯಾಗ್ಲೈನ್ ಕೂಡ ಎಲ್ಲರ ಗಮನ ಸೆಳೆದಿದೆ. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ದರ್ಶನ್ ಒಂದು ವಿಡಿಯೋ ಶೇರ್ ಮಾಡಿ ಅದೇ ಟ್ಯಾಗ್ಲೈನ್ ಬರೆದುಕೊಂಡಿದ್ದಾರೆ.
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಅಕ್ಷರಕ್ರಾಂತಿಯ ಬಗ್ಗೆ ಚರ್ಚಿಸಲಾಗಿದೆ. ಅಂದರೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಸಂದೇಶ ಚಿತ್ರದಲ್ಲಿದೆ. 'ಒಂಟಿಯಾಗಿ ಹೋರಾಡುವುದನ್ನು ಕಲಿ' ಎನ್ನುವ ಟ್ಯಾಗ್ಲೈನ್ ಇದೆ. ಯಾವುದಕ್ಕೂ ಜಗ್ಗದೇ ನಾಯಕ ಹೇಗೆ ಏಕಾಂಗಿಯಾಗಿ 'ಕ್ರಾಂತಿ' ಮಾಡುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ಹೇಳಲು ಹೊರಟಿದೆ ಚಿತ್ರತಂಡ. ಒಬ್ಬೊಂಟಿಯಾದರೂ ಎಂತಹ ಸಮಯದಲ್ಲೂ ಹೋರಾಟ ಬಿಡಬೇಡ ಎನ್ನುವುದನ್ನು ಸಾರಿ ಹೇಳುವ ವಿಡಿಯೋವನ್ನು ದರ್ಶನ್ ಶೇರ್ ಮಾಡಿದ್ದಾರೆ.
ತನ್ನ ಮೇಲೆ ಎರಗಿದ ಸಿಂಹಗಳಿಂದ ಒಂಟಿ ಆನೆಯೊಂದು ಹೇಗೆ ತಪ್ಪಿಸಿಕೊಳ್ಳುತ್ತದೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ನೀರು ಕುಡಿಯಲು ಬಂದ ಆನೆಯೊಂದರ ಮೇಲೆ ಸಿಂಹಗಳ ಹಿಂಡು ದಾಳಿ ಮಾಡುತ್ತದೆ. ಎರಡು ಮೂರು ಸಿಂಹಗಳು ಆನೆಯ ಬೆನ್ನೇರಿ ಕಚ್ಚಲು ಶುರು ಮಾಡುತ್ತದೆ. ಆದರೆ ಆನೆ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ. ಸತತವಾಗಿ ಹೋರಾಡಿ ಸಿಂಹಗಳ ಹಿಂಡನ್ನು ಚದುರಿಸಿ ತಪ್ಪಿಸಿಕೊಂಡು ಹೋಗುತ್ತದೆ. ವಿಡಿಯೋ ನೋಡಿ ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. 'ಆನೆ ನಡೆದಿದ್ದೇ ದಾರಿ' ಎಂದು ಬರೆಯುತ್ತಾರೆ.

'ಕ್ರಾಂತಿ' ಶೂಟಿಂಗ್ ಮುಗಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ 'D56' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ತರುಣ್ ಸುಧೀರ್ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸೂಪರ್ ಹಿಟ್ 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. ನಾಯಕಿಯಾಗಿ ಹಿರಿಯ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸುತ್ತಿದ್ದಾರೆ. ರಾಕ್ಲೈನ್ ಸ್ಟುಡಿಯೋದಲ್ಲಿ ದರ್ಶನ್ ಹಾಗೂ ರಾಧನಾ ನಟನೆಯ ಕೆಲ ದೃಶ್ಯಗಳನ್ನು ತರುಣ್ ಸೆರೆ ಹಿಡಿದಿದ್ದಾರೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ 'D56' ಸಿನಿಮಾ ಕಟ್ಟಿಕೊಡಲಾಗ್ತಿದೆ. ಇದು ದರ್ಶನ್ ನಟನೆಯ 56ನೇ ಸಿನಿಮಾ. ಒಂದೊಳ್ಳೆ ಟೈಟಲ್ಗಾಗಿ ತಂಡ ಹುಡುಕಾಟ ನಡೆಸ್ತಿದೆ.

ನಟ ದರ್ಶನ್ ಪ್ರಾಣಿ-ಪಕ್ಷಿ ಪ್ರೀತಿ ಹಾಗೂ ಪರಿಸರ ಕಾಳಜಿ ಕಂಡು ಈಗಾಗಲೇ ಅರಣ್ಯ ಇಲಾಖೆಯ ರಾಯಭಾರಿಯಾಗಿ ಆಯ್ಕೆ ಆಗಿರೋದು ಗೊತ್ತೇಯಿದೆ. ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ಸಂದೇಶ ಸಾರುತ್ತಿದ್ದಾರೆ. ಇದ್ದಕ್ಕಿದಂತೆ ಕ್ಯಾಮರಾ ಹೆಗಲೇರಿಸಿಕೊಂಡು ಸಫಾರಿಗೆ ತೆರಳಿ ಪ್ರಾಣಿ ಪಕ್ಷಿಗಳ ಅದ್ಭುತ ಫೋಟೋಗಳನ್ನ ಕ್ಲಿಕ್ಕಿಸಿ, ಅದನ್ನ ಮಾರಾಟ ಮಾಡಿ ಬಂದ ಹಣವನ್ನ ವನ್ಯಜೀವಿ ಸಂರಕ್ಷಣಾನಿಧಿಗೆ ನೀಡುತ್ತಿದ್ದಾರೆ. ಮೈಸೂರಿನ ಫಾರ್ಮ್ ಹೌಸ್ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಅವರು ಸಾಕುತ್ತಿದ್ದಾರೆ. ಮೈಸೂರು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಇಷ್ಟೆ ಅಲ್ಲ ದರ್ಶನ್ ಕೃಷಿ ಇಲಾಖೆಯ ರಾಯಭಾರಿ ಕೂಡ ಆಗಿದ್ದಾರೆ. ರೈತಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
Recommended Video


Click it and Unblock the Notifications











