ಅಷ್ಟಾಗಿ ವೈರಲ್ ಆಗದ ದರ್ಶನ್- ಅಪ್ಪು ಬಾಲ್ಯದ ಫೋಟೊ: ಆ ದಿನ ನೆನೆದ ಚಾಲೆಂಜಿಂಗ್ ಸ್ಟಾರ್
ಪುನೀತ್ ರಾಜ್ಕುಮಾರ್ ಹಾಗೂ ಕಿಚ್ಚ ಸುದೀಪ್ ಬಾಲ್ಯದ ಫೋಟೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ನಟ ದರ್ಶನ್ ಹಾಗೂ ಅಪ್ಪು ಒಟ್ಟಿಗೆ ಇರುವ ಫೋಟೊ ಕೂಡ ಇದೆ. ಇದು ಅಷ್ಟಾಗಿ ವೈರಲ್ ಆಗಿಲ್ಲ. ಆ ಫೋಟೊ ಬಗ್ಗೆ ಇದೀಗ ಸ್ವತಃ ದರ್ಶನ್ ಮಾತನಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಚಿತ್ರರಂಗದ ಎಲ್ಲರೊಟ್ಟಿಗೆ ಆತ್ಮೀಯ ಸ್ನೇಹ ಇತ್ತು. ನಟ ದರ್ಶನ್ ಹಾಗೂ ಅಪ್ಪು ಕೂಡ ಒಳ್ಳೆ ಸ್ನೇಹಿತರು. ಪುನೀತ್ ನಟನೆಯ 'ಅರಸು' ಚಿತ್ರದಲ್ಲಿ ಸಂಭಾವನೆ ಇಲ್ಲದೇ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇನ್ನು ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ದರ್ಶನ್ ಅರ್ಜುನನಾಗಿ, ಅಪ್ಪು ಬಭ್ರುವಾಹನನಾಗಿ ವೇದಿಕೆ ಏರಿದ್ದರು. ಡಾ. ರಾಜ್ಕುಮಾರ್ ಫ್ಯಾಮಿಲಿಗೂ ತೂಗುದೀಪ ಶ್ರೀನಿವಾಸ್ ಫ್ಯಾಮಿಲಿಗೂ ಆತ್ಮೀಯ ಒಡನಾಟ ಇದೆ. ಅಣ್ಣಾವ್ರ ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ಆಸ್ಥಾನ ಕಲಾವಿದರರಾಗಿದ್ದರು.
ಶಿವರಾಜ್ಕುಮಾರ್ ನಟನೆಯ 'ದೇವರ ಮಗ' ಚಿತ್ರದಲ್ಲಿ ದರ್ಶನ್ ಖಳನಟನಾಗಿ ಬಣ್ಣ ಹಚ್ಚಿದ್ದರು. ಚಿಕ್ಕಂದಿನಲ್ಲೂ ನಟ ದರ್ಶನ್, ಅಣ್ಣಾವ್ರ ಮನೆಗೆ ಹೋಗಿ ಬರುತ್ತಿದ್ದರು. ಹೀಗೆ ದಶಕಗಳ ಹಿಂದೆ ಡಾ. ರಾಜ್ಕುಮಾರ್ ಪುತ್ರಿ ಲಕ್ಷ್ಮಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್ ಭಾಗಿ ಆಗಿದ್ದರು. ಅಂದು ಕ್ಲಿಕ್ಕಿಸಿರುವ ಅಪ್ಪು, ದರ್ಶನ್ ಒಟ್ಟಿಗೆ ಇರುವ ಫೋಟೊ ಅಭಿಮಾನಿಗಳ ಮನಗೆದ್ದಿದೆ.

ಒಂದೇ ಫ್ರೇಮ್ನಲ್ಲಿ ದರ್ಶನ್, ಅಪ್ಪು, ವಿಜಿ
80ರ ದಶಕದ ಆರಂಭದಲ್ಲಿ ಡಾ. ರಾಜ್ಕುಮಾರ್ ಮಗಳು ಲಕ್ಷ್ಮಿ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ನಟ ದರ್ಶನ್ ಕೂಡ ಭಾಗಿ ಆಗಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಫೋಟೊದಲ್ಲಿ ದರ್ಶನ್, ಪುನೀತ್, ಲಕ್ಷ್ಮಿ ಅವರ ಜೊತೆಗೆ ಪುಟಾಣಿ ವಿಜಯ್ ರಾಘವೇಂದ್ರ ಅವರನ್ನು ಕೂಡ ನೋಡಬಹುದು. ಇತ್ತೀಚೆಗೆ ಸಿನಿಬಝ್ ಯೂಟ್ಯೂಬ್ ಸಂದರ್ಶನದ ವೇಳೆ ಈ ಫೋಟೊ ಬಗ್ಗೆ ನಟ ದರ್ಶನ್ ಮಾತನಾಡಿದ್ದರು.

ದೊಡ್ಮನೆಯನ್ನು ಮರೆಯದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಷ್ಟು ಸಂದರ್ಭಗಳಲ್ಲಿ ದೊಡ್ಮನೆ ಬಗ್ಗೆ ಮಾತನಾಡಿದ್ದಾರೆ. ಶಿವಣ್ಣ, ಅಪ್ಪು ಜೊತೆಗೂ ಆತ್ಮೀಯ ಒಡನಾಟ ಇದೆ. ಕೆಲ ದಿನಗಳ ಹಿಂದೆ ದೊಡ್ಮನೆ ಬಗ್ಗೆ ಮಾತನಾಡುತ್ತಾ "ನಮ್ಮ ಅಪ್ಪ, ನಾನು ಎಲ್ಲರೂ ದೊಡ್ಮನೆಯಿಂದ ಬಂದವರು. ಡಾ. ರಾಜ್ಕುಮಾರ್ ಕಂಪೆನಿಯಿಂದ ನಮ್ಮ ಅಪ್ಪ ಚಿತ್ರರಂಗಕ್ಕೆ ಬಂದಿದ್ದು. ನಾನು ಲೈಟ್ ಬಾಯ್ ಆಗಿ ಸೇರಿಕೊಂಡಿದ್ದು ಇದೇ ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ. 'ಜನುಮದ ಜೋಡಿ' ಚಿತ್ರಕ್ಕೆ 150 ರೂ. ಬಾಟಾ ಇಂದ ಶುರುಮಾಡಿದ್ದು ನಾನು. ಎಷ್ಟೇ ವರ್ಷ ಆದರೂ ದೊಡ್ಮನೆ ದೊಡ್ಮನೆನೇ. ನಾವೆಲ್ಲಾ ಅದರ ಕೆಳಗಿರುವ ಹುಲ್ಲು ಅಲ್ಲ, ಬೇರುಗಳು ಅಂದುಕೊಳ್ಳಿ" ಎಂದಿದ್ದರು.

ನಿಂತು ಕಾರ್ಯಕ್ರಮ ನೋಡ್ತೀನಿ- ದರ್ಶನ್
ಪುನೀತ್ ರಾಜ್ಕುಮಾರ್ ನೆನಪಿನಲ್ಲಿ ಕಳೆದ ವರ್ಷ ಫಿಲ್ಮ್ ಛೇಂಬರ್ ವತಿಯಿಂದ 'ಅಪ್ಪು ಅಮರ' ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಯಾಂಡಲ್ವುಡ್ನ ಸುಮಾರು 140ಕ್ಕೂ ಅಧಿಕ ಮಂದಿ ಕಲಾವಿದರಿಗೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಸ್ನೇಹಿತರ ಜೊತೆ ದರ್ಶನ್ ಬಂದಿದ್ದರು. ಅವರ ಬಳಿ ಪಾಸ್ ಇರಲಿಲ್ಲ. ಪಾಸ್ ಇಲ್ಲದೇ ಬಿಡುವುದಿಲ್ಲ. ಒಳಗೆ ಕೂರಲು ಚೇರ್ ಇಲ್ಲ ಎಂದು ಪೊಲೀಸರು ತಡೆದಿದ್ದರು. ಆಗ ದರ್ಶನ್ "ಕೂರಲು ಜಾಗ ಇಲ್ಲದಿದ್ದರೂ ಪರವಾಗಿಲ್ಲ. ನಿಂತುಕೊಂಡೇ ಕಾರ್ಯಕ್ರಮ ನೋಡುತ್ತೇವೆ. ಕುಡಿಯಲು ನೀರು ಸಿಗದಿದ್ದರೂ ಪರವಾಗಿಲ್ಲ" ಎಂದು ಹೇಳಿ ಒಳಗೆ ಹೋಗಿದ್ದರು.

'ಕ್ರಾಂತಿ' ರಿಲೀಸ್ಗಾಗಿ ಕಾತರ
ದರ್ಶನ್- ರಚಿತಾ ರಾಮ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಶನಿವಾರ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಲಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಶೈಲಜಾ ನಾಗ್, ಬಿ. ಸುರೇಶ ಬಂಡವಾಳ ಹೂಡಿದ್ದಾರೆ. ಜನವರಿ 26ಕ್ಕೆ 'ಕ್ರಾಂತಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತೆರೆಗೆ ಬರಲಿದೆ.


Click it and Unblock the Notifications











