ಹಳ್ಳಿಕಾರ್ ತಳಿ ಎತ್ತುಗಳ ಉಚಿತ ವಿತರಣೆ: ರೈತರಿಗೆ ಕಿವಿಮಾತು ಹೇಳಿದ ನಟ ದರ್ಶನ್
ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಭುಗಿಲೇಳುತ್ತಿರುವ ಬೆನ್ನಲ್ಲೇ ನಟ ದರ್ಶನ್ ತೂಗುದೀಪ ಹಲವು ಹೇಳಿಕೆಗಳನ್ನು ನೀಡಿ ರೈತ ಪರ ದನಿ ಎತ್ತಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ತೀರ್ಪುಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದೆ.
ಇನ್ನು, ಭಾನುವಾರ (ಸೆಪ್ಟಂಬರ್ 24) ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ ರೈತರಿಗೆ ಹಳ್ಳಿಕಾರ್ ತಳಿಯ ಎತ್ತುಗಳನ್ನು ನೀಡುವ ಕಾರ್ಯಕ್ರಮದಲ್ಲಿ ನಟ ದರ್ಶನ್ ತೂಗುದೀಪ ಭಾಗಿಯಾಗಿದ್ದಾರೆ. ಈ ವೇಳೆ ಕೃಷಿಕರಿಗೆ ಎತ್ತುಗಳನ್ನು ನೀಡಿ ಕೆಲವು ಕಿವಿಮಾತು ಕೂಡ ಹೇಳಿದ್ದಾರೆ.

ಗೋದಾನ ಕಾರ್ಯಕ್ರಮದಲ್ಲಿ ದರ್ಶನ್ ಮಾತು
ಸೆಪ್ಟಂಬರ್ 24 ರಂದು ಬನ್ನೂರಿನ ಗಂಗಾ ಸೇನೆ, ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ರೈತರಿಗೆ 100 ಹಳ್ಳಿಕಾರ್ ಎತ್ತುಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಮಾಡಲಾಗಿದೆ. ನಟ ದರ್ಶನ್ ನಟರಾಗಿ ಅಲ್ಲದೇ ತಮ್ಮ ಫಾರ್ಮ್ ಹೌಸ್ ಮತ್ತು ಪ್ರಾಣಿಗಳನ್ನು ಸಾಕುವುದಕ್ಕೂ ಹೆಸರುವಾಸಿಯಾಗಿದ್ದಾರೆ. ಕೃಷಿ ಇಲಾಖೆಯ ರಾಯಭಾರಿಯಾಗಿಯೂ ಕೆಲಸ ಮಾಡುತ್ತಿದ್ದು, ಈ ಗೋದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಗಂಗ ಅರಸರ ಸಂಸ್ಕೃತಿಯಾದ ಹಳ್ಳಿಕಾರ್ ತಳಿಯ ಎತ್ತುಗಳನ್ನು ಉಳಿಸಬೇಕು ಮತ್ತು ಗಂಗರ ಆಡಳಿತ ವೈಭವ ಜನರಿಗೆ ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿರುವ ನಟ ದರ್ಶನ್, ಹಳ್ಳಿಕಾರ್ ದೇಶೀಯ ತಳಿಯಾಗಿದ್ದು, ಇವುಗಳನ್ನು ಉಳಿಸಿಕೊಳ್ಳಬೇಕು. ನಾವು ಎಲ್ಲೇ ಹೋದರು ಹಳ್ಳಿಕಾರ್ ತಳಿಗಳನ್ನು ನಮ್ಮ ದೇಶದ ತಳಿಗಳೆಂದು ಹೇಳಿಕೊಳ್ಳಲು ಹೆಮ್ಮಯಾಗುತ್ತದೆ" ಎಂದಿದ್ದಾರೆ.

ಇನ್ನು, ಮಾರುಕಟ್ಟೆಯಲ್ಲಿ ಹಳ್ಳಿಕಾರ್ ತಳಿಯ ಹಸುವಿನ ದರ 25,000 ರಿಂದ 30,000 ರೂಪಾಯಿ ಇದೆ. ಆದರೆ, ತಳಿ ಸಂರಕ್ಷಣೆಗಾಗಿ ರೈತರಿಗೆ ಉಚಿತವಾಗಿ ವಿತರಣೆ ಮಾಡಲು 100 ರಾಸುಗಳನ್ನು ಖರೀದಿ ಮಾಡಲಾಗಿದೆ. ರಾಸುಗಳನ್ನು ಪಡೆದುಕೊಳ್ಳುವುದು ಮುಖ್ಯವಲ್ಲ. ಅವುಗಳ ತಳಿಗಳನ್ನು ಅಭಿವೃದ್ಧಿಪಡಿಸಬೇಕು, ಸರಿಯಾಗಿ ರಾಸುಗಳನ್ನು ಪಾಲನೆ ಮಾಡಬೇಕು ಎಂದು ಗಂಗಾ ಸೇನೆಯ ಅಧ್ಯಕ್ಷ ಡಾ.ರಾಹುಲ್ಗೌಡ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ದರ್ಶನ್ ತೂಗುದೀಪ್ ಜೊತೆಗೆ ಅಭಿಷೇಕ್ ಅಂಬರೀಷ್, ಯಶಸ್ ಸೂರ್ಯ ರಾಹುಲ್ ಗೌಡ ಭಾಗಿಯಾಗಿದ್ದರು. ಜೊತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪರವರು, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಜರಿದ್ದರು.


Click it and Unblock the Notifications











