ಹನಿಮೂನ್ನಿಂದ ವಾಪಸ್ಸಾದ ಚಂದನ್-ನಿವೇದಿತಾ ಮೇಲೆ ಪ್ರಶ್ನೆಗಳ ಸುರಿಮಳೆ
ನವವಿವಾಹಿತ ಜೋಡಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ಅವರುಗಳು ಕೆಲವು ದಿನಗಳ ಹಿಂದಷ್ಟೆ ಹನಿಮೂನ್ ಗೆಂದು ವಿದೇಶಕ್ಕೆ ತೆರಳಿದ್ದರು. ಅವರು ಕೊರೊನಾ ಭೀಕರವಾಗಿ ಹರಡಿರುವ ಇಟಲಿಗೆ ಹೋಗಿದ್ದಾರೆಂದು ಕೆಲವರು ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ತಪಾಸಣೆಗೆ ಆಗ್ರಹಿಸಿದ್ದರು.
ಇದೀಗ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರುಗಳು ತಮ್ಮ ಮೇಲೆ ಮಾಡಲಾಗಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ನಾವು ಇಟಲಿಗೆ ಹೋಗಿರಲಿಲ್ಲವೆಂದು, ಕೊರೊನಾ ಎಲ್ಲೆಡೆ ಆವರಿಸುವ ಹೊತ್ತಿಗಾಗಲೇ ನಾವು ವಾಪಸ್ ಬಂದಿದ್ದಾಗಿ ಹೇಳಿದ್ದಾರೆ.

ನಾವು ಹೋಗಿದ್ದು ನೆದರ್ಲೆಂಡ್ ಗೆ: ಚಂದನ್
ನಾವು ನೆದರ್ಲೆಂಡ್ ಗೆ ಹೋಗಿದ್ದೆವು, ಅಲ್ಲಿಂದ ಪ್ಯಾರಿಸ್ ಗೆ ಹೋಗುವ ಯೋಜನೆ ಇತ್ತು, ಆದರೆ ಅಲ್ಲಿ ಕೊರೊನಾ ವೈರಸ್ ಹರಡಿದೆ ಎಂದು ಗೊತ್ತಾದ ಕೂಡಲೇ ನಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ಸಾದೆವು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಚೀನಾದಲ್ಲಿ ಮಾತ್ರವೇ ಇತ್ತು: ಚಂದನ್
ಒಂದನೇ ತಾರೀಖು ನಾವು ನೆದರ್ಲೆಂಡ್ ಗೆ ಹೋಗಿದ್ದೆವು. ನಾವು ಹೋಗುವಾಗ ಚೀನಾದಲ್ಲಿ ಮಾತ್ರವೇ ಕೊರೊನಾ ವೈರಸ್ ಇತ್ತು. ನೆದರ್ಲೆಂಡ್ ನಲ್ಲಿ ಕೊರೊನಾ ದ ಆತಂಕ ಇರಲಿಲ್ಲ. ಆದರೆ ನಾವು ಹೋದ ಎರಡು ದಿನದ ನಂತರ ಪ್ಯಾರಿಸ್ನಲ್ಲಿ ಕೊರೊನಾ ಕಂಡು ಬಂದಿತು, ಹಾಗಾಗಿ ಪ್ಯಾರಿಸ್ ಪ್ರವಾಸ ರದ್ದು ಮಾಡಿದೆವು ಎಂದು ಚಂದನ್ ಶೆಟ್ಟಿ ವಿವರಿಸಿದರು.

ಹೋಗಿದ್ದು ಎಂದು ವಾಪಸ್ಸಾಗಿದ್ದು ಎಂದು?
ನಾವು ಒಂದನೇ ತಾರೀಖು ನೆದರ್ಲೆಂಡ್ಗೆ ಪ್ರವಾಸ ಹೋದೆವು. ಆರನೇ ತಾರೀಖು ಮಧ್ಯರಾತ್ರಿ ವೇಳೆಗೆ ಭಾರತಕ್ಕೆ ವಾಪಸ್ ಬಂದೆವು. ನಾವು ಹೋಗುವಾಗ ನಮ್ಮನ್ನು ತಪಾಸಣೆ ಮಾಡಲಿಲ್ಲ. ಬರುವ ವೇಳೆಗಾಗಲೇ ಪರಿಸ್ಥಿತಿ ಗಂಭಿರವಾಗಿತ್ತು, ವಿಮಾನ ನಿಲ್ದಾಣದಲ್ಲಿ ನಮ್ಮನ್ನು ತಪಾಸಣೆ ಮಾಡಿದರು ಎಂದು ಚಂದನ್ ಹೇಳಿದರು.

ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡಿದ್ದಾರೆ: ಚಂದನ್
ತಾವು ಇಟಲಿಗೆ ಹೋಗಿದ್ದೆವು ಎಂದು ಸುಳ್ಳು ಸುದ್ದಿಯನ್ನು ಯಾರೋ ಬೇಕೆಂದೇ ಹಬ್ಬಿಸಿದ್ದಾರೆ ಎಂದು ಆರೋಪಿಸಿದ ಚಂದನ್ ಶೆಟ್ಟಿ, ಇಂತಹಾ ಉದ್ದೇಶಪೂರ್ವಕ ಸುಳ್ಳು ಸುದ್ದಿಯನ್ನು ಎದುರಿಸುವುದು ಅಭ್ಯಾಸವಾಗಿದೆ ಎಂದು ಹೇಳಿದರು.

ಹನಿಮೂನ್ ಬಗ್ಗೆ ಮಾತನಾಡಿದ ನಿವೇದಿತಾ ಗೌಡ
ನಿವೇದಿತಾ ಗೌಡ ಸಹ ಮಾತನಾಡಿ, ಹನಿಮೂನ್ ಪ್ರವಾಸ ಅರ್ಧಕ್ಕೆ ಮೊಟಕಾಗಿದ್ದಕ್ಕೆ ಬೇಸರವೇನೂ ಇಲ್ಲ, ಇದ್ದಷ್ಟೂ ದಿನ ಸಮಯ ಕಳೆದೆವು. ಪ್ರವಾಸಕ್ಕಿಂತಲೂ ನಮ್ಮ ಆರೋಗ್ಯ ಮುಖ್ಯ, ಹಾಗಾಗಿ ನಾವು ಬೇಗನೇ ವಾಪಸ್ ಬಂದೆವು, ಇನ್ನೂ ಅಲ್ಲಿಯೇ ಇರುತ್ತಿದ್ದರೆ ನಮ್ಮ ಪರಿಸ್ಥಿತಿ ಕೆಟ್ಟದ್ದಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.


Click it and Unblock the Notifications











