ಮತ್ತೆ ಕನ್ನಡ ಪರ ಹೋರಾಟಕ್ಕಿಳಿದ ರ್ಯಾಪರ್ ಚಂದನ್ ಶೆಟ್ಟಿ: ಪಬ್ ಗಳ ವಿರುದ್ಧ ಆಕ್ರೋಶ
ಸ್ಯಾಂಡಲ್ ವುಡ್ ನ ಖ್ಯಾತ ರ್ಯಾಪರ್ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮತ್ತೆ ಕನ್ನಡಪರ ಹೋರಾಟಕ್ಕಿಳಿದ್ದಿದ್ದಾರೆ. ಪಬ್ ಗಳಲ್ಲಿ ಕನ್ನಡ ಹಾಡುಗಳನ್ನು ಹಾಕದೆ ಇರುವ ಬಗ್ಗೆ ಕೆಲವು ದಿನಗಳ ಹಿಂದೆಯಷ್ಟೆ ವಿಡಿಯೋ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದೀಗ ಮತ್ತೆ ಬೇಸರ ವ್ಯಕ್ತಪಡಿಸಿದ್ದು, ಪಬ್ ಗಳ ವಿರುದ್ಧ ಚಂದನ್ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಪಬ್ ಗಳು ಮಾತ್ರವಲ್ಲದೆ, ಜಿಮ್, ಮಾಲ್ ಗಳಲ್ಲಿ ಕನ್ನಡ ಹಾಡುಗಳನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಚಂದನ್ ಬೇಸರ ವ್ಯಕ್ತಪಡಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕಡ್ಡಾಯ ಕನ್ನಡ ಅಭಿಯಾನ ಕೈಕೊಂಡಿದ್ದಾರೆ. ಅನೇಕ ಕಡೆ ಹಿಂದಿ, ಇಂಗ್ಲಿಷ್, ಅರೇಬಿಕ್ ಹೀಗೆ ಬೇರೆ ಬೇರೆ ಹಾಡುಗಳನ್ನು ಹಾಕುತ್ತಾರೆ. ಆದರೆ ಕನ್ನಡಿಗನೊಬ್ಬ ಕನ್ನಡ ಹಾಡು ಹಾಕಿ ಎಂದು ಕೇಳಿದ್ರೆ ಕನ್ನಡ ಹಾಡು ಹಾಕದೆ, ಏನು ಬೇಕಾದರು ಮಾಡಿಕೊಳ್ಳಿ ಎಂದು ಹೇಳಿ ಅವಮಾನ ಮಾಡಲಾಗಿದೆ ಎಂದು ಚಂದನ್ ಹೇಳಿದ್ದಾರೆ.
ಇತ್ತೀಚಿಗೆ ಪಬ್ ನಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾತನಾಡಿ, ಇದು ಕನ್ನಡ ಭಾಷೆಗೆ ಆಗುವ ಅವಮಾನ. ಪರಭಾಷಿಕರಿಂದ ಕನ್ನಡ ಭಾಷೆಗೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಈ ಕೂಡಲೇ ನಿಲ್ಲಬೇಕು. ಜಿಮ್, ಪಬ್, ಮಾಲ್ ಗಳು ಸೇರಿದಂತೆ ಅನೇಕ ಕಡೆ ಕಡ್ಡಾಯವಾಗಿ ಕನ್ನಡ ಹಾಡುಗಳನ್ನು ಹಾಕಬೇಕು ಎಂದು ಚಂದನ್ ಧ್ವನಿ ಎತ್ತಿದ್ದಾರೆ. ಕನ್ನಡಿಗರ ಶಕ್ತಿ, ಒಗ್ಗಟ್ಟನ್ನು ತೋರಿಸುವಂತ ಸಮಯ ಈಗ ಬಂದಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟರು, ನಟಿಯರು, ಸಂಗೀತ ನಿರ್ದೇಶಕರು ಎಲ್ಲರೂ ಕನ್ನಡಿಗ, ಕನ್ನಡ ಭಾಷೆ, ಭಾಷೆ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಕಡ್ಡಾಯ ಕನ್ನಡ ನೀತಿಗೆ ಅಭಿಯಾನಕ್ಕೆ ಕೈಜೋಡಿಸಬೇಕೆಂದು ಕೈ ಮುಗಿದು ಕೇಳಿಕೊಂಡಿದ್ದಾರೆ.


Click it and Unblock the Notifications











