Prakash Raj: ಚಂದ್ರಯಾನ-3 ಕುರಿತು ಟೀಕೆ ಆರೋಪ, ನಟ ಪ್ರಕಾಶ್ ರಾಜ್ ವಿರುದ್ಧ ಪ್ರಕರಣ
ಭಾರತದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರಯಾನವನ್ನು ಅಣುಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಬಹು ಭಾಷಾ ನಟ ಪ್ರಕಾಶ್ ರಾಜ್ ಮೇಲೆ ದೂರು ದಾಖಲಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಹಿಂದೂ ಸಂಘಟನೆಗಳ ಮುಖಂಡರು ನಟ ಪ್ರಕಾಶ್ ರಾಜ್ ವಿರುದ್ಧ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟ ಪ್ರಕಾಶ್ ರಾಜ್ ಭಾನುವಾರ ಟ್ವಿಟ್ಟರ್ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದು ಇಷ್ಟಕ್ಕೆಲ್ಲಾ ಕಾರಣ.

ಪ್ರಕಾಶ್ ರಾಜ್ ಹಂಚಿಕೊಂಡ ಪೋಸ್ಟ್ನಲ್ಲಿ ಇರುವುದೇನು..?
ಶರ್ಟ್ ಮತ್ತು ಲುಂಗಿ ಧರಿಸಿರುವ ವ್ಯಕ್ತಿ ಚಹಾವನ್ನು ಮೇಲಿನಿಂದ ಕೆಳಗೆ ಮಿಕ್ಸ್ ಮಾಡುತ್ತಿರುವ ಚಿತ್ರವಾಗಿದೆ. ಇದೊಂದು ಪ್ರಸಿದ್ಧ ವ್ಯಂಗ್ಯಚಿತ್ರ. ಇದನ್ನು ಹಂಚಿಕೊಂಡಿದ್ದ ಅವರು "ಬ್ರೇಕಿಂಗ್ ನ್ಯೂಸ್: ಚಂದ್ರನಿಂದ ವಿಕ್ರಮ್ ಲ್ಯಾಂಡರ್ ಕಳುಹಿಸಿದ ಮೊದಲ ಫೋಟೊ.. ವಾವ್ಹ್.." ಎಂದಿದ್ದರು. ಜೊತೆಗೆ ಎಂದಿನಂತೆ ಜಸ್ಟ್ ಆಸ್ಕಿಂಗ್ ಟ್ಯಾಗ್ ಬಳಸಿದ್ದರು. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಚಂದ್ರಯಾನ-3 ಮಿಷನ್ ಒಂದು ಪಕ್ಷದಲ್ಲ, ಅದು ದೇಶದ ಹೆಮ್ಮೆಗೆ ಸಂಬಂಧಿಸಿದೆ ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದು, ಪ್ರಕಾಶ್ ರಾಜ್ ಅವರನ್ನು ಖಂಡಿಸಿದ್ದಾರೆ. ಇದಾದ ಬೆನ್ನಲ್ಲೆ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್ ಮಾಡಿ, "ದ್ವೇಷ ಕೇವಲ ದ್ವೇಷವನ್ನು ಮಾತ್ರ ನೋಡುತ್ತದೆ" ಎಂದು ತಿರುಗೇಟು ನೀಡಿದ್ದರು.
"ದ್ವೇಷ ಕೇವಲ ದ್ವೇಷವನ್ನು ಮಾತ್ರ ನೋಡುತ್ತದೆ... ನಾನು ನಮ್ಮ ಕೇರಳದ ಚಾಯ್ವಾಲಾರನ್ನು ನೆನಪಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕ್ ಅನ್ನು ಉಲ್ಲೇಖಿಸುತ್ತಿದ್ದೇನೆ. ಟ್ರೋಲ್ಗಳು ಯಾವ ಚಾಯ್ವಾಲಾ ನೋಡಿದ್ದಾರೆ ?? ನಿಮಗೆ ಜೋಕ್ ಆರ್ಥವಾಗದಿದ್ದರೇ ಆ ಜೋಕ್ ನಿಮ್ಮ ಮೇಲೆಯೇ ಇರುತ್ತದೆ.. ಬೆಳೆಯಿರಿ" ಎಂದು ಹೇಳಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಜೊತೆಗೆ ನಟ ಪ್ರಕಾಶ್ ರಾಜ್ ಅವರನ್ನು ಹಲವರು ಬೆಂಬಲಿಸಿದ್ದಾರೆ. ಬಿಜೆಪಿ ಸರ್ಕಾರ ಹೇಗೆ ಎಲ್ಲಾ ಸಾಧನೆಯನ್ನು ತಾನೇ ಮಾಡಿದಂತೆ ತೋರಿಸುತ್ತದೆ ಎಂಬುದನ್ನು ಬೊಟ್ಟು ಮಾಡಿದ್ದಾರೆ.
ಇನ್ನು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಾರ, ಚಂದ್ರಯಾನ - 3 ಆಗಸ್ಟ್ 23 ರಂದು 18:04 ಗಂಟೆಗೆ ಚಂದ್ರನ ಮೇಲೆ ಇಳಿಯಲಿದೆ. ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಭಾರತ. ಆದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿರುವ ವಿಶ್ವದ ಏಕೈಕ ದೇಶ ಭಾರತವಾಗಲಿದೆ.
ಚಂದ್ರಯಾನ-3 ಮಿಷನ್ನ ಪ್ರಾಥಮಿಕ ಉದ್ದೇಶಗಳು ಮೂರು. ಒಂದನೇಯದು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಅನ್ನು ಖಚಿತಪಡಿಸಿಕೊಳ್ಳುವುದು. ಎರಡನೇಯದು ಚಂದ್ರನ ಮೇಲೆ ರೋವರ್ ಸಂಚರಿಸುವುದನ್ನು ನೋಡುವುದು ಮತ್ತು ಮೂರನೇಯದು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು.
ಚಂದ್ರಯಾನ-3 ಜನವರಿ 2020 ರಲ್ಲಿ ಪ್ರಾರಂಭವಾಗಿ, 2021 ರಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿತ್ತು, ಆದರೆ, ಕೋರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವಿಳಂಬವಾಯಿತು. ಚಂದ್ರಯಾನ-3 ಮಿಷನ್ ಅನ್ನು ಜುಲೈ 14, 2023 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2:35 ಕ್ಕೆ ಉಡಾವಣೆ ಮಾಡಲಾಗಿದೆ.


Click it and Unblock the Notifications











