ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಶಾಕ್!
ಕದನ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಅಪ್ಡೇಟ್ ಸಿಗುತ್ತಿದೆ. ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಸಿ.ಪಿ ಯೋಗೇಶ್ವರ್ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಈ ಬಾರಿ ಕಣದಲ್ಲಿದ್ದರು. ಸದ್ಯದ ಮಟ್ಟಿಗೆ ಸಿ.ಪಿ ಯೋಗೇಶ್ವರ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ಈ ಹಿಂದೆ ಒಮ್ಮೆ ಮಂಡ್ಯ ಲೋಕಸಭೆ ಚುನಾವಣೆ ಹಾಗೂ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ನಿಖಿಲ್ ಮೂರನೇ ಗೆಲ್ತಾರಾ? ಎನ್ನುವ ಪ್ರಶ್ನೆ ಮೂಡಿದೆ.

11 ಗಂಟೆಯ ವೇಳೆಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ 21 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ನಿಖಿಲ್ ಭಾರೀ ಹಿನ್ನಡೆ ಅನುಭವಿಸಿದಂತಾಗಿದೆ. ಆರಂಭಿಕ ಸುತ್ತಿನ ಮತ ಎಣಿಕೆ ವೇಳೆ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 10 ಗಂಟೆ ವೇಳೆಗೆ 8ನೇ ಸುತ್ತಿನ ಮತ ಎಣಿಕೆ ಬಳಿಕ ಎಲ್ಲಾ ಉಲ್ಟಾ ಪಲ್ಟಾ ಆಯಿತು.
ಚನ್ನಪಟ್ಟಣ ಉಪಚುನಾವಣೆ ಘೋಷಣೆ ಆದಾಗಲೇ ಯಾವು ಸ್ಪರ್ಧಿಸುತ್ತಾರೆ? ಎನ್ನುವ ಚರ್ಚೆ ಶುರುವಾಗಿತ್ತು. ಕೊನೆಗೆ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಟಿಕೆಟ್ ಪಡೆದಿದ್ದರು. ತಾತ ಮಾಜಿ ಪ್ರಧಾನಿ, ತಂದೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ನಿಖಿಲ್ ಪರ ಮತ ಯಾಚಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಕೂಡ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ನಿಖಿಲ್ ಬೆಂಬಲಕ್ಕೆ ಬಂದಿದ್ದರು. ಈ ಬಾರಿ ನಿಖಿಲ್ ಗೆಲುವು ಖಚಿತ ಎಂದೇ ಎಲ್ಲರೂ ಅಂದುಕೊಂಡಿದ್ದರು.
ಸಿಪಿ ಯೋಗೇಶ್ವರ್ ಮುನ್ನಡೆ ಸಾಧಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಕೈ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸುತ್ತಿದ್ದಾರೆ. ಈಗಾಗಲೇ 11 ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಇನ್ನು 9 ಸುತ್ತಿನ ಮತ ಎಣಿಕೆ ನಡೆಯಬೇಕಿದೆ. ಆದರೆ ಅಂತರ ಬಹಳ ಹೆಚ್ಚಿರುವುದರಿಂದ ಸಹಜವಾಗಿಯೇ ಎನ್ಡಿಎ ಪಾಳಯದಲ್ಲಿ ಆಂತಕ ಮನೆ ಮಾಡಿದೆ.
ಸದ್ಯದ ಮಟ್ಟಿಗೆ ಸಿಪಿ ಯೋಗೇಶ್ವರ್ 67967 ಮತಗಳು ಸಿಕ್ಕಿದೆ. ಇನ್ನು 46001 ಮತ ಗಳಿಸಿ ನಿಖಿಲ್ 21966 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ರಾಜಕೀಯ ಹಿನ್ನಲೆ ಇರುವ ಕುಟುಂಬದ ಕುಡಿ ನಿಖಿಲ್ ಮೊದಲಿಗೆ ಚಿತ್ರರಂಗದತ್ತ ಮುಖ ಮಾಡಿದ್ದರು. ತಮ್ಮದೇ ಬ್ಯಾನರ್ನಲ್ಲಿ ಹೀರೊ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. 'ಜಾಗ್ವಾರ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದರು.
ಭರ್ಜರಿ ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ ಡ್ಯಾನ್ಸ್, ಫೈಟ್ಸ್ನಲ್ಲಿ ಗಮನ ಸೆಳೆದರು. 'ಜಾಗ್ವಾರ್' ಸಿನಿಮಾ ಏಕಕಾಲಕ್ಕೆ ತೆಲುಗಿನಲ್ಲಿ ಬಿಡುಗಡೆ ಆಗಿತ್ತು. ಭಾರೀ ಬಜೆಟ್ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಬಳಿಕ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಟಿಸಿ ಗೆದ್ದರು. 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಆಗಿ ಅಬ್ಬರಿಸಿದ್ದರು. ಚನ್ನಪಟ್ಟಣ ಚುನಾವಣೆಯಲ್ಲಿ ಗೆದ್ದರೆ ನಿಖಿಲ್ ಸಿನಿಮಾಗಳಿಂದ ಸಂಪೂರ್ಣವಾಗಿ ದೂರಾಗುತ್ತಾರಾ? ಎನ್ನುವ ಚರ್ಚೆ ಕೂಡ ನಡೀತಿದೆ.
'ರೈಡರ್' ಎನ್ನುವ ಮತ್ತೊಂದು ಚಿತ್ರದಲ್ಲಿ ನಟಿಸಿ ನಿಖಿಲ್ ಸಿನಿರಸಿಕರ ಮನಗೆದ್ದರು. ಬಳಿಕ ಹೆಚ್ಚು ರಾಜಕೀಯದತ್ತ ಒಲವು ತೋರಿದರು. ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಯಿತು. 'ಯದುವೀರ್' ಎಂಬ ಮತ್ತೊಂದು ಸಿನಿಮಾ ಶುರುವಾಯಿತು. ಆದರೆ ಬಳಿಕ ಆ ಸಿನಿಮಾ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಕೂಡ ಕನ್ನಡ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದರು. 'ಸೈನಿಕ' ಸಿನಿಮಾ ಸೂಪರ್ ಹಿಟ್ ಆಗಿತ್ತು. 'ಬದ್ರಿ', 'ಉತ್ತರ ಧ್ರುವದಿಂ ದಕ್ಷಿಣ ಧ್ರುವಕು', 'ಕಂಬಾಲಹಳ್ಳಿ' ಸೇರಿ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.


Click it and Unblock the Notifications











