ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿರುವ ಬಗ್ಗೆ ತಪ್ಪೊಪ್ಪಿಕೊಂಡ್ರಾ ಆರೋಪಿ ದರ್ಶನ್?
ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ನಟ ದರ್ಶನ್ & ಗ್ಯಾಂಗ್ ವಿರುದ್ಧದ ಈ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಶಾಕಿಂಗ್ ಸಂಗತಿಗಳು ಬಯಲಾಗಿದೆ. ನಟ ದರ್ಶನ್ ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿರುವ ಬಗ್ಗೆಯೂ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
3,991 ಪುಟಗಳ ಚಾರ್ಜ್ಶೀಟ್ ಅನ್ನು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ. ಪವಿತ್ರಾ ಗೌಡಗೆ ಇನ್ಸ್ಟಾಗ್ರಾಮ್ನಲ್ಲಿ ರೇಣುಕಾಸ್ವಾಮಿ ಕಳುಹಿಸುತ್ತಿದ್ದ ಮೆಸೇಜ್ಗಳಿಂದ ಹಿಡಿದು ಆತನನ್ನು ಕೊಂದು ಶವ ಬಿಸಾಕಿದ ಘಟನೆವರೆಗೆ ಏನೆಲ್ಲಾ ನಡೆಯಿತು ಎನ್ನುವುದನ್ನು ಚಾರ್ಜ್ಶೀಟ್ನಲ್ಲಿ ವಿವರಿಸಲಾಗಿದೆ. ಪೊಲೀಸರ ತನಿಖೆ ವಿವರ, ಸಂಗ್ರಹಿಸಿದ ಸಾಕ್ಷ್ಯಾಧಾರಗಳು, ಫೋಟೊ, ವೀಡಿಯೋ ವಿಚಾರಣೆ ವೇಳೆ ಆರೋಪಿಗಳು ನೀಡಿರುವ ಹೇಳಿಕೆಗಳನ್ನು ಕೂಡ ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿದೆ.

ವಿಚಾರಣೆ ಸಮಯದಲ್ಲಿ ಮೊದಲಿಗೆ ನಟ ದರ್ಶನ್ ನನಗೇನು ಗೊತ್ತಿಲ್ಲ, ಆ ದಿನ ನಾನು ಪಟ್ಟಣಗೆರೆ ಶೆಡ್ನಲ್ಲಿ ಇರಲೇ ಇಲ್ಲ ಎಂದು ಹೇಳಿದ್ದರು. ಆದರೆ ಇತರೆ ಆರೋಪಿಗಳು ದರ್ಶನ್ ಕೈವಾಡದ ಬಗ್ಗೆ ಮಾಹಿತಿ ನೀಡಿದ್ದರು. ಇನ್ನು ಸ್ಥಳದಲ್ಲಿ ದರ್ಶನ್ ಇದ್ದ ಬಗ್ಗೆ ಪೊಲೀಸರಿಗೆ ಸಾಕ್ಷ್ಯಾಧಾರ ಸಿಕ್ಕಿತ್ತು. ಕೊನೆಗೆ ದರ್ಶನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಸ್ವಇಚ್ಛಾ ತಪ್ಪೊಪ್ಪಿಗೆ ಹೇಳಿಕೆಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಮರ್ಮಾಂಗಕ್ಕೆ ಪೆಟ್ಟು ಬಿದ್ದು ಆತನ ಪ್ರಾಣ ಹೋಗಿದೆ ಎಂದು ಹೇಳಲಾಗುತ್ತಿದೆ. ವಿಚಾರಣೆ ವೇಳೆ ದರ್ಶನ್ ನಾನು ರೇಣುಕಾಸ್ವಾಮಿಗೆ ಕೈಯಿಂದ ಹೊಡೆದೆ, ನನ್ನ ಶೂ ಕಾಲನ್ನು ಆತನ ಎದೆ ಮೇಲೆ ಇಟ್ಟೆ. ಎಡಗಿವಿಯನ್ನು ಹೊಸಕಿದೆ. ಆದರೆ ಮರ್ಮಾಂಗಕ್ಕೆ ಒದ್ದಿರುವ ಬಗ್ಗೆ ಬಗ್ಗೆ ಹೇಳಿಲ್ಲ ಎಂದು ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ಪವನ್ ಈ ಬಗ್ಗೆ ಹೇಳಿರುವುದಾಗಿ ಚಾರ್ಜ್ಶೀಟ್ನಲ್ಲಿ ಮಾಹಿತಿ ಇದೆ. ಇದೇ ದರ್ಶನ್ಗೆ ಮುಳುವಾಗುತ್ತಾ? ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಪಟ್ಟಣಗೆರೆ ಶೆಡ್ಗೆ ಪವಿತ್ರಾ ಗೌಡಳನ್ನು ಕರೆದುಕೊಂಡು ಹೋಗಿದ್ದೆ. ಆಕೆಯನ್ನು ಕರೆದು ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆಯುವಂತೆ ಹೇಳಿದೆ. ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ರೇಣುಕಾಸ್ವಾಮಿಗೆ ತಾಕೀತು ಮಾಡಿದೆ. ಆತ ಪವಿತ್ರಾಳ ಕಾಲಿಗೆ ಬಿದ್ದ. ಬಳಿಕ ಪವಿತ್ರಾಳನ್ನು ಮನೆಗೆ ಡ್ರಾಪ್ ಮಾಡಿಸಲು ವಿನಯ್ ಹೇಳಿದ್ದೆ. ಅಷ್ಟರಲ್ಲಿ ಕಾರ್ ಡ್ರೈವರ್ ಲಕ್ಷ್ಮಣ್ ಬಂದ"

ಲಕ್ಷ್ಮಣ್ ಕೂಡ ಕೂಡ ರೇಣುಕಾಸ್ವಾಮಿ ಕತ್ತು, ಬೆನ್ನಿಗೆ ಹೊಡೆದಿದ್ದ. ಬಳಿಕ ರೇಣುಕಾಸ್ವಾಮಿಯನ್ನು ನಂದೀಶ್ ಜೋರಾಗಿ ಎತ್ತಿ ಕುಕ್ಕಿದ. ರೇಣುಕಾಸ್ವಾಮಿ ಮೊಬೈಲ್ ತೆಗೆದು ಪವನ್ ಆತ ಯಾರಿಗೆಲ್ಲಾ ಕೆಟ್ಟ ಮೆಸೇಜ್ ಕಳುಹಿಸಿದ್ದ ಎನ್ನುವನ್ನು ಓದಿದ್ದ. ಕೆಲ ನಟಿಯರಿಗೂ ಕೆಟ್ಟದಾಗಿ ಇನ್ಸ್ಟಾಗ್ರಾಮ್ನಲ್ಲಿ ಮೆಸೇಜ್ ಮಾಡಿದ್ದನ್ನು ಪವನ್ ತೋರಿಸಿದ. ಬಳಿಕ ನಾನು ಒಂದೆರಡು ಒದ್ದೆ. ಬಳಿಕ ನಾನು ಹಾಗೂ ವಿನಯ್ ನಮ್ಮ ಮನೆಗೆ ಹೋದೆವು ಎಂದು ದರ್ಶನ್ ಒಪ್ಪಿಕೊಂಡಿರುವುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗ್ತಿದೆ.
ಸಂಜೆ 7.30ರ ಸುಮಾರಿಗೆ ಪ್ರದೋಶ್ ಬಂದು ರೇಣುಕಾಸ್ವಾಮಿ ಸತ್ತಿರುವ ವಿಚಾರ ತಿಳಿಸಿದ. ನಾನು ನೋಡಲು ಹೋದೆ. ಲಕ್ಷ್ಮಣ್ -ನಾಗರಾಜ್ ಸಹ ಇದನ್ನು ಖಚಿತಪಡಿಸಿದ್ದರು. ಪ್ರದೋಶ್ ಇದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ. ಅವನು ಕೇಳಿದ 30 ಲಕ್ಷ ರೂ. ಕೊಟ್ಟಿದ್ದೆ ಎಂದು ದರ್ಶನ್ ವಿಚಾರಣೆ ವೇಳೆ ಘಟನೆ ಬಗ್ಗೆ ವಿವರಿಸಿರುವುದಾಗಿ ಹೇಳಲಾಗುತ್ತಿದೆ.
ಇಂದಿಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 17 ಜನ ಆರೋಪಿಗಳ ನ್ಯಾಯಾಂಗ ಬಂಧನ ಮುಕ್ತಾಯವಾಗಿತ್ತು. ಮತ್ತೆ ಕೋರ್ಟ್ ಎದುರು ಆರೋಪಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ಮತ್ತೆ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 12ರವರೆಗೆ ವಿಸ್ತರಿಸಲಾಗಿದೆ. ನಟ ದರ್ಶನ್ ಪರ ವಕೀಲರು ಜಾಮೀನು ಪಡೆಯಲು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಾರೆ ಎನ್ನಲಾಗ್ತಿದೆ.
ಸದ್ಯ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಯಾವುದೇ ವಿಶೇಷ ಸೌಲಭ್ಯ ಇಲ್ಲದೇ ಸಾಮಾನ್ಯ ವಿಚಾರಣಧೀನ ಕೈದಿಯಾಗಿ ಅಲ್ಲಿದ್ದಾರೆ. ದರ್ಶನ್ ಮನವಿ ಮಾಡಿದ್ದ ಸರ್ಜಿಕಲ್ ಚೇರ್ ಹಾಗೂ ಟಿವಿ ವ್ಯವಸ್ಥೆಯನ್ನು ಜೈಲು ಸಿಬ್ಬಂದಿ ಮಾಡಿದ್ದಾರೆ.


Click it and Unblock the Notifications











