ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜರೀನ್ ಖಾನ್ಗೆ ಬಂಧನದ ಭೀತಿ; ಆಘಾತ ವ್ಯಕ್ತಪಡಿಸಿದ ನಟಿ!
ಬಾಲಿವುಡ್ ನಟಿ ಜರೀನ್ ಖಾನ್ ವಿರುದ್ಧ ಕೋಲ್ಕತ್ತಾ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದು, ನಟಿ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತಾ ನ್ಯಾಯಾಲಯವು 2018 ರ ಹಿಂದಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜರೀನ್ ಖಾನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.
ವರದಿಗಳ ಪ್ರಕಾರ, ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಆಯೋಜಕರು ಪಶ್ಚಿಮ ಬಂಗಾಳದ ಉತ್ತರ ಕೋಲ್ಕತ್ತಾದ ನರ್ಕೆಲ್ದಂಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖಾಧಿಕಾರಿ ಚಾರ್ಜ್ ಶೀಟ್ ಸಲ್ಲಿಸಿದ ನಂತರ ಸೀಲ್ದಾ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಪದೇ ಪದೇ ಸಮನ್ಸ್ ನೀಡಿದರೂ ಜರೀನ್ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಇದಲ್ಲದೆ ಜಾಮೀನು ಅರ್ಜಿಯನ್ನು ಸಲ್ಲಿಸಿರಲಿಲ್ಲ ಎಂಬುದು ವಾರೆಂಟ್ ಹೊರಡಿಸಲು ಕಾರಣವಾಗಿದೆ.

ಇದು ನನಗೂ ಆಶ್ಚರ್ಯ!
ಬಂಧನ ವಾರೆಂಟ್ ಕುರಿತು ಪ್ರಶ್ನಿಸಿದಾಗ, ಜರೀನ್ ಖಾನ್ ಆಘಾತ ವ್ಯಕ್ತಪಡಿಸಿದ್ದಾರೆ. "ಇದರಲ್ಲಿ ಯಾವುದೇ ಸತ್ಯವಿಲ್ಲ ಎಂದು ನನಗೆ ಖಾತ್ರಿಯಿದೆ. ಇದರಿಂದ ನನಗೂ ಆಶ್ಚರ್ಯವಾಗಿದೆ. ನಾನು ಕೂಡ ನನ್ನ ವಕೀಲರೊಂದಿಗೆ ಪರಿಶೀಲಿಸುತ್ತಿದ್ದೇನೆ. ಇದಾದ ಮೇಲೆ ಮಾತ್ರ ನಾನು ನಿಮಗೆ ಸ್ಪಷ್ಟತೆ ನೀಡಲು ಸಾಧ್ಯವಾಗುತ್ತದೆ. ಇನ್ನೂ ಮಾಹಿತಿ ಬೇಕಿದ್ದರೇ ನನ್ನ ಪಿಆರ್ ಜೊತೆ ಮಾತನಾಡಬಹುದು" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
2018ರಲ್ಲಿ ಕೋಲ್ಕತ್ತಾದಲ್ಲಿ ನಡೆದ ದುರ್ಗಾಪೂಜೆ ಕಾರ್ಯಕ್ರಮದಲ್ಲಿ ಜರೀನ್ ಖಾನ್ ಪ್ರದರ್ಶನ ನೀಡಬೇಕಾಗಿತ್ತು. ಅದು ನಡೆದಿರಲಿಲ್ಲ. ಇದಾದ ನಂತರ ಈ ವಿವಾದ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ಜರೀನ್ ಖಾನ್ ಹಾಜರಾಗಿರಲಿಲ್ಲ. ಅವರ ನೃತ್ಯ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು. ಇದು ಸಂಘಟಕರು ಮತ್ತು ಕಾರ್ಯಕ್ರಮ ವೀಕ್ಷಿಸಲು ಬಂದಿದ್ದವರಿಗೆ ಭಾರೀ ನಿರಾಸೆ ಮೂಡಿಸಿತ್ತು.

ಆಯೋಜಕರು ತನ್ನನ್ನು ದಾರಿ ತಪ್ಪಿಸಿದ್ದಾರೆ!
ಪೊಲೀಸರ ಪ್ರಕಾರ, ಈವೆಂಟ್ ಆಯೋಜಕರೊಬ್ಬರು ಜರೀನ್ ಖಾನ್ ಮತ್ತು ಅವರ ಮ್ಯಾನೇಜರ್ ವಿರುದ್ಧ ವಂಚನೆಯ ಲಿಖಿತ ದೂರು ದಾಖಲಿಸಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಂತರ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು. ಆ ಸಮಯದಲ್ಲಿ, ಜರೀನ್ ಖಾನ್ ವಿಚಾರಣೆಗೆ ಹಾಜರಾಗಿದ್ದರು. ಕಾರ್ಯಕ್ರಮದ ಆಯೋಜಕರು ತನ್ನನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದರು.
ಕಾರ್ಯಕ್ರಮದ ಬಗ್ಗೆ ನನಗೆ ತಪ್ಪಾಗಿ ಮಾಹಿತಿ ನೀಡಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ರಾಜಕಾರಣಿಗಳು ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದರು. ಆದರೆ ಅದು ಉತ್ತರ ಕೋಲ್ಕತ್ತಾದಲ್ಲಿ ನಡೆದ ಸಣ್ಣ ಪ್ರಮಾಣದ ಕಾರ್ಯಕ್ರಮ. ನಾನು ಹೋಗದ ಕಾರಣ ಅವರು ವಿಮಾನ ಟಿಕೆಟ್ ಮತ್ತು ವಸತಿ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು.
ಬಳಿಕ ಜರೀನ್ ಖಾನ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆಯ ನಂತರ, ಆಕೆಯ ಮತ್ತು ಆಕೆಯ ಮ್ಯಾನೇಜರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಯಿತು. ಆಕೆಯ ಮ್ಯಾನೇಜರ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ, ಜರೀನ್ ಖಾನ್ ಜಾಮೀನು ಅರ್ಜಿ ಸಲ್ಲಿಸಲಿಲ್ಲ, ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿಲ್ಲ ಹೀಗಾಗಿ ಬಂಧನದ ವಾರೆಂಟ್ ಹೊರಡಿಸಲಾಗಿದೆ.


Click it and Unblock the Notifications











