ಬೆಂಗಳೂರಲ್ಲಿ 'ಐ' ಅಚ್ಚರಿ ಸಂಗತಿಗಳನ್ನು ಬಿಚ್ಚಿಟ್ಟ ವಿಕ್ರಮ್
ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿರುವ ಚಿತ್ರ ಶಂಕರ್ ನಿರ್ದೇಶನದ 'ಐ'. ಈ ಚಿತ್ರ ಇದೇ ಸಂಕ್ರಾಂತಿ ಹಬ್ಬಕ್ಕೆ ಜನವರಿ 14ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಶಂಕರ್ ನಿರ್ದೇಶನ, ಎ.ಆರ್. ರೆಹಮಾನ್ ಅವರ ಸಂಗೀತ, ಚಿಯಾನ್ ವಿಕ್ರಮ್ ಅವರ ನಟನೆ ಚಿತ್ರದ ಪ್ರಮುಖ ಆಕರ್ಷಣೆಗಳು.
ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ತೆರೆಕಾಣುತ್ತಿದೆ. ಈ ಚಿತ್ರವನ್ನು ಬೆಂಗಳೂರು, ಮೈಸೂರಿನಲ್ಲೂ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ. ವಿಕ್ರಮ್ ಅವರ ತೋಳದಂತಹ ಮನುಷ್ಯನ ಗೆಟಪ್, ಮೈನವಿರೇಳಿಸುವ ಸ್ಟಂಟ್ ಗಳು ಚಿತ್ರವನ್ನು ನಿರೀಕ್ಷಿಸುವಂತೆ ಮಾಡಿವೆ. [ಶಂಕರ್ 'ಐ' ಚಿತ್ರದ ಟೀಸರ್ ಸೂಪರ್ ಡೂಪರ್ ಹಿಟ್]
ಈ ಚಿತ್ರದ ಬಗೆಗಿನ ಕ್ರೇಜ್ ಯಾವ ರೀತಿ ಇದೆ ಎಂದರೆ, ಯೂಟ್ಯೂಬ್ ನಲ್ಲಿ ಹಾಕಿರುವ ಚಿತ್ರದ ಟ್ರೇಲರ್ ಈಗಾಗಲೆ 61 ಲಕ್ಷಕ್ಕೂ ಅಧಿಕ ಸಲ ವೀಕ್ಷಿಸಲಾಗಿದೆ. ಆಸ್ಕರ್ ಫಿಲಂಸ್ ಪ್ರೈ.ಲಿ. ಲಾಂಛನದಲ್ಲಿ ವಿ ರವಿಚಂದ್ರನ್ ಅವರು ನಿರ್ಮಿಸಿರುವ ಭಾರಿ ಬಜೆಟ್ ಚಿತ್ರ ಇದಾಗಿದೆ.

ಸದ್ಯಕ್ಕೆ ಚಿತ್ರದ ಬಜೆಟ್ ಇಷ್ಟೇ ಎಂದು ಯಾರೂ ನಿಖರವಾಗಿ ಹೇಳದಿದ್ದರೂ ನೂರಾ ಎಪ್ಪತ್ತು ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರವಿದು ಎನ್ನುತ್ತವೆ ಮೂಲಗಳು. ಅಷ್ಟೆಲ್ಲಾ ಇಲ್ಲ ನೂರು ಕೋಟಿ ಅಷ್ಟೇ ಆಗಿದೆ ಎಂಬುವವರೂ ಇದ್ದಾರೆ. ಈ ಬಗ್ಗೆ ಏಕಾಭಿಪ್ರಾಯವಿಲ್ಲದಿದ್ದರೂ ಇದೊಂದು ರಾಯಲ್ ಬಜೆಟ್ ಸಿನಿಮಾ ಎಂಬುದರಲ್ಲಿ ಅನುಮಾನವೇ ಇಲ್ಲ.
ಬೆಂಗಳೂರು ಕೋರಮಂಗಲದ ಫೋರಂ ಮಾಲ್ ನ ಪಿವಿಆರ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಖಾಮುಖಿಯಾದ ಚಿತ್ರದ ನಾಯಕ ನಟ ವಿಕ್ರಮ್ ಅವರು ಮೊದಲು ಮಾತು ಆರಂಭಿಸಿದ್ದೇ ಬೆಂಗಳೂರಿನಲ್ಲಿ ಸ್ವಲ್ಪ ಗರಂ ಆಗಿರುವ ವಾತಾವರಣದ ಬಗ್ಗೆ.
"ಅದ್ಯಾಕೋ ಏನೋ ಬೆಂಗಳೂರಿನ ವಾತಾರವಣ ಸ್ವಲ್ಪ ಹಾಟ್ ಆಗಿದೆ. ಅದೇನು ವಿಚಿತ್ರವೋ ಏನೋ ಮದ್ರಾಸ್ ಗೆ ಮಾತ್ರ ಬೆಂಗಳೂರಿನ ತಂಪು ಹವಾಮಾನ ರವಾನೆಯಾಗಿದೆ ಎಂದರು. ಆ ಬಳಿಕ ತಮ್ಮ 'ಐ' ಚಿತ್ರದ ಬಗೆಗಿನ ವಿವರಗಳನ್ನು, ಅನುಭವಗಳನ್ನು, ಅಚ್ಚರಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.

ಚಿತ್ರದ ನಿರ್ದೇಶಕ ಶಂಕರ್ ಅವರು ತಮ್ಮ ಚಿತ್ರಕ್ಕೆ ಏನು ಹೆಸರಿಡಬೇಕು ಎಂದು ಯೋಚಿಸುತ್ತಿರಬೇಕಾದರೆ ಅವರಿಗೆ 'ಐ' ಎಂಬ ಇಂಗ್ಲಿಷ್ ಅಕ್ಷರ ಬಹಳವಾಗಿ ಸೆಳೆಯಿತಂತೆ. ಹಾಗಾಗಿ ಅದನ್ನೇ ಆಯ್ಕೆ ಮಾಡಿಕೊಂಡರು. ಹಳೆ ತಮಿಳು ಭಾಷೆಯಲ್ಲಿ 'ಅಯ್' ಎಂದರೆ ಸುಂದರವಾದದ್ದು ಎಂಬ ಅರ್ಥವೂ ಇದೆಯಂತೆ. [ಕಾಯುವಿಕೆ ಆಯ್ತು ಸಾರ್ಥಕ, 'ಐ' ಟ್ರೇಲರ್ ಅದ್ಭುತ]
ಇಡೀ ಚಿತ್ರವನ್ನು ವೀಕ್ಷಿಸಿದಾಗ ಆ ಆಳವಾದ ಸೌಂದರ್ಯದ ಅರಿವು ನಿಮ್ಮ ಗಮನಕ್ಕೂ ಬಾರದೆ ಇರಲ್ಲ ಎಂದರು. ಈ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇನೆ. ವಿಚಿತ್ರ ಮೇಕಪ್ ನಿಂದಾಗಿ ಮುಖವೆಲ್ಲಾ ದದ್ದುಗಳಾಗಿ ಶೇಪೇ ಚೇಂಜ್ ಆಗಿತ್ತು. ಕಡೆಗೆ ಅಲರ್ಜಿ ಆಗಿ ಬಹಳ ಕಿರಿಕಿರಿ ಅನುಭವಿಸಿದ್ದೇನೆ ಎಂದರು. ಆದರೆ ತಮ್ಮ ಚಿತ್ರದ ಕಥೆ ವಿಚಾರಕ್ಕೆ ಬಂದಾಗ ಅವರ ಉತ್ತರ ಮಾತ್ರ ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ! ಆ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಡಲಿಲ್ಲ.
ಇಷ್ಟೆಲ್ಲಾ ದೊಡ್ಡ ಬಜೆಟ್ ಚಿತ್ರದಲ್ಲಿ ನಟಿಸಬೇಕಾದರೆ ಎಲ್ಲೋ ಒಂದು ಕಡೆ ನಿಮಗೆ ಟೆನ್ಷನ್ ಆಗಿರಲೇ ಬೇಕಲ್ಲವೇ ಎಂದು ಕೇಳಿದಾಗ, ಇಲ್ಲಾ ಟೆನ್ಷನ್ ಗಿಂತ ತಮಗೆ ಎಕ್ಸೈಟ್ ಮೆಂಟ್ ಹೆಚ್ಚಾಗಿತ್ತು. ತಮ್ಮ ಸಂಪೂರ್ಣ ಮನಸ್ಸು ಪಾತ್ರದ ಬಗೆಗೇ ಇತ್ತೇ ಹೊರತು, ಕಮರ್ಷಿಯಲ್ ಆಗಿ ನಾನು ಎಂದೂ ಯೋಚಿಸಲಿಲ್ಲ ಎಂದರು.

ವರ್ಷಕ್ಕೆ ಇಂತಿಷ್ಟು ಚಿತ್ರಗಳಲ್ಲಿ ನಟಿಸಬೇಕು ಎಂದುಕೊಂಡವನು ನಾನಲ್ಲ. ಕ್ವಾಂಟಿಟಿಗಿಂತಲೂ ಕ್ವಾಲಿಟಿಗೆ ಹೆಚ್ಚಿನ ಮಹತ್ವ ಕೊಡುವ ಜಾಯಮಾನ ತಮ್ಮದು. ಶಂಕರ್ ಅವರನ್ನು ಎಲ್ಲರೂ ಸ್ಟೀವನ್ ಸ್ಪೀಲ್ ಬರ್ಗ್ ಆಫ್ ಇಂಡಿಯಾ, ಜೇಮ್ಸ್ ಕ್ಯಾಮರೂನ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಆದರೆ ನಾನು ಅವರನ್ನು ಶಂಕರ್ ಆಫ್ ಇಂಡಿಯಾ ಎಂದು ಕರೆಯಲು ಬಯಸುತ್ತೇನೆ ಎಂದರು.
ಇಂದಿನ ಭಾರತೀಯ ಚಿತ್ರಗಳ ಇತಿಮಿತಿಗಳ ಆಚೆಗೆ ಯೋಚಿಸುವಂತಹ ನಿರ್ದೇಶಕ ಶಂಕರ್. ಕಾದಲನ್, ಇಂಡಿಯನ್, ಅನ್ಯನ್, ರೋಬೋಟ್ ಚಿತ್ರಗಳೇ ಇದಕ್ಕೆ ಸಾಕ್ಷಿ. ಯಾರಾದರೂ ನಿರ್ಮಾಪಕ ಹೆಚ್ಚಿಗೆ ಬಂಡವಾಳ ಹಾಕುತ್ತೇನೆ ಎಂದರೆ ಮತ್ತೊಬ್ಬ ನಿರ್ದೇಶಕರಾಗಿದ್ದರೆ ಇನ್ನೊಂದು ಐವತ್ತು ಆನೆಗಳನ್ನೂ, ಇನ್ನೊಂದು ಹತ್ತು ಹೆಲಿಕಾಪ್ಟರ್ ಗಳನ್ನೋ ಹಾಕೋಣ ಎನ್ನುತ್ತಿದ್ದರು. ಆದರೆ ಶಂಕರ್ ಆ ರೀತಿ ಅಲ್ಲ. ಹೊಸ ತಂತ್ರಜ್ಞಾನ, ಹೊಸತನ ಏನಾದರೂ ತರಬಹುದೇ ಎಂದು ಯೋಚಿಸುತ್ತಾರೆ.

ಈ ಚಿತ್ರದ ಶೂಟಿಂಗ್ ಗಾಗಿ ಬೆಳಗಿನ ಜಾವ 3ಕ್ಕೆ ಏಳುತ್ತಿದ್ದೆ. ಸ್ವಲ್ಪ ಜಿಮ್ಮು, ಸೈಕ್ಲಿಂಗ್, ವ್ಯಾಯಾಮ ಇವೆಲ್ಲಾ ಮಾಡಿ ನನ್ನ ದೇಹದ ತೂಕ ಇಳಿಸಿಕೊಳ್ಳುವ, ಹೆಚ್ಚಿಸಿಕೊಳ್ಳುವ ಕಸರತ್ತು ಮಾಡಿಕೊಳ್ಳಬೇಕಾಗಿತ್ತು. ಇನ್ನೊಂದು ವಿಶೇಷ ಎಂದರೆ 'ಐ' ಚಿತ್ರ ಸಂದೇಶಾತ್ಮಕ ಚಿತ್ರವಲ್ಲ. ಇದೊಂದು ಪಕ್ಕಾ ಮನರಂಜನಾತ್ಮಕ ಸರಕು. ಇದನ್ನು ವಿಭಿನ್ನವಾಗಿ ನೀಡಿದ್ದಾರೆ ಶಂಕರ್ ಎಂಬ ವಿವರವನ್ನೂ ನೀಡಿದರು.
ಲಡಾಕ್ ನಂತಹ ದುರ್ಗಮ ತಾಣಗಳಲ್ಲಿ ಚಿತ್ರೀಕರಿಸಿದ್ದೇವೆ. ವಿಜಯ ಮಲ್ಯ ಅವರ ಬೆಂಗಳೂರಿನ ಫಾರ್ಮ್ ಹೌಸ್ ನಲ್ಲೂ 'ಐ' ಚಿತ್ರವನ್ನು ಚಿತ್ರೀಕರಿಸಿದ್ದೇವೆ. ಎರಡು ಶೇಡ್ ಗಳುಳ್ಳ ಪಾತ್ರ ತಮ್ಮದು. ಅದನ್ನು ಇಲ್ಲಿ ಹೇಳಿದರೆ ಚಿತ್ರದ ಬಗೆಗಿನ ಕುತೂಹಲ ಹಾಳಾಗುತ್ತದೆ ಎಂದರು.
ದಿನವೊಂದಕ್ಕೆ 300 ಗ್ರಾಂ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದೆ. ತೂಕ ಹೆಚ್ಚಿಸಿಕೊಳ್ಳಲು ಯಾವುದೇ ಸ್ಟೀರಾಯ್ಡ್ ಗಳನ್ನು ಬಳಸಿಲ್ಲ. ನಾನು ಆ ರೀತಿಯ ಅಡ್ಡದಾರಿಗಳನ್ನು ಪ್ರೋತ್ಸಾಹಿಸುವುದೂ ಇಲ್ಲ ಎಂದರು. ಭಾಷೆ ಯಾವುದೇ ಆಗಲಿ ತಮಗೆ ಸಮಸ್ಯೆಯಿಲ್ಲ. ಕನ್ನಡದಲ್ಲೂ ಒಳ್ಳೆಯ ಕಥೆ ಸಿಕ್ಕಿದರೆ ಖಂಡಿತ ಅಭಿನಯಿಸುತ್ತೇನೆ. ನಾನೇ ಡಬ್ಬಿಂಗ್ ಸಹ ಹೇಳುತ್ತೇನೆ ಎಂದರು. (ಫಿಲ್ಮೀಬೀಟ್ ಕನ್ನಡ)


Click it and Unblock the Notifications