ಇದೇ ವಾರ ಬಿಡುಗಡೆ ಆಗಲಿದೆ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ
ಡಾ.ಮಂಜುನಾಥ್.ಡಿ.ಎಸ್ ನಿರ್ಮಿಸಿರುವ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕುಟುಂಬದಲ್ಲಿ ನಡೆಯುವ ಕೆಲ ಸಂಗತಿಗಳನ್ನು ಸಿನಿಮಾದಲ್ಲಿ ಹಾಸ್ಯ ರೂಪದಲ್ಲಿ ಹೇಳಲಾಗಿದೆ.
'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರಕ್ಕೆ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ಶಿವಸೀನ ಛಾಯಾಗ್ರಹಣ, ಅರವ್ ರಿಶಿಕ್ ಸಂಗೀತ, ಸಂಜಯ್ ಕುಮಾರ್ ಹಿನ್ನೆಲೆ ಸಂಗೀತ, ಲಕ್ಷ್ಮಿ ವಿನಯ್ ನೃತ್ಯ ನಿರ್ದೇಶನವಿದೆ.
ತಬಲನಾಣಿ, ಕಿರಿಕ್ ಪಾರ್ಟಿ ಚಂದನ್ ಆಚಾರ್, ಸಂಜನ, ಆನಂದ್, ಸುಚೇಂದ್ರ ಪ್ರಸಾದ್, ಅಪೂರ್ವ, ಡಾ.ಮಂಜುನಾಥ್.ಡಿ.ಎಸ್, ಮೈಕೋ ನಾಗಾರಾಜ್, ರಾಕ್ ಲೈನ್ ಸುಧಾಕರ್, ಹನುಮಂತೇಗೌಡ, ಪ್ರಣಯಮೂರ್ತಿ, ಶ್ರೀನಿವಾಸ ಮೂರ್ತಿ ಮುಂತಾದವರ ತಾರಾಬಳಗವಿದೆ. ಮುಂದೆ ಓದಿರಿ...

ನೈಜ ಕಥೆ
ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ನಿರ್ಮಾಣವಾದ ಚಿತ್ರ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಈ ಶುಕ್ರವಾರ ಬಿಡುಗಡೆಯಾಗಲಿದೆ. ಪತಿ, ಪತ್ನಿ, ಮಗ, ಸೊಸೆ ಈ ನಾಲ್ಕು ಜನರ ಮಧ್ಯೆ ನಡೆಯುವ ಕಥೆಯೇ ಈ ಚಿತ್ರ. ತಬಲ ನಾಣಿ ಆ ಕುಟುಂಬದ ಯಜಮಾನ. ಆತನ ಪತ್ನಿಯಾಗಿ ಅಪೂರ್ವ ಅಭಿನಯಿಸಿದ್ದಾರೆ. ಚಂದನ್ ಆಚಾರ್ ಮಗನಾಗಿಯೂ, ಸಂಜನಾ ಸೂಸೆಯಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಸಂಯುಕ್ತ-2' ಚಿತ್ರಕ್ಕೆ ಬಂಡವಾಳ ಹಾಕಿದ್ದ ಮಂಜುನಾಥ್ ಎರಡನೇ ಪ್ರಯತ್ನವಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿಂಪಲ್ ಸುನಿ ಜೊತೆ ಕೆಲಸ ಮಾಡಿದ ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರವಿದು.

ತಬಲ ನಾಣಿ ಏನಂತಾರೆ.?
''ಕಷ್ಟವನ್ನು ನಗುನಗುತ್ತಲೇ ಸ್ವೀಕರಿಸುವ ಒಂದು ಸುಂದರ ಕುಟುಂಬ. ಅದರಲ್ಲಿ ನಾನು ನನ್ನ ಹೆಂಡತಿ, ಮಗ, ಸೊಸೆ.... ಹೀಗೆ ನಾಲ್ಕು ಜನರ ನಡುವಿನ ಸಮಸ್ಯೆಗೆ ಪರಿಹಾರ ಈ ಚಿತ್ರದಲ್ಲಿದೆ. ಇಲ್ಲಿ ಮಾತೇ ಬಂಡವಾಳ. ಅಪೂರ್ವ ರವರು ನನ್ನ ಹೆಂಡತಿ ಪಾತ್ರ ಮಾಡಿದ್ದಾರೆ. ನಾವೆಲ್ಲ ರಂಗಭೂಮಿಯಿಂದ ಬಂದವರಾದ್ದರಿಂದ ಎಲ್ಲೂ ಕಷ್ಟ ಎನಿಸಲಿಲ್ಲ. ನಿರ್ದೇಶಕ ಕುಮಾರ್ ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ'' ಎನ್ನುತ್ತಾರೆ ನಟ ತಬಲಾ ನಾಣಿ.

ಚಂದನ್ ಆಚಾರ್ ಹೇಳಿದ್ದೇನು.?
''ಕಿರಿಕ್ ಪಾರ್ಟಿಯಲ್ಲಿ ಚಿಕ್ಕ ಪಾತ್ರ ಮಾಡಿದ್ದೆ. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ನಾನು ಹೀರೋ. ಮನರಂಜನೆ ಮೂಲವಾಗಿಟ್ಟುಕೊಂಡು ಮಾಡಿರುವ ಚಿತ್ರವಿದು. ನಾಯಕಿ ಸಂಜನಾ ಒಬ್ಬ ಹಳ್ಳಿ ಹುಡುಗಿ ಮದುವೆಯಾದ ನಂತರ ಗಂಡನ ಮೇಲೆ ಅನುಮಾನ ಪಡುವವಳು. ಕೊನೆಗೆ ಅದನ್ನು ಮಾವನೇ ಸರಿಪಡಿಸಬೇಕಾಗುತ್ತದೆ. ಹುಡುಗಿಯರು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಸ್ಪಲ್ಪ ಯೋಚಿಸಿ ಮುಂದುವರೆಯಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆ'' ಅಂತಾರೆ ಚಂದನ್ ಆಚಾರ್ಯ.

ನಿರ್ದೇಶಕ ಕುಮಾರ್ ಹೇಳಿದಿಷ್ಟು.!
''ಒಂದು ನೈಜ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕೆಂದು ಹೊರಟಾಗ ಈ ಕಥೆ ಸಿಕ್ಕಿತು. ತಂದೆ ಮಗನ ನಡುವಿನ ಬಾಂಧವ್ಯದ ಕಥೆಯನ್ನಿಟ್ಟುಕೊಂಡು ಈ ಸ್ಕ್ರಿಪ್ಟ್ ಮಾಡಿದ್ದೇನೆ. ಈಗಾಗಲೇ ಕೆಲವರಿಗೆ ಸಿನಿಮಾ ತೋರಿಸಿದೆ. ಎಲ್ಲರಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬಂತು. ಒಂದು ಕುಟುಂಬದ ಮೇಲೆ ಸಿನಿಮಾ ಮಾಡಿದ್ದೇವೆ. ಸಂಸಾರದಲ್ಲಿ ಒಂದು ಸಮಸ್ಯೆ ಬರುತ್ತದೆ. ಹಾಗೇ ಅದಕ್ಕೆ ಪರಿಹಾರವು ಸಿಗುತ್ತದೆ. ಇಡೀ ಸಿನಿಮಾವನ್ನು ಸಿಂಕ್ ಸೌಂಡ್ನಲ್ಲಿ ಮಾಡಿದ್ದೇವೆ. ಒಬ್ಬ ವ್ಯಕ್ಕಿ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾಡಲು ಮುಂದಾಗುತ್ತಾನೆ ಎಂದು ಚಿತ್ರದಲ್ಲಿ ಹೇಳಿದ್ದೇನೆ'' ಎಂದರು ನಿರ್ದೇಶಕ ಕುಮಾರ್.


Click it and Unblock the Notifications











