ವರನಟನಿಗೆ ವರ್ಷಪೂರ್ತಿ ಪೂಜಿಸುವ ಅಪ್ಪಟ ಅಭಿಮಾನಿ ಚನ್ನಪಟ್ಟಣದ ನಾಗೇಶ್
ತನ್ನ ನಟನೆಯ ಮೂಲಕ ಸಾವಿರಾರು ನೊಂದ ಅಭಿಮಾನಿಗಳ ಬಾಳಲ್ಲಿ ಬದಲಾವಣೆ ತಂದ ಅಭಿಮಾನಿಗಳ ಆರಾಧ್ಯ ದೈವ, ವರನಟ ಡಾ.ರಾಜ್ ಕುಮಾರ್ ಅವರ 94 ನೇ ಜನ್ಮದಿನಾಚರಣೆಯನ್ನು ಕರುನಾಡಿನ ಅಸಂಖ್ಯಾತ ಅಭಿಮಾನಿಗಳು ಹಲವು ಸಾರ್ಥಕ ಕಾರ್ಯಗಳ ಮೂಲಕ ಆಚರಣೆ ಮಾಡುತ್ತಿದ್ದಾರೆ.
ಡಾ.ರಾಜ್ ನಟಿಸಿದ 'ಬಂಗಾರದ ಮನುಷ್ಯ' ಸಿನಿಮಾ ನೋಡಿ ಹಲವು ಅಭಿಮಾನಿಗಳು ಪಟ್ಟಣದ ಜೀವನ ತೊರೆದು ಹಳ್ಳಿಗಳಿಗೆ ತೆರಳಿ ಮತ್ತೆ ಕೃಷಿಕರಾಗಿದ್ದು, ಮತ್ತಷ್ಟು ಅಭಿಮಾನಿಗಳು ಡಾ.ರಾಜ್ ಅದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸು ಕಂಡಿರುವ ಹಲವು ಉದಾಹರಣೆಗಳು ರಾಜ್ಯದಲ್ಲಿವೆ.
ವರ್ಷದಲ್ಲಿ ಒಂದು ದಿನ ವರನಟನ ಹುಟ್ಟುಹಬ್ಬದ ನನಪಿನಲ್ಲಿ ವಿವಿದ ಸಾಮಾಜಿಕ ಕಾರ್ಯಗಳನ್ನು ಮಾಡುವ ಅಸಂಖ್ಯಾತ ಅಭಿಮಾನಿಗಳ ನಡುವೆ ತನ್ನ ಮನೆಯ ದೇವರ ಕೋಣೆಯಲ್ಲಿ ಆರಾಧ್ಯದೈವ ಡಾ.ರಾಜ್ ಕುಮಾರ್ ಭಾವಚಿತ್ರವಿಟ್ಟು ವರ್ಷಪೂರ್ತಿ ಪೂಜೆ ಸಲ್ಲಿಸುವ ನಾಗೇಶ್ ಅಪರೂಪದ ಅಭಿಮಾನಿಯಾಗಿ ಕಾಣುತ್ತಾರೆ.

ತಗೆಚಗೆರೆ ಗ್ರಾಮದ ನಿವಾಸಿ ನಾಗೇಶ್
ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತಗೆಚಗೆರೆ ಗ್ರಾಮದ ನಿವಾಸಿ ನಾಗೇಶ್, ವರ ನಟ ಡಾ.ರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿ. ಈತನ ದಿನ ಪ್ರಾರಂಭವಾಗುವುದೇ ಅಭಿಮಾನಿ ದೇವರು ಡಾ. ರಾಜ್ ಕುಮಾರ್ ರವರ ಭಾವಚಿತ್ರವಕ್ಕೆ ಪೂಜೆ ಮಾಡುವುದರಿಂದ. ಕನ್ನಡ ಚಿತ್ರರಂಗದ ಮೇರುಪರ್ವತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜ್ಕುಮಾರ್ ಸಾವನ್ನಪ್ಪಿದ ದಿನದಿಂದ ಇಲ್ಲಿನ ತನಕ ತನ್ನ ಮನೆಯ ದೇವರ ಕೋಣೆಯಲ್ಲಿ ಅವರ ಭಾವಚಿತ್ರವನ್ನಿಟ್ಟು ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ವರ್ಷಗಳಿಂದಲೂ ಈ ಆಚರಣೆ ಜಾರಿಯಲ್ಲಿದೆ. ಮನೆಯಲ್ಲಿ ಪ್ರತಿನಿತ್ಯ ವರನಟನನ್ನು ಪೂಜಿಸುವ ಜೊತೆಗೆ ಡಾ. ರಾಜ್ ಹುಟ್ಟುಹಬ್ಬದ ದಿನದಂದು ಆಸ್ಪತ್ರೆಗೆ ತೆರಳಿ ಹಣ್ಣು ಹಂಪಲುಗಳನ್ನು ರೋಗಿಗಳಿಗೆ ವಿತರಣೆ ಮಾಡುತ್ತಾರೆ. ತನ್ನೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬೆಂಗಳೂರಿಗೆ ತೆರಳಿ ಡಾ.ರಾಜ್ ಕುಮಾರ್ ಸಮಾಧಿ ದರ್ಶನಮಾಡಿ ಪೂಜೆ ಸಲ್ಲಿಸುವುದನ್ನು ತಪ್ಪಿಸುವುದಿಲ್ಲ.

ಸಿಡಿ ಸಂಗ್ರಹ, ಲೇಖನ ಸಂಗ್ರಹ ಇದೆ
ಡಾ.ರಾಜ್ ಕುಮಾರ್ ಅಭಿಮಾನಿಯಾಗಿರೋ ನಾಗೇಶ್ ತನ್ನ ಮನೆಯಲ್ಲಿ ರಾಜ್ ಕುಮಾರ್ ಅವರ ನೂರಕ್ಕೂ ಹೆಚ್ಚು ಅಭಿನಯದ ಸಿನಿಮಾಗಳ ಸಿಡಿಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅಲ್ಲದೆ ರಾಜ್ ಕುಮಾರ್ ಭಾವಚಿತ್ರ ಮತ್ತು ಅವರ ಕುರಿತು ಪತ್ರಿಕೆಗಳಲ್ಲಿ ಸುದ್ದಿ, ಲೇಖನಗಳು ಪ್ರಕಟವಾದರೆ ಅವುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ನಾಗೇಶ್ ರೂಢಿಸಿಕೊಂಡಿದ್ದಾರೆ. ''ನಾನು ಚಿಕ್ಕಂದಿನಿಂದಲೇ ರಾಜ್ ಕುಮಾರ್ ಅಭಿಮಾನಿಯಾಗಿದ್ದು ಅವರನ್ನು ದೇವರು ಅಂತಲೇ ನಾನು ನಂಬಿದ್ದೇನೆ, ಹಾಗಾಗಿ ಪ್ರತಿ ದಿನ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತೇನೆ. ಹಾಗೂ ಅವರ ಬದುಕಿಗೆ ಸಂಬಂದಿಸಿದ ಎಲ್ಲಾ ಸಿಡಿ, ಬರಹ, ಲೇಖನಗಳನ್ನು ಸಂಗ್ರಹ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎನ್ನುತ್ತಾರೆ ನಾಗೇಶ್.

ಮಗನಿಗೆ ತಾಯಿ ಜಯಮ್ಮ ಬೆಂಬಲ
ಡಾ.ರಾಜ್ ಕುಮಾರ್ ಅಭಿಮಾನಿಯಾದ ನಾಗೇಶ್ 13 ವರ್ಷದವನಿರುವಾಗಲೇ ಚನ್ನಪಟ್ಟಣದ ಶಿವಾನಂದ ಟಾಕೀಸ್ ನಲ್ಲಿ ತಮ್ಮ ಪೋಷಕರ ಜೊತೆ ಸಿನಿಮಾ ನೋಡಿ ಅಂದಿನಿಂದ ಇಂದಿನವರೆಗೆ ಯಾವುದೇ ನಟರನ್ನೂ ಇಷ್ಟ ಪಟ್ಟಿಲ್ಲ ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ನಾಗೇಶ್ ತಾಯಿ ಜಯಮ್ಮ ಕೂಡಾ ಡಾ.ರಾಜ್ ಕುಮಾರ್ ಅಭಿಮಾನಿಯಾಗಿದ್ದಾರೆ. ಮನೆಯ ಒಳಗೆ ರಾಜ್ ಕುಮಾರ್ ಪೋಟೋ, ಸಿಡಿಗಳೇ ತುಂಬಿ ತುಳುಕುತ್ತಾ ಇವೆ. ಇನ್ನೂ ಈತನ ಹವ್ಯಾಸ ಹಾಗೂ ಅಭಿಮಾನವನ್ನು ಕಂಡ ಇವರ ಮನೆಯವರು, ಅಕ್ಕಂದಿರು, ಮಕ್ಕಳು ಕೂಡಾ ರಾಜ್ ಕುಮಾರ್ ರವರ ಅಭಿಮಾನಿಗಳಾಗಿದ್ದಾರೆ.

ನಾಗೇಶ್ ಅನ್ನು ಮನೆಗೆ ಕರೆಸಿಕೊಂಡಿದ್ದ ಶಿವಣ್ಣ
ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣದ ಸುತ್ತಾ ಮುತ್ತಾ ಡಾ.ರಾಜ್ ಅಭಿಮಾನಿ ಎಂದೇ ಪರಿಚಿತರಾಗಿರುವ ನಾಗೇಶ್, ತಮ್ಮ ದೈನಂದಿನ ಚಟುವಟಿಕೆಗಳು ಡಾ.ರಾಜ್ ಮುಖ ದರ್ಶನ ದೊಂದಿಗೆ ಆರಂಭವಾಗಲೇ ಬೇಕು. ಡಾ.ರಾಜ್ ಬದುಕಿದ್ದಾಗ ಅವರನ್ನು ಭೇಟಿ ಮಾಡಿ ಅವರನ್ನು ಮುಟ್ಟಿ ಅವರ ಆಶಿರ್ವಾದ ಪಡೆಯಲಿಲ್ಲ ಎಂಬ ಕೊರಗು ನಾಗೇಶ್ ಅವರನ್ನು ಕಾಡುತ್ತಿದೆಯಂತೆ. ಆದರು ಡಾ.ರಾಜ್ ಮೇಲಿನ ಅಭಿಮಾನದ ಸುದ್ದಿಯು ಡಾ.ರಾಜ್ ಕುಮಾರ್ ಕುಟುಂಬಕ್ಕೆ ತಿಳಿದು ನಾಗೇಶ ಅವರನ್ನು ಕರೆಸಿಕೊಂಡ ದೊಡ್ಡಮನೆಯ ಸದಸ್ಯರು ನಾಗೇಶ್ ಬೆನ್ನು ತಟ್ಟಿ ಪ್ರೀತಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications











