"ಬಾಬರಿ ಮಸೀದಿ ಧ್ವಂಸದ ಬಳಿಕ ಅಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕಾನ್ಶಿರಾಮ್ ಪ್ರಸ್ತಾಪಿಸಿದ್ದರು"; ಚೇತನ್ ಅಹಿಂಸಾ
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಇದೀಗ ರಾಮಮಂದಿರ ಪುನರ್ ನಿರ್ಮಾಣವಾಗಿದೆ. ಪ್ರಧಾನಿ ಮೋದಿ ನೂತನ ರಾಮಮಂದಿರ ಲೋಕಾರ್ಪಣೆ ಮಾಡಿದ್ದಾರೆ. 7 ಸಾವಿರಕ್ಕೂ ಅಧಿಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಇನ್ನು ಅಸಂಖ್ಯಾತ ಭಕ್ತರು ಈ ಅಪರೂಪದ ಕ್ಷಣಗಳನ್ನು ಟಿವಿ ಪರದೆ, ಮೊಬೈಲ್ ಪರದೆಯಲ್ಲಿ ಕಣ್ತುಂಬಿಕೊಂಡಿದ್ದಾರೆ.
ಭಾರತದ ಖ್ಯಾತ ಉದ್ಯಮಿಗಳು, ಸಿನಿಮಾ ತಾರೆಯರು, ಕ್ರೀಡಾ ತಾರೆಯರು ಸೇರಿದಂತೆ ಸಾಕಷ್ಟು ಜನ ಅಯೋಧ್ಯೆ ರಾಮಮಂದಿರದ ಆವರಣದಲ್ಲಿ ಜಮಾಯಿಸಿ ಶ್ರೀರಾಮ ಪ್ರಾಣ ಪ್ರತಿಷ್ಟಾಪನ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಮುಖ್ಯ ಯಜಮಾನ ಸ್ಥಾನದಲ್ಲಿ ನಿಂತು ಪ್ರಧಾನಿ ಮೋದಿ ರಾಮಮಂದಿರ ಲೋಕಾರ್ಪಣೆ ಪೂಜೆ ವಿಧಿವಿಧಾನ ನೆರವೇರಿಸಿದರು. ಕನ್ನಡದ ಹೆಮ್ಮೆ ಅರುಣ್ ಯೋಗಿರಾಜ್ ಕೆತ್ತನೆಯ ರಾಮಚಂದ್ರ ಮೂರ್ತಿ ದೇವಾಲಯದಲ್ಲಿ ಪ್ರತಿಷ್ಟಾಪನೆಯಾಗಿದೆ.

ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಟಾಪನೆಯಾಗುತ್ತಿದ್ದಂತೆ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಜೈ ಶ್ರೀರಾಮ್ ಎನ್ನುವ ಘೋಷವಾಕ್ಯ ಮುಗಿಲು ಮುಟ್ಟಿತ್ತು. ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕೆಲವರಿಗೆ ಆಮಂತ್ರಣ ಸಿಕ್ಕರೂ ಕಾರಣಾಂತರಗಳಿಂದ ಭಾಗಿ ಆಗಲು ಸಾಧ್ಯವಾಗಲಿಲ್ಲ. ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಈ ಐತಿಹಾಸಿಕ ಕ್ಷಣಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ನಟ ಚೇತನ್ ಅಹಿಂಸಾ ಕೂಡ ರಾಮ ಪ್ರಾಣ ಪ್ರತಿಷ್ಟಾಪನೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಮಾನತಾವಾದಿ ಕಾನ್ಶಿರಾಮ್ ಹೇಳಿಕೆ ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.

"1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಸಮಾನತಾವಾದಿ ಕಾನ್ಶಿರಾಮ್ ಅಲ್ಲಿ ಮಸೀದಿ ಅಥವಾ ದೇವಸ್ಥಾನಕ್ಕಿಂತ ಬೃಹತ್ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ಪ್ರಸ್ತಾಪಿಸಿದರು. ಭಾರತವನ್ನು ಅತ್ಯುತ್ತಮವಾಗಿ ನಿರ್ಮಿಸಲು, ಸಮಾಜದ ಒಳಿತು ಯಾವಾಗಲೂ ಧಾರ್ಮಿಕ ತುಷ್ಟೀಕರಣವನ್ನು ಮೀರಬೇಕು. ವೈಚಾರಿಕತೆ ಮತ್ತು ಸತ್ಯ, ನಂಬಿಕೆ ಮತ್ತು ಮೂಢನಂಬಿಕೆಯನ್ನು ಸೋಲಿಸಬಹುದು" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











