ನಿಜವಾದ 'ಬುದ್ಧಿವಂತ'ರಾಗಿ: ಉಪೇಂದ್ರಗೆ ಪರೋಕ್ಷವಾಗಿ ತಿವಿದ ನಟ ಚೇತನ್
ಜಾತಿ ವ್ಯವಸ್ಥೆ ಬಗ್ಗೆ ಉಪೇಂದ್ರ ಆಡಿದ ಮಾತುಗಳಿಗೆ ಅಸಹಮತ ವ್ಯಕ್ತಪಡಿಸಿರುವ ನಟ ಚೇತನ್ ಅಹಿಂಸ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಉಪೇಂದ್ರ ಅವರ ಹೆಸರು ಹೇಳದೆ ಪರೋಕ್ಷವಾಗಿ ಮಾತಿನಿಂದ ಇರಿದಿದ್ದಾರೆ.
ತಮ್ಮ ಮೇಲಿನ ಟೀಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿದ್ದ ಉಪೇಂದ್ರ, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ 'ಜಾತಿ ಬಗ್ಗೆ ಮಾತನಾಡಿದರೆ ಅದನ್ನು ಬೆಳೆಸಿದಂತಾಗುತ್ತದೆ' ಎಂದಿದ್ದರು.
ಜಾತಿ ಬಗ್ಗೆ ಉಪೇಂದ್ರ ಹೇಳಿದ್ದ ಹೇಳಿಕೆಯ ವಿಷಯವಾಗಿ ಅಸಹಮತ ವ್ಯಕ್ತಪಡಿಸಿರುವ ಚೇತನ್ ಅಹಿಂಸ, 'ಒಬ್ಬ ಸೆಲೆಬ್ರಿಟಿ ತನ್ನ ವೈಚಾರಿಕ ಕೊರತೆಯಿಂದ ಆಡಿರುವ ಮಾತು ಕೇಳಿ ನನಗೆ ಅಸಮಾಧಾನ ಆಯಿತು. ಹಾಗಾಗಿ ಈ ವಿಡಿಯೋ ಮಾಡಿದ್ದೇನೆ. ಆ ಸೆಲೆಬ್ರಿಟಿ ಹೇಳಿದ್ದಾರೆ ಜಾತಿ ಬಗ್ಗೆ ಮಾತನಾಡಿದರೆ ಅದು ಜೀವಂತವಾಗಿ ಉಳಿಯುತ್ತೆ, ಮಾತನಾಡದೇ ಹೋದರೆ ಅದು ಹೊರಟು ಹೋಗುತ್ತೆ ಎಂದಿದ್ದಾರೆ. ಆದರೆ ಇದು ಹಾಸ್ಯಾಸ್ಪದ' ಎಂದು ಉಪೇಂದ್ರ ಹೆಸರು ಹೇಳದೆ ಮಾತನಾಡಿದ್ದಾರೆ ಚೇತನ್.
'ಭ್ರಷ್ಟಾಚಾರ, ಹೆಣ್ಣು ಭ್ರೂಣ ಹತ್ಯೆ, ಕೊರೊನಾ ಬಗ್ಗೆ ಮಾತನಾಡಿದರೆ ಅದು ಇರುತ್ತೆ ಮಾತನಾಡದೇ ಇದ್ದರೆ ಅದು ಹೊರಟು ಹೋಗಿಬಿಡುತ್ತದೆಯೇ? ಎಂದು ಪ್ರಶ್ನಿಸಿರುವ ಚೇತನ್. 'ಖಾಯಿಲೆ ಇದ್ದಾಗ ಅದನ್ನು ಗುರುತಿಸಬೇಕು, ಅದನ್ನು ತೆಗೆದು ಹಾಕಬೇಕು. ಜಾತಿ ವ್ಯವಸ್ಥೆ ಸಮಾಜಕ್ಕೆ ಅಂಟಿದ ಖಾಯಿಲೆ. ಅದನ್ನು ಗುರುತಿಸಿ ತೆಗೆದು ಹಾಕಬೇಕು. ಆದರೆ ಜಾತಿ ಅನಿಷ್ಟದ ಲಘುವಾಗಿ ಮಾತನಾಡಿರುವ ಆ ಸೆಲೆಬ್ರಿಟಿಯ ಪ್ರಬುದ್ಧತೆ ಎಷ್ಟಿದೆ ಎಂಬುದು ಇದರಿಂದಲೇ ಅರ್ಥವಾಗುತ್ತದೆ' ಎಂದಿದ್ದಾರೆ.

ಅವರು ತಮ್ಮ ಜಾತಿಯ ಪ್ರಚಾರ ಮಾಡುತ್ತಿದ್ದಾರೆ: ಚೇತನ್
'ಆ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಸ್ವಲ್ಪ ಸಂವಿಧಾನ ಓದಿ' ಎಂದು ವ್ಯಂಗ್ಯವಾಡಿರುವ ಚೇತನ್, 'ಆ ವ್ಯಕ್ತಿ ಹೇಳುತ್ತಾರೆ, ಬಡತನಕ್ಕೂ ಜಾತಿಗೂ ಸಂಬಂಧ ಕಲ್ಪಿಸಬೇಡಿ ಎಂದು. ಆದರೆ ಅವರು ಫೇಸ್ಬುಕ್ನಲ್ಲಿ ಹಾಕಿರುವ ಪೋಸ್ಟ್ನಲ್ಲಿಯೇ ಜಾತಿ ಇದೆ. ಅವರೇ ತಮ್ಮ ಜಾತಿಯನ್ನು ಪ್ರಚಾರ ಮಾಡಿದ್ದಾರೆ' ಎಂದಿದ್ದಾರೆ ಚೇತನ್. ಉಪೇಂದ್ರ ಅವರ ಅಣ್ಣ ಒಂದು ಸಮುದಾಯದ ಜನರಿಗೆ ದಿನಸಿ ವಿತರಣೆ ಮಾಡಿದ್ದನ್ನು ಜಾತಿ ಹೆಸರು ನಮೂದಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿದೆ.

'ಚೆರಂಡಿ ಸ್ವಚ್ಛ ಮಾಡುತ್ತಿರುವವರು ಜನಿವಾರ ಹಾಕಿದವರಲ್ಲ'
'ಬಡತನಕ್ಕೂ ಜಾತಿಗೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ನಮ್ಮ ದೇಶದಲ್ಲಿ ಬಡವರು ಯಾರು? ಗುಡಿಸಿಲಿನಲ್ಲಿ ವಾಸಿಸುತ್ತಿರುವವರು ಯಾರು? ಸ್ಲಂಗಳಲ್ಲಿ ಬದುಕುತ್ತಿರುವವರು ಯಾರು? ಚೆರಂಡಿ ಸ್ವಚ್ಛ ಮಾಡುತ್ತಿರುವವರು ಯಾರು? ಪೌರ ಕಾರ್ಮಿಕರು ಯಾರು? ಸ್ಮಶಾನ ಕಾರ್ಮಿಕರು ಯಾರು? ಸ್ವಂತ ಭೂಮಿ ಇಲ್ಲದೆ ಮನೆ-ಮನೆಗೆ ಹೋಗಿ ಕೂಲಿ ಮಾಡುತ್ತಿರುವವರು ಯಾರು? ಅವರೇನು ಜನೀವಾರು ಹಾಕಿಕೊಂಡವರಾ? ಅವರು ಪರಿಶಿಷ್ಟ ಜಾತಿ, ವರ್ಗ, ಶೂದ್ರ, ಅತಿ ಶೂದ್ರ, ಬಹುಜನ್ ಜನಗಳು ಎಂಬುದನ್ನು ನೀವು ನೆನಪಿಟ್ಟುಕೊಳ್ಳಿ' ಎಂದಿದ್ದಾರೆ ಚೇತನ್.

ಅರ್ಹತೆ ಇಲ್ಲದೆಯೂ ಸವಲತ್ತು ಪಡೆದಿದ್ದೀರಿ: ಚೇತನ್
'ಜಾತಿಗೂ, ಬಡತನಕ್ಕೂ ಇಷ್ಟು ಸಂಬಂಧ ಇದೆ ಎಂಬುದು ನಿಮಗೆ ಕಾಣುವುದಿಲ್ಲ ಎಂದರೆ ನಿಮಗೆ ಕುರುಡುತನ ಕಾಡುತ್ತಿದೆ ಎಂದರ್ಥ. ಬ್ರಾಹ್ಮಣ್ಯದ, ಜಾತಿವಾದದ ಕನ್ನಡಕದ ತೆಗೆದುಹಾಕಿ. ನಿಮ್ಮ ಗಾಜಿನ ಮನೆಯಿಂದ ಇಳಿದು ಬನ್ನಿ, ನಾವು ನಿಮಗೆ ಸತ್ಯ ತೋರಿಸುತ್ತೇವೆ. ನೀವು ಸಾವಿರಾರು ವರ್ಷ ಅರ್ಹತೆ ಇಲ್ಲದೆಯೂ ಜಾತಿ ಸವಲತ್ತು ಪಡೆದಿದ್ದೀರಿ. ನಾನೂ ಸಹ ನೂರಾರು ವರ್ಷ ಅರ್ಹತೆ ಇಲ್ಲದೆಯೂ ಜಾತಿ ಸವಲತ್ತು ಪಡೆದಿದ್ದೇನೆ' ಎಂದು ಕಿಡಿಕಾರಿದ್ದಾರೆ ಚೇತನ್.
Recommended Video

ನಿಜವಾದ ಬುದ್ಧಿವಂತರಾಗಿ: ಚೇತನ್
'ನಾನು ಜಾತಿ ಮೀರಿ, ಧರ್ಮ ಮೀರಿ ಪಕ್ಷ ಕಟ್ಟುತ್ತೀನಿ ಎನ್ನುತ್ತೀರಿ. ಕರ್ನಾಟಕದ ಹೋರಾಟದ ಚರಿತ್ರೆ ಒಮ್ಮೆ ಓದಿಕೊಳ್ಳಿ. ಬಸವಾದಿ ಶರಣದ ಚರಿತ್ರೆ ಓದಿ. ಇವರೆಲ್ಲ ಏನೇನು ಸಾಧನೆ ಮಾಡಿದ್ದಾರೆ ಓದಿಕೊಳ್ಳಿ. ನಿಮಗೆ ಪುಸ್ತಕ ಬೇಕೆಂದರೆ ಹೇಳಿ ನಾನೇ ನಿಮಗೆ ತಲುಪಿಸುತ್ತೇನೆ. ಹಾಗೆಯೇ ನಮ್ಮ ಸಂವಿಧಾನ ಓದಿಕೊಂಡು ನಿಜವಾದ ಬುದ್ಧಿವಂತರಾಗಿ' ಎಂದು ಉಪೇಂದ್ರಗೆ ಮಾತಿನ ಮೊನಚು ತಿವಿದಿದ್ದಾರೆ ಚೇತನ್.


Click it and Unblock the Notifications











