ಒಂದು ವರ್ಷದಲ್ಲಿ ರಿಲೀಸ್ ; ತಪ್ಪು ತಿದ್ದಿಕೊಂಡು ದರ್ಶನ್ ಉತ್ತಮ ಮನುಷ್ಯನಾಗಿ ಹೊರಬರಬೇಕು - ಚೇತನ್ ಅಹಿಂಸಾ
'ದರ್ಶನ್' ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಅವರದ್ದು. ಆದರೆ, ದುರ್ದೈವ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ದರ್ಶನ್, ಅ'ಪವಿತ್ರ' ಸಂಬಂಧಕ್ಕೆ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್ನ ತಾವೇ ಡ್ಯಾಮೇಜ್ ಮಾಡಿಕೊಂಡರು.
ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತೊಮ್ಮೆ ಸೆರೆವಾಸ ಅನುಭವಿಸುತ್ತಿದ್ದಾರೆ. ಕಳೆದೊಂದು ವರ್ಷದಿಂದ ಕತ್ತಲ ಕೋಣೆಯಲ್ಲಿ ದಿನ ನಿತ್ಯ ನರಕ ದರ್ಶನವೂ ಆಗ್ತಿದೆ. ಸಾಕ್ಷಿಗಳ ವಿಚಾರಣೆ ಬೇರೆ ಬೇಗ ನಡೆಯುತ್ತಿಲ್ಲ. ಇದೆಲ್ಲದರಿಂದ ಹೈರಾಣಾಗಿರುವ ದರ್ಶನ್ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ದಕ್ಕಿದ್ದು ನಿರಾಸೆಯೇ.

ಜಾಮೀನು ಕೇಳಿದ ತಪ್ಪಿಗೆ ಒಂದು ವರ್ಷ ದರ್ಶನ್ ಈಗ ಜೈಲಿಂದ ಕದಲದಂತಾಗಿದೆ. ಹೀಗಿರುವಾಗ ದರ್ಶನ್ ಬಹುಬೇಗ ಜೈಲಿನಿಂದ ಹೊರ ಬರುತ್ತಾರೆ ಎಂದು ನಟ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ. ಈ ಮೂಲಕ ಹಲವರನ್ನು ಅಚ್ಚರಿಗೆ ದೂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚೇತನ್, ಜೈಲು ವಾಸ ನಾವು ಅಂದುಕೊಂಡಷ್ಟು ಸುಲಭ ಅಲ್ಲ ಎಂದು ಹೇಳಿದ್ದಾರೆ.ಜೈಲಿನ ಕಂಬಿಗಳ ಹಿಂದೆ ಬದುಕುವುದು ತುಂಬಾ ಕಷ್ಟ ಎಂದು ಹೇಳಿರುವ ಚೇತನ್, ಅಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೇರೆ ಬೇರೆ ರೀತಿಯ ಸವಾಲುಗಳು ಮತ್ತು ಕಷ್ಟಗಳು ಎದುರಾಗುತ್ತವೆ ಎಂದಿದ್ದಾರೆ.
ಇದೇ ವೇಳೆ ದರ್ಶನ್ ಮುಂದಿನ ಕಾನೂನು ಹೋರಾಟದ ಕುರಿತು ಮಾತನಾಡಿರುವ ಚೇತನ್, ಇತ್ತೀಚೆಗೆ ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೆ. ಆ ವೇಳೆ ನನಗೆ ದರ್ಶನ್ ಅವರ ಪ್ರಕರಣದ ಕುರಿತು ಒಂದು ಟೈಮ್ಲೈನ್ ಸಿಕ್ಕಿದೆ ಎಂಬ ವಿಚಾರ ತಿಳಿಯಿತು ಎಂದು ಹೇಳಿದ್ದಾರೆ.
ಕಾನೂನಾತ್ಮಕ ಪ್ರಕ್ರಿಯೆಗಳನ್ನು ಗಮನಿಸಿದರೆ ಇನ್ನೊಂದು ವರ್ಷದ ಅವಧಿಯೊಳಗೆ ಜೈಲಿನಿಂದ ದರ್ಶನ್ ಹೊರಬರಬಹುದು ಎಂದು ವಕೀಲರು ಅಭಿಪ್ರಾಯಪಡುತ್ತಿದ್ದಾರೆ ಎಂದು ಹೇಳಿರುವ ಚೇತನ್, ಉತ್ತಮ ವ್ಯಕ್ತಿಯಾಗಿ ಬಂದರೆ ಚಿತ್ರರಂಗಕ್ಕೆ ಒಳ್ಳೆಯದು ಎಂದಿದ್ದಾರೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಈ ಪ್ರಕರಣದಲ್ಲಿ ಆರೋಪಿ ಮಾತ್ರ. ಅಪರಾಧಿಯಲ್ಲ. ಒಂದು ವೇಳೆ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದರೆ,ಮುಂದೇನು..? ಈ ಕುರಿತು ಕೂಡ ಮಾತನಾಡಿರುವ ಚೇತನ್ ಅಹಿಂಸಾ, ಒಂದು ವೇಳೆ ದರ್ಶನ್ ಅವರದ್ದು ಈ ಪ್ರಕರಣದಲ್ಲಿ ತಪ್ಪಿರುವುದು ಸಾಬೀತಾದರೆ, ಅವರು ಆ ತಪ್ಪನ್ನು ತಿದ್ದಿಕೊಳ್ಳಬೇಕು. ಜೈಲಿನಿಂದ ಒಬ್ಬ ಉತ್ತಮ ಮನುಷ್ಯನಾಗಿ ಹೊರಬಂದರೆ, ಅವರು ಮತ್ತೆ ಚಿತ್ರರಂಗಕ್ಕೆ ಗೌರವಯುತವಾಗಿ ವಾಪಸ್ ಬಂದು ತಮ್ಮ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ಇದು ನಡೆದರೆ ನಿಜಕ್ಕೂ ನಮಗೆಲ್ಲರಿಗೂ ಒಳ್ಳೆಯದೇ ಎಂದಿದ್ದಾರೆ.
ಅಂದ್ಹಾಗೇ ದರ್ಶನ್ ಮೊದಲ ಬಾರಿ ಈ ಪ್ರಕರಣದಲ್ಲಿ ಜೈಲು ಪಾಲಾದಾಗ, ಕೈಯಲ್ಲಿ ಸಿಗರೇಟ್ ಮತ್ತು ಕಾಫಿ ಮಗ್ ಹಿಡಿದುಕೊಂಡು ಕುಂತಿದ್ದ ಸಮಯದಲ್ಲಿ ಕೂಡ ಚೇತನ್ ಪ್ರತಿಕ್ರಿಯೆ ನೀಡಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಇತ್ತೀಚಿನ ಚಿತ್ರವೊಂದು ತೋರಿಸುತ್ತದೆ. ನನ್ನ 2 ಬಾರಿ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನು ನೋಡಿದ 1,000ಕ್ಕೂ ಹೆಚ್ಚು ಕೈದಿಗಳಲ್ಲಿ, ಈ ಫೋಟೋದಲ್ಲಿ ದರ್ಶನ್ ರಂತೆ ಒಬ್ಬರಿಗೂ ಕುರ್ಚಿ, ಟೇಬಲ್, ಮಗ್, ಚಹಾ/ಕಾಫಿ, ಕರವಸ್ತ್ರ ಅಥವಾ ಸಿಗರೇಟ್ ಸಿಗಲಿಲ್ಲ. ಈ ಚಿತ್ರವು ನಿಜವಾಗಿದ್ದರೆ, ಹಣ ಮತ್ತು ಪ್ರಭಾವವು ಅದ್ಭುತಗಳನ್ನು ಮಾಡುತ್ತವೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.


Click it and Unblock the Notifications