ಡಾ. ರಾಜ್ ಪುಣ್ಯಭೂಮಿ ಜಾಗದ ಬಗ್ಗೆ ಚೇತನ್ ಅಹಿಂಸಾ ಕ್ಯಾತೆ; ದೊಡ್ಮನೆ ಅಭಿಮಾನಿಗಳು ಕೆಂಡ
ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಿದ್ದಾರೆ. ಇದ್ದಕ್ಕಿದಂತೆ ಡಾ. ರಾಜ್ಕುಮಾರ್ ಸಮಾಧಿ ಜಾಗದ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ. ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಪುಣ್ಯಭೂಮಿ ಬಗ್ಗೆ ಕ್ಯಾತೆ ತೆಗೆದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು(ಏಪ್ರಿಲ್ 24) ದಿ. ನಟ ಡಾ.ರಾಜ್ಕುಮಾರ್ ಅವರ 97ನೇ ಜನ್ಮದಿನ. ಸಾಕಷ್ಟು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ವಾರ್ತಾ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಘಣ್ಣ ಕುಟುಂಬದವರು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೆಲ್ಲದರ ನಡುವೆ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗ್ತಿದೆ.

"ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ" ಎಂದು ಚೇತನ್ ಮಾತು ಆರಂಭಿಸಿದ್ದಾರೆ. "ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ 'ಸಮಾಧಿ ಕಾಂಪ್ಲೆಕ್ಸ್'ಕ್ಕಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ" ಎಂದು ಬರೆದುಕೊಂಡಿದ್ದಾರೆ.
ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಸರ್ಕಾರ ಈ ರೀತಿ ಮಾಡಿದೆ ಎಂದು ಚೇತನ್ ಆರೋಪಿಸಿದ್ದಾರೆ. "21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು..ಮತಕ್ಕಾಗಿ ಅಲ್ಲ" ಎಂದು ಹೇಳಿದ್ದಾರೆ. ಚೇತನ್ ಪೋಸ್ಟ್ ಬಗ್ಗೆ ಅಭಿಮಾನಿಗಳು ಗರಂ ಆಗಿದ್ದಾರೆ. ಕಾಮೆಂಟ್ ಬಾಕ್ಸ್ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೆಹಲಿ ಮಧ್ಯಭಾಗದಲ್ಲಿ ಗಾಂಧಿ, ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಸಮಾಧಿಗೆ ಜಾಗ ಕೊಟ್ಟದ್ದಾರೆ, ಅದನೆಲ್ಲಾ ಯಾಕೆ ಕೇಳಲ್ಲ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ದೇಶವನ್ನು ಲೂಟಿ ಮಾಡುವವರ ಬಗ್ಗೆ ಮಾತನಾಡಲ್ಲ, ಅಣ್ಣಾವ್ರ ಬಗ್ಗೆ ಮಾತನಾಡುತ್ತೀಯಾ ಎಂದು ಮತ್ತೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಅಣ್ಣಾವ್ರ ಸಾಧನೆ ಬಗ್ಗೆ ಚೇತನ್ ಅವರಿಗೆ ಕೆಲವರು ಪಾಠ ಮಾಡಿದ್ದಾರೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಕಂಠೀರವ ಸ್ಟುಡಿಯೋ ಇದೆ. ಕನ್ನಡದ ಸಿನಿಮಾಗಳ ಚಿತ್ರೀಕರಣ ಅಲ್ಲಿ ನಡೆಯುತ್ತದೆ. ಸ್ಟುಡಿಯೋದ ಒಂದು ಭಾಗದಲ್ಲಿ ಡಾ. ರಾಜ್ಕುಮಾರ್ ಸಮಾಧಿ ಇದೆ. ಅದರ ಪಕ್ಕದಲ್ಲೇ ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಸಮಾಧಿ ಕೂಡ ಇದೆ. 5 ವರ್ಷಗಳ ಹಿಂದೆ ಅಗಲಿದ ಅಣ್ಣಾವ್ರ ಮುದ್ದಿನ ಮಗ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಕೂಡ ಅಲ್ಲಿದೆ. ಇನ್ನು ಕಂಠೀರವ ಸ್ಟುಡಿಯೋ ಕಾಂಪೌಂಡ್ ಒಳಭಾಗದಲ್ಲಿ ನಟ ಅಂಬರೀಷ್ ಸ್ಮಾರಕ ಕೂಡ ಇದೆ.
ಅಣ್ಣಾವ್ರ ಜಯಂತೋತ್ಸವ ಹಿನ್ನೆಲೆಯಲ್ಲಿ ಅಭಿಮಾನಿಗಳು, ತಾರೆಯರು, ರಾಜಕೀಯ ಮುಖಂಡರು ಸೋಶಿಯಲ್ ಮೀಡಿಯಾದಲ್ಲಿ ನುಡಿನಮನ ಸಲ್ಲಿಸಿದ್ದಾರೆ. "ಬರೀ ನಟನಾಗಿ ಮಾತ್ರವಲ್ಲ. ಕನ್ನಡದ ಕಟ್ಟಾಳುವಾಗಿ ರಾಜಣ್ಣ ಎಂದಿಗೂ ಸ್ಫೂರ್ತಿ" ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿ "ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ರತ್ನ, ಸರಳತೆಯ ಸಾಕಾರಮೂರ್ತಿ ಹಾಗೂ ಅಭಿಮಾನಿಗಳನ್ನೇ ದೇವರು ಎಂದು ನಂಬಿದ ಡಾ. ರಾಜ್ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ತಮ್ಮ ಅದ್ಭುತ ಅಭಿನಯ ಮತ್ತು ಕನ್ನಡ ಪರ ಹೋರಾಟಗಳ ಮೂಲಕ ಅಣ್ಣಾವ್ರು ನಾಡಿಗೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ" ಬರೆದುಕೊಂಡಿದ್ದಾರೆ.
"ಕರುನಾಡ ಸಾಂಸ್ಕೃತಿಕ ರಾಯಭಾರಿ, ಗಾನಗಂಧರ್ವ, ವರನಟ ಡಾ. ರಾಜ್ಕುಮಾರ್ ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿ ನಮಿಸುತ್ತೇನೆ. ಜನ್ಮದಿನದ ಅಂಗವಾಗಿ ಅಣ್ಣಾವ್ರಿಗೆ ನನ್ನ ನಮನಗಳು" ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications