"ಕಾಲು ಅಶುದ್ಧ ಅಲ್ಲ.. ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ವಿಶ್ರಾಂತಿ ಪಡೀತಿದ್ದ ಅಷ್ಟೇ": ಚೇತನ್ ಅಹಿಂಸಾ
ಪ್ರಪಂಚದ ಆಗುಹೋಗುಗಳ ಬಗ್ಗೆ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ತಮ್ಮ ಹೇಳಿಕೆಗಳು, ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಂದ ಕೆಲವೊಮ್ಮೆ ಸಂಕಷ್ಟ ಕೂಡ ಎದುರಿಸಿದ್ದಾರೆ. ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಬಗ್ಗೆ ಚೇತನ್ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು.
"ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು" ಎಂದು ಚೇತನ್ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಬಗ್ಗೆ ಪರ, ವಿರೋಧ ಚರ್ಚೆಗಳು ನಡೀತಿದೆ.

ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಚೇತನ್ ಅಹಿಂಸಾ ಮಾತನಾಡಿ "ಸದ್ಯ ಭಾರತೀಯ ಕ್ರಿಕೆಟ್ ತಂಡದಲ್ಲಿ ಶೇಕಡಾ 70 ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ. ಹೀಗಾಗಿ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಜಾರಿಯಾಗಬೇಕು. ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ ಭಾರತ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ತೋರುತ್ತದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ 2016ರಿಂದ 6 ಮಂದಿ ಕರಿಯರಿಗೆ ಮೀಸಲಾತಿ ನೀಡುತ್ತಾ ಬರ್ತಿದ್ದಾರೆ. ಅದೇ ರೀತಿ ಭಾರತ ತಂಡದಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಕೊಟ್ಟರೆ ತಂಡ ಉತ್ತಮವಾಗುತ್ತದೆ ಎಂದಿದ್ದರು.
ಅದೇ ಮಾತನ್ನು ಪುನರುಚ್ಚರಿಸಿ ಭಾರತ ಕ್ರಿಕೆಟ್ ತಂಡ ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಸೋಲುತ್ತಿದ್ದಂತೆ ಚೇತನ್ ಪೋಸ್ಟ್ ಮಾಡಿದ್ದರು. ಇನ್ನು ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ತಮ್ಮ ತಂಡ ಗೆದ್ದ ವಿಶ್ವಕಪ್ ಮೇಲೆ ಕಾಲಿಟ್ಟು ಉದ್ದಟತನ ತೋರಿಸಿದ್ದರು. ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಮಾರ್ಷ್, ತನಗೆ ಸಿಕ್ಕ ಮೆಡೆಲ್ ಅನ್ನು ಕೊರಳಿಗೆ ಹಾಕಿಕೊಂಡು ವಿಶ್ವಕಪ್ ಮೇಲೆ ಕಾಲು ಚಾಚಿ ಕುಳಿತ ಫೋಟೊ ವೈರಲ್ ಆಗಿದೆ. ಈ ಬಗ್ಗೆ ಕೂಡ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ವಿಶ್ವಕಪ್ ಬಹಳ ಪ್ರತಿಷ್ಠಿತ ಕ್ರೀಡಾಕೂಟ. 10 ದೇಶದ ತಂಡಗಳು ಇದರಲ್ಲಿ ಭಾಗಿ ಆಗಿದ್ದವು. ಹಲವು ವರ್ಷಗಳಿಂದ 4 ವರ್ಷಕ್ಕೊಮ್ಮೆ ಈ ಟೂರ್ನಿ ನಡೆಯುತ್ತಿದೆ. ವಿಶ್ವಕಪ್ ಗೆಲ್ಲಲು ಸಾಧ್ಯವಾಗದೇ ಸಾಕಷ್ಟು ತಂಡಗಳು ಪರಿತಪಿಸುತ್ತಿವೆ. ಭಾರತ ತಂಡ ಈ ವರ್ಷ ಟ್ರೋಫಿ ಎತ್ತಿ ಹಿಡಿಯಲಿಲ್ಲ ಎಂದು ಅಸಂಖ್ಯಾತ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಂತಹ ಟ್ರೋಫಿಯನ್ನು ಮಿಚೆಲ್ ಮಾರ್ಷ್ ಕಾಲಡಿ ಇಟ್ಟುಕೊಂಡು ವಿಶ್ರಾಂತಿ ಪಡೆಯುವುದು ಸರಿಯಲ್ಲ. ಆ ಟ್ರೋಫಿಗೆ ಗೌರವ ಕೊಡುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.

ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಬಗ್ಗೆ ಚೇತನ್ ಅಹಿಂಸಾ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. "ವಿಶ್ವಕಪ್ ಟ್ರೋಫಿಯ ಮೇಲೆ ಕಾಲಿಟ್ಟಿರುವ ಚಿತ್ರದೊಂದಿಗೆ ಆಸ್ಟ್ರೇಲಿಯಾದ ಕ್ರಿಕೆಟಿಗನೊಬ್ಬ ಸುದ್ದಿಯಲ್ಲಿದ್ದಾರೆ. ಬಲಗೈ ಮತ್ತು ಎಡಗೈ ಅಥವಾ ತಲೆ ಮತ್ತು ಕಾಲುಗಳಂತಹ ದೇಹದ ಭಾಗಗಳು 'ಶುದ್ಧ ಅಥವಾ ಅಶುದ್ಧವಾಗಿವೆ' ಎಂಬ ಬ್ರಾಹ್ಮಣ್ಯದ ಶ್ರೇಣಿಕೃತ ವ್ಯವಸ್ಥೆಯ ಕಲ್ಪನೆಯು ಭಾರತೀಯ ಬಹುಸಂಖ್ಯಾತ ಸಂಸ್ಕೃತಿಯಾಗಿದೆ"
"ಪಶ್ಚಿಮದಲ್ಲಿ, ಜನರು ಮನೆಯೊಳಗೆ ಮತ್ತು ಮಲಗುವ ಕೋಣೆಯಲ್ಲಿಯೂ ಶೂಗಳನ್ನು ಧರಿಸುತ್ತಾರೆ. ಆಸ್ಟ್ರೇಲಿಯಾದ ಆಟಗಾರನಿಗೆ, ಟ್ರೋಫಿಯ ಮೇಲೆ ಕಾಲುಗಳನ್ನು ಇಡುವುದು ಅಗೌರವವಾಗಿರಲಿಲ್ಲ; ಅದು ಕೇವಲ ಅವರ ವಿಶ್ರಾಂತಿ ಆಗಿತ್ತು" ಎಂದು ಚೇತನ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ.
"ಭಾರತ ಭಾವನಾತ್ಮಕ ಪ್ರಪಂಚ ನಿಮ್ಮ ಪಾಶ್ಚಿಮಾತ್ಯ ಪರಂಪರೆಯ ಅನರ್ಥಗಳನ್ನು ಇಲ್ಲಿ ಹೇರಬೇಡಿ ಚೇತನ್. ಪಾಶ್ವಾತ್ಯರು ತಮ್ಮ ಜೀವಿತಾವಧಿಯಲ್ಲಿ ನಾಲ್ಕಾರು ಸಂಗಾತಿಗಳೊಂದಿಗೆ ಬದುಕುತ್ತಾರೆ ಅಂತಹವುಗಳನ್ನೆಲ್ಲಾ ನಿಮ್ಮಂತಹವರು ಸ್ವೇಚ್ಛಾಚಾರ ಎಂದು ಬಣ್ಣಿಸುತ್ತೀರಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











