ಟೆಕ್ನಿಕಲಿ ನಾನು ಭಾರತೀಯ.. ನಾನು ಭಾರತದ ಪೌರತ್ವ ಪಡೆಯಲು ಕೆಲವರು ಬಿಡ್ತಿಲ್ಲ; ಚೇತನ್ ಅಹಿಂಸಾ
ಕನ್ನಡ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಪದೇ ಪದೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಪ್ರಪಂಚದ ಎಲ್ಲಾ ಆಗುಹೋಗುಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಚರ್ಚೆ ಹುಟ್ಟಾಕುತ್ತಾರೆ. ಕೆಲವೊಮ್ಮೆ ಅವರ ಹೇಳಿಕೆಗಳು ವಿವಾದದ ಕಿಡಿ ಹೊತ್ತಿಸುತ್ತವೆ. ಇತ್ತೀಚೆಗೆ ಡಾ. ರಾಜ್ ಪುಣ್ಯಭೂಮಿ ಜಾಗದ ಬಗ್ಗೆ ಚಕಾರ ಎತ್ತಿ ಚೇತನ್ ಸುದ್ದಿ ಆಗಿದ್ದರು.
ಚೇತನ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಡಾ. ರಾಜ್ಕುಮಾರ್ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸಾರಾ ಗೋವಿಂದು ಬಾಯಿಗೆ ಬಂದಂತೆ ಮಾತನಾಡಿ ಚರ್ಚೆ ಹುಟ್ಟಾಕ್ಕಿದ್ದರು. ಇದೊಂದೇ ಅಲ್ಲ, ಸಾಕಷ್ಟು ಸಂದರ್ಭಗಳಲ್ಲಿ ಚೇತನ್ ಹೇಳಿಕೆಗಳು ಚರ್ಚೆಗೆ ಗ್ರಾಸವಾಗುತ್ತದೆ. ಇದೇ ಕಾರಣಕ್ಕೆ ಬಾರೀ ಟ್ರೋಲ್ ಕೂಡ ಎದುರಿಸುವಂತಾಗಿದೆ. ಚಿಕಾಗೊ ಚೇತನ್, ವಿದೇಶಿ ತಳಿ ಚೇತನ್ ಎಂದು ಮೂದಲಿಸುತ್ತಾರೆ. ವೀಸಾ, ಪಾಸ್ಪೋರ್ಟ್ ಕೇಳ್ತಾರೆ. ಭಾರತೀಯ ಪೌರತ್ವದ ಬಗ್ಗೆಯೂ ಪ್ರಶ್ನೆ ಮಾಡ್ತಾರೆ. ಅದಕ್ಕೆಲ್ಲಾ ಚೇತನ್ ಉತ್ತರಿಸಿದ್ದಾರೆ.

ಜನ ನನ್ನನ್ನು ಹೇಗೆ ಬೇಕಾದರೂ ಟೀಕಿಸಲಿ ನನಗೆ ಬೇಸರವಿಲ್ಲ. ಆದರೆ ಟೆಕ್ನಿಕಲಿ ನಾನು ಭಾರತೀಯ ಎಂದು ಚೇತನ್ ಹೇಳಿದ್ದಾರೆ. 'ಕರ್ನಾಟಕ ನ್ಯೂಸ್ ಬೀಟ್' ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಜನ ಏನೇ ಅಂದ್ರು ನನಗೆ ನೋವಾಗಲ್ಲ. ನಾನು ಹುಟ್ಟಿದ್ದು ಚಿಕಾಗೋದಲ್ಲೇ. 18 ವರ್ಷ ಅಲ್ಲೇ ಇದ್ದೆ. ಟೆಕ್ನಿಕಲಿ ನೋಡಿದ್ರೆ, 1382ಕ್ಕೂ ಮುಂಚೆ ಹುಟ್ಟಿರುವವರ ತಂದೆ-ತಾಯಿ ಭಾರತದ ಪೌರತ್ವ ಹೊಂದಿದ್ರೆ, ಅವ್ರ ಮಕ್ಕಳು ಹುಟ್ಟಿದ ತಕ್ಷಣ ಅವ್ರು ಭಾರತೀಯರು ಎನ್ನುವ ಭಾರತದ ಸಂವಿಧಾನದಲ್ಲಿದೆ. ನಾನು 1983ರಲ್ಲಿ ಹುಟ್ಟಿದ್ದು. ಆಗ ನಮ್ಮ ತಂದೆ- ತಾಯಿ ಭಾರತದ ಪೌರತ್ವ ಹೊಂದಿದ್ರು. ಹಾಗಾಗಿ ಟೆಕ್ನಕಲಿ ನಾನು ಭಾರತೀಯ" ಎಂದಿದ್ದಾರೆ.
ನಾನು ಚಿಕಾಗೊದಲ್ಲಿ ಹುಟ್ಟಿದ್ದರಿಂದ, ಅಲ್ಲೇ ಇದ್ದಿದ್ದರಿಂದ ಅಮೆರಿಕಾ ಪಾಸ್ಪೋರ್ಟ್ ಸಿಕ್ತು. ಆದರೆ ಕಳೆದ 8-10 ತಿಂಗಳಿನಿಂದ ಭಾರತದ ಪೌರತ್ವ ಬೇಕು, ಅಮೆರಿಕಾ ಪಾಸ್ಪೋರ್ಟ್ ಬೇಡ ಅಂತ ಅರ್ಜಿ ಹಾಕಿದ್ದೀನಿ. ಕೆಲ ಪಟ್ಟಬದ್ಧ ಹಿತಾಸಕ್ತಿಗಳು, ಆಳುವ ವರ್ಗದವರು ಅದಕ್ಕೆ ಅಡ್ಡ ಬರ್ತಿದ್ದಾರೆ. ಬರಲಿ, ನಾನು ಕಾನೂನಿನ ಮೂಲಕ ಹೋರಾಟ ಮಾಡ್ತೀನಿ. ಸುಖಾಸುಮ್ಮನೆ ಈ ವಿಚಾರ ಎಳೆದು ತರ್ತಿದ್ದಾರೆ. ನಮ್ಮ ತಾತ, ಅಜ್ಜಿ, ಮುತ್ತಾತ, ಮುತ್ತಜ್ಜಿ ಎಲ್ಲರೂ ಇದೇ ಕನ್ನಡ ಮಣ್ಣಿನವರು. ಕನ್ನಡ ಮಣ್ಣಿಗೆ ನಾನು ಮರಳಿ ಏನಾದರೂ ಕೊಡಬೇಕು. ಅಪ್ಪ, ಅಮ್ಮ ಇಲ್ಲಿ ಹುಟ್ಟಿ ಬೆಳೆದು ಓದಿ ಅಮೆರಿಕಾಗೆ ಹೋಗಿ ಸಾಧಿಸಿದರು" ಎಂದು ಚೇತನ್ ತಿಳಿಸಿದ್ದಾರೆ.
ನಮ್ಮ ಅಪ್ಪ ಅಮ್ಮ ಅವರದ್ದು ಕರ್ನಾಟಕ. ಹಾಗಾಗಿ ಈ ಕನ್ನಡ ಮಣ್ಣಿಗೆ ಮರಳಿ ನಾನು ಋಣ ತೀರಿಸಬೇಕು. ಚಿಕಾಗೋದಲ್ಲಿ ಹುಟ್ಟಿದ್ರು, ಭಾರತದ ಪೌರತ್ವ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿದ್ದೀನಿ. ಜೀವನಪರ್ಯಂತ ಕರ್ನಾಟಕದಲ್ಲಿ ಇದ್ದು ಸೇವೆ ಮಾಡಲು ಬಯಸುತ್ತೇನೆ ಎಂದು ಚೇತನ್ ಅಹಿಂಸಾ ವಿವರಿಸಿದ್ದಾರೆ.
'ಆ ದಿನಗಳು' ಸಿನಿಮಾ ಮೂಲಕ ಚೇತನ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಬಿರುಗಾಳಿ, ಸೂರ್ಯಕಾಂತಿ, ಮೈನಾ, ನೂರೊಂದು ನೆನಪು, ಅತಿರಥ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದರು. '100 ಕ್ರೋರ್ಸ್' ಚೇತನ್ ನಟಿಸಿದ ಕೊನೆಯ ಸಿನಿಮಾ. ಬಳಿಕ ಯಾವುದೇ ಚಿತ್ರದಲ್ಲಿ ಅವರು ನಟಿಸಲಿಲ್ಲ. ಸದ್ಯ ಸಾಮಾಜಿಕ ಹೋರಾಟದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಂದುತ್ವ ಹಾಗೂ ಹಿಂದೂ ಧರ್ಮದ ವಿರುದ್ಧ ಕೆಟ್ಟದಾಗಿ ಪೋಸ್ಟ್ ಮಾಡಿದ್ದಕ್ಕೆ 3 ವರ್ಷಗಳ ಹಿಂದೆ ಚೇತನ್ ಬಂಧನವಾಗಿತ್ತು. ಬಳಿಕ ಜಾಮೀನು ಪಡೆದಿದ್ದರು.


Click it and Unblock the Notifications