ಮತ್ತೆ ವಿವಾದದಲ್ಲಿ ಚೇತನ್ ಅಹಿಂಸಾ: ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದ ನಟ!
ಸಿನಿಮಾ ಬಿಟ್ಟು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟ ಚೇತನ್ ಅಹಿಂಸಾ ಮತ್ತೆ ವಿವಾದಿತ ಹೇಳಿಕೆ ನೀಡಿದ್ದಾರೆ. 'ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ.... ಗಾಂಧಿವಾದವನ್ನು ಕಿತ್ತೊಗೆಯಬೇಕು..' ಎನ್ನುವಂತಹ ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
'ಆ ದಿನಗಳು', ಮೈನಾ ಖ್ಯಾತಿಯ ನಟ ಚೇತನ್ ಅಹಿಂಸಾ ತಮ್ಮ ಸಿನಿಮಾಗಳ ಆಚೆಗೆ ಸಾಮಾಜಿಕ ಕೆಲಸಗಳು ಮತ್ತು ಹೋರಾಟಗಳಿಂದ ಗುರುತಿಸಿಕೊಂಡವರು. ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಹಲವು ಗಾಂಧಿವಾದಿಗಳ ವಿರುದ್ಧ ಮಾತನಾಡುವ ಅವರು, ಈಗ ಮತ್ತೆ ವಿವಾದದಲ್ಲಿದ್ದಾರೆ.

ಗಾಂಧಿವಾದವನ್ನು ಕಿತ್ತೊಗೆಯಬೇಕು: ಚೇತನ್ ಅಹಿಂಸಾ
ಗಾಂಧಿವಾದದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, "ಗಾಂಧಿಯವರ 'ಧಾರ್ಮಿಕ ಸಾಮರಸ್ಯ' ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ" ಎಂದು ಕಿಡಿಕಾರಿದ್ದಾರೆ.
"ಖಾಸಗಿಯಾಗಿ, ನಾವೆಲ್ಲರೂ ಧರ್ಮದ ಹಕ್ಕನ್ನು ಹೊಂದಿದ್ದೇವೆ (ಆರ್ಟಿಕಲ್ 25). ಸಾರ್ವಜನಿಕವಾಗಿ, ನಾವು ಜಾತ್ಯತೀತ ರಾಷ್ಟ್ರ. ಅಂದರೆ ಧರ್ಮದಿಂದ ದೂರ ಉಳಿಯುವುದು. 'ಧಾರ್ಮಿಕ ಸಾಮರಸ್ಯ' ಎಂದರೆ ಅಸಮಾನತೆಯ ಸಂರಕ್ಷಣೆ. ಹೀಗಾಗಿ ಗಾಂಧಿವಾದವನ್ನು ಕಿತ್ತೊಗೆಯಬೇಕು" ಎಂದು ಬರೆದುಕೊಂಡಿದ್ದಾರೆ.
ಚೇತನ್ ಹೇಳಿಕೆಗೆ ಪರ-ವಿರೋಧ ಪ್ರತಿಕ್ರಿಯೆ
ನಟ ಚೇತನ್ ಅವರ ಗಾಂಧಿವಾದದ ಕುರಿತ ಹೇಳಿಕೆಗೆ ಪರ- ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವು ಮಂದಿ ಅವರ ಅಭಿಪ್ರಾಯಕ್ಕೆ ಹೌದು ಎಂದಿದ್ದರೇ ಮತ್ತೆ ಕೆಲವರು ನೀವು ಗಾಂಧಿ ಅವರನ್ನು ಮತ್ತಷ್ಟು ತಿಳಿದುಕೊಳ್ಳಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನೆಟ್ಟಿಗರೊಬ್ಬರು, "ಚೇತನ ಅವರೇ ನೀವು ಗಾಂಧೀಜಿ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆನೊ ಅನ್ನೋದು ನನ್ನ ಅಭಿಪ್ರಾಯ. ಗಾಂಧೀಜಿಯವರು ತಾನು ತಿಳಿದುಕೊಂಡಿದ್ದು ತಪ್ಪೇಂದು ಗೊತ್ತಾದಾಗ ಹೊಸ ಅಭಿಪ್ರಾಯಕ್ಕೆ ಪರಿವರ್ತನೆಗೊಂಡ ವ್ಯಕ್ತಿ. ಶ್ರೇಣಿಕೃತ ಸಮಾಜದ ಬಗ್ಗೆ ನನಗೇನು ತಕರಾರ್ ಇಲ್ಲ ಅಂತ ಹೇಳಿದರೂ ಕೂಡ ಮುಂದೆ ಅದು ತಪ್ಪೇಂದು ಗೊತ್ತಾದಾಗ ನಾನು ಅಂತರ್ಜಾತಿ ವಿವಾಹಗಳಿಗೆ ಮಾತ್ರ ಹೋಗುತ್ತೇನೆ ಎಂದು ಬದಲಾವಣೆ ಆದ ವ್ಯಕ್ತಿ" ಎಂದು ಕಾಮೆಂಟ್ ಮಾಡಿದ್ದಾರೆ.
ಸಾವರ್ಕರ್ ಮತ್ತು ಗಾಂಧಿ ಇಬ್ಬರೂ ನಮ್ಮ ಸೈದ್ಧಾಂತಿಕ ಶತ್ರುಗಳು!
ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ವಿ.ಡಿ ಸಾವರ್ಕರ್ ಫೋಟೋ ತೆಗೆಯುವ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಚೇತನ್ ಅಹಿಂಸಾ, "ಪ್ರಿಯಾಂಕ್ ಖರ್ಗೆ ಹೇಳುತ್ತಾರೆ, 'ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ; ಅದನ್ನು ನನಗೆ ಬಿಟ್ಟರೆ ಇವತ್ತೇ ತೆಗೆಯುತ್ತೇನೆ" ಎಂದು ಕಾಂಗ್ರೆಸ್ ಮತ್ತು ಖರ್ಗೆಯವರಿಗೆ ಸಾವರ್ಕರ್ ಸೈದ್ಧಾಂತಿಕ ಶತ್ರುವಾಗಿರಬಹುದು; ನಮ್ಮಂತ ಸಮಾನತಾವಾದಿಗಳಿಗೆ, ಸಾವರ್ಕರ್ ಮತ್ತು ಗಾಂಧಿ ಇಬ್ಬರೂ ನಮ್ಮ ಸೈದ್ಧಾಂತಿಕ ಶತ್ರುಗಳು" ಎಂದು ಹೇಳಿದ್ದರು.
ಜೊತೆಗೆ,. "ನೀವು ಸಾವರ್ಕರ್ ಮತ್ತು ಗಾಂಧಿ ಇಬ್ಬರ ಫೋಟೋಗಳನ್ನು ತೆಗೆದುಹಾಕುವುದು ಸೂಕ್ತ. ಇಲ್ಲವಾದರೆ, ಇಬ್ಬರನ್ನೂ ಇಟ್ಟುಕೊಳ್ಳಿ ಮತ್ತು ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್ ಅವರ ಭಾವಚಿತ್ರವನ್ನು ಸೇರಿಸಿ" ಎಂದು ಸಲಹೆ ಕೂಡ ನೀಡಿದ್ದರು. ಇನ್ನು, ಇತ್ತೀಚೆಗೆ ವೆಂಬರ್ 19 ರಂದು ಅಹಮದಾಬ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಾಣಲು ಮೀಸಲಾತಿ ಇಲ್ಲದಿರುವುದು ಕಾರಣ ಎಂದು ಹೇಳಿದ್ದರು.


Click it and Unblock the Notifications











